
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ಏಕದಿನ ಸರಣಿಯ ಎರಡನೇ ಪಂದ್ಯ ಬುಧವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದ್ದು ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದು ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. "ಅಂತಿಮ ಹಂತದಲ್ಲಿ 51 ರನ್ಗಳ ಜೊತೆಯಾಟವನ್ನು ತಡೆಯಬೇಕಾಗಿತ್ತು ನಿಜ. ಆದರೆ ಅದಕ್ಕೂ ಮುನ್ನ ಅವರು 9 ವಿಕೆಟ್ಗಳನ್ನು ಪಡೆದುಕೊಂಡಿದ್ದರು. ಅದ್ಭುತವಾಗಿ ಬೌಲಿಂಗ್ ನಡೆಸಿದ್ದರು. ರಾಹುಲ್ ಆ ಕ್ಯಾಚ್ ಪಡೆಯಲು ಸಾಧ್ಯವಾಗಿದ್ದರೆ ಅಲ್ಲಿಗೇ ಪಂದ್ಯ ಮುಗಿದಿರುತ್ತಿತ್ತು. ಆ ಸಂದರ್ಭದಲ್ಲಿ ಮೆಹದಿ ಹಸನ್ ಕೇವಲ 15 ರನ್ಗಳನ್ನು ಗಳಿಸಿದ್ದರು. ಹಾಗಾಗಿ ನಾನು ಬೌಲಿಂಗ್ ವಿಭಾಗದ ಬಗ್ಗೆ ಹೆಚ್ಚು ಚಿಂತಿತನಾಗಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.
ಇನ್ನು ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಶಹಬಾಜ್ ಅಹ್ಮದ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸಲು ಬಯಸುತ್ತೇನೆ ಎಂದಿದ್ದಾರೆ. ಬ್ಯಾಟಿಂಗ್ನ ಕಾರಣದಿಮದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದಿರುವ ಚೋಪ್ರ ಅಕ್ಸರ್ ಮತ್ತು ವಾಷಿಂಗ್ಟನ್ ಸುಂದರ್ ಭಾರತ ಆಡಬೇಕಾದ ಇಬ್ಬರು ಸ್ಪಿನ್ನರ್ಗಳು ಎಂದಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಡಿಸೆಂಬರ್ 7 ಬುಧವಾರ ನಡೆಯಲಿದೆ. ಢಾಕಾದಲ್ಲಿರುವ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ ಈ ಪಂದ್ಯಕ್ಕೆ ಕೂಡ ಆತಿಥ್ಯ ವಹಿಸಿಕೊಳ್ಳಲಿದೆ. ಸರಣಿಯ ಮೊದಲ ಪಂದ್ಯ ಕೂಡ ಇದೇ ಮೈದಾನದಲ್ಲಿ ಆಯೋಜನೆಯಾಗಿತ್ತು. ಬೆಳಿಗ್ಗೆ 11:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 11 ಗಂಟೆಗೆ ಟಾಸ್ ನಡೆಯಲಿದೆ.
ನೇರಪ್ರಸಾರ: ಭಾರತದಲ್ಲಿ ಈ ಪಂದ್ಯ ಸೋನಿ ನೆಟ್ವರ್ಕ್ನಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ ಸೋನಿ ಲಿವ್ನಲ್ಲಿಯೂ ಈ ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ.
ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭಾವ್ಯ XI
ಬಾಂಗ್ಲಾದೇಶ XI: ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ ರಿಯಾದ್, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಮುಸ್ತಾಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್ ಮತ್ತು ಹಸನ್ ಮಹಮೂದ್.
ಟೀಮ್ ಇಂಡಿಯಾ XI: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಸೇನ್, ಶಹಬಾಜ್ ಅಹ್ಮದ್, ದೀಪಕ್ ಚಹಾರ್ ಮತ್ತು ಮೊಹಮ್ಮದ್ ಸಿರಾಜ್.