
ಢಾಕಾದ ಷೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ವಿಶ್ವದ ನಂ.3ನೇ ಶ್ರೇಯಾಂಕದ ಭಾರತ ತಂಡ ಪೂರ್ಣ 50 ಓವರ್ಗಳ ಬ್ಯಾಟಿಂಗ್ ಮಾಡಲು ವಿಫಲವಾಯಿತು. 41.2 ಓವರ್ಗಳಲ್ಲಿ 186 ರನ್ಗಳಿಗೆ ಸರ್ವಪತನ ಕಂಡಿತು. ಉಪನಾಯಕ ಕೆಎಲ್ ರಾಹುಲ್ ಮಾತ್ರ ಏಕಾಂಗಿಯಾಗಿ ಬ್ಯಾಟಿಂಗ್ ಮಾಡಿದರು.
70 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 5 ಬೌಂಡರಿ ಮತ್ತು 4 ಸಿಕ್ಸರ್ಗಳ ಸಮೇತ 73 ರನ್ ಗಳಿಸಿ ಭಾರತದ ಪರ ಹೆಚ್ಚಿನ ಸ್ಕೋರರ್ ಎನಿಸಿದರು. ಉಳಿದ ಯಾವ ಬ್ಯಾಟ್ಸ್ಮನಗಳು ಬಾಂಗ್ಲಾದೇಶ ಬೌಲರ್ಗಳನ್ನು ಎದುರಿಸಲು ವಿಫಲರಾದರು.
ಬಾಂಗ್ಲಾದೇಶ ಪರ ಬೌಲಿಂಗ್ನಲ್ಲಿ ಆಲ್ರೌಂಡರ್ ಶಕಿಬ್ ಅಲ್ ಹಸನ್ 36 ರನ್ಗಳಿಗೆ 5 ವಿಕೆಟ್ ಕಬಳಿಸಿದರೆ, ಎಬಾಡೋಟ್ ಹೊಸೈನ್ 47 ರನ್ಗಳಿಗೆ 4 ವಿಕೆಟ್ ಪಡೆದು ಮಿಂಚಿದರು.
ದಿಗ್ಗಜ ಬ್ಯಾಟಿಂಗ್ ಪಡೆ ಹೊಂದಿದ್ದರೂ ಬಾಂಗ್ಲಾದೇಶ ಯುವ ಬೌಲರ್ಗಳ ಬೌಲಿಂಗ್ ತಂತ್ರಕ್ಕೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಭಾರತ 200ರ ಗಡಿ ಮುಟ್ಟಲು ಹೋರಾಟ ನಡೆಸಿದರೂ ಆಗಲಿಲ್ಲ. ಬಾಂಗ್ಲಾದೇಶಕ್ಕೆ 187 ರನ್ಗಳ ಗುರಿ ನೀಡಲಾಗಿದ್ದು, ಭಾರತದ ಬೌಲರ್ಗಳ ಯಾವ ರೀತಿ ಆತಿಥೇಯರನ್ನು ಕಟ್ಟಿಹಾಕುತ್ತಾರೆ ಎಂದು ನೋಡಬೇಕಿದೆ.

ಭಾರತದ ಬ್ಯಾಟಿಂಗ್ ಕುರಿತು ಹೇಳುವುದಾದರೆ, ಮೊದಲ 10 ಓವರ್ಗಳ ನಂತರ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಳ್ಳುವದರೊಂದಿಗೆ ಭಾರತ ತಂಡ 49-3 ಸಂಕಷ್ಟಕ್ಕೆ ಸಿಲುಕಿತ್ತು.
ನಂತರ ಜೊತೆಗೂಡಿದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆದರೆ 43 ರನ್ ಜೊತೆಯಾಟದ ನಂತರ 39 ಎಸೆತಗಳಲ್ಲಿ 24 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಔಟಾದಾಗ ಮತ್ತೆ ಹಿನ್ನಡೆ ಅನುಭವಿಸಿತು.

ಆಗ ಕ್ರೀಸ್ಗೆ ಬಂದ ವಾಷಿಂಗ್ಟನ್ ಸುಂದರ್ ಅವರು ಕೆಎಲ್ ರಾಹುಲ್ ಜೊತೆ 60 ರನ್ಗಳ ಜೊತೆಯಾಟವನ್ನು ನೀಡಿ ಭಾರತದ ಪಾಳಯದಲ್ಲಿ ನಗು ಮೂಡಿಸಿದ್ದರು. ಇದೇ ವೇಳೆ ಪ್ರವಾಸಿ ಭಾರತ ತಂಡ 4 ರನ್ಗಳ ಅಂತರದಲ್ಲಿ 4 ವಿಕೆಟ್ಗಳನ್ನು ಕಳೆದುಕೊಂಡಿದ್ದರಿಂದ 200 ರನ್ಗಳ ಗಡಿ ದಾಟುವುದೂ ಕಷ್ಟವಾಯಿತು.
ಶಕೀಬ್ ಅಲ್ ಹಸನ್ ಭಾರತದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಐದು ವಿಕೆಟ್ ಕಬಳಿಸಿದ ಬಾಂಗ್ಲಾದೇಶದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಕೀಬ್ ಅಲ್ ಹಸನ್ ಅವರು ಏಕದಿನ ಇತಿಹಾಸದಲ್ಲಿ ಭಾರತದ ವಿರುದ್ಧ ಐದು ವಿಕೆಟ್ ಕಬಳಿಸಿದ 8ನೇ ಸ್ಪಿನ್ನರ್ ಎನಿಸಿಕೊಂಡರು.