
ಭಾನುವಾರ, ಡಿಸೆಂಬರ್ 18ರಂದು ಚಟ್ಟೋಗ್ರಾಮ್ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 188 ರನ್ಗಳಿಂದ ಗೆದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಇನ್ನು ಕೈಬೆರಳು ಗಾಯದಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ ಕುರಿತು ಹಂಗಾಮಿ ನಾಯಕ ಕೆಎಲ್ ರಾಹುಲ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಿರ್ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯವಾದ ನಂತರ ರೋಹಿತ್ ಶರ್ಮಾ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ಅದಕ್ಕೂ ಮುನ್ನ ಅವರು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿಯೂ ಆಡಿರಲಿಲ್ಲ. ಬಾಂಗ್ಲಾದೇಶ ಎ ವಿರುದ್ಧ ಅನಧಿಕೃತ ಟೆಸ್ಟ್ಗಳಲ್ಲಿ ಅತ್ಯುತ್ತಮವಾಗಿ ಆಡಿದ್ದ ಅಭಿಮನ್ಯು ಈಶ್ವರನ್ ಅವರನ್ನು ಅವರ ಬ್ಯಾಕಪ್ ಬ್ಯಾಟರ್ ಆಗಿ ಆಯ್ಕೆ ಮಾಡಲಾಗಿತ್ತು.

34ರ ಹರೆಯದ ರೋಹಿತ್ ಶರ್ಮಾ ಲಭ್ಯತೆಯ ಬಗ್ಗೆ ಭಾರತ ತಂಡವು ಒಂದೆರೆಡು ದಿನದಲ್ಲಿ ತಿಳಿಸಲಿದೆ ಎಂದು ಹಂಗಾಮಿ ನಾಯಕ ಕೆಎಲ್ ರಾಹುಲ್ ಮಾಹಿತಿ ಹಂಚಿಕೊಂಡಿದ್ದಾರೆ.
"ರೋಹಿತ್ ಶರ್ಮಾ ಬಗ್ಗೆ ನಾವು ಮುಂದಿನ ಒಂದು ಅಥವಾ ಎರಡು ದಿನದಲ್ಲಿ ತಿಳಿಯುತ್ತೇವೆ. ಸದ್ಯ ಅವರ ಗಾಯದ ಅರಿವೂ ನನಗಿಲ್ಲ. ಟೆಸ್ಟ್ ಪಂದ್ಯದ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿದ್ದೆ," ಎಂದು ಕೆಎಲ್ ರಾಹುಲ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎರಡನೇ ಟೆಸ್ಟ್ ಪಂದ್ಯ ಗುರುವಾರ ಡಿಸೆಂಬರ್ 22ರಂದು ಮೀರ್ಪುರದಲ್ಲಿ ಆರಂಭವಾಗಲಿದೆ.
ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಸ್ಲಿಪ್ನಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸುತ್ತಿರುವಾಗ ಆದ ಹೆಬ್ಬೆರಳಿನಲ್ಲಿ ರಕ್ತ ಸುರಿದು ಗಾಯವಾಗಿತ್ತು. ಅನಂತರ ಮೈದಾನದಿಂದ ಹೊರನಡೆದರು ಚಿಕಿತ್ಸೆ ಪಡೆದು ಮತ್ತೆ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರು.
ಈ ವೇಳೆ 28 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು. ಆದರೂ ಭಾರತವು ಎರಡನೇ ಏಕದಿನ ಪಂದ್ಯವನ್ನು ಸೋತು, ಸರಣಿಯನ್ನು 0-2 ರಿಂದ ಕಳೆದುಕೊಂಡಿತು. ಪಂದ್ಯದ ನಂತರ ಹೆಬ್ಬೆರಳಿನ ಚಿಕಿತ್ಸೆಗಾಗಿ ಮುಂಬೈಗೆ ಹಿಂತಿರುಗಿದ್ದರು.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ ಅವರು ಕೆಎಲ್ ರಾಹುಲ್ ಜೊತೆಗೆ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ತೆರೆದರು. ಮೊದಲ ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 20 ಮತ್ತು 110 ಸ್ಕೋರ್ಗಳನ್ನು ಮಾಡಿದರು.
ಇನ್ನು ರೋಹಿತ್ ಶರ್ಮಾ ಡಿಸೆಂಬರ್ 22ರಂದು ಮಿರ್ಪುರದಲ್ಲಿ ನಡೆಯುವ ಎರಡನೇ ಪಂದ್ಯಕ್ಕೆ ಮರಳಿದರೆ, ಶುಭಮನ್ ಗಿಲ್ ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆಯೇ ಎಂದು ನೋಡಬೇಕಾಗಿದೆ.