
ಮುಂದಿನ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿಯೇ ನಡೆಯುವ ಏಕದಿನ ವಿಶ್ವಕಪ್ ಬಗ್ಗೆ ಈಗಲೇ ಯೋಚಿಸುವ ಅಗತ್ಯವಿಲ್ಲ ಮತ್ತು ಪರಿಸ್ಥಿತಿಗಳನ್ನು ಅಸ್ತವ್ಯಸ್ತಗೊಳಿಸಲು ಬಯಸುವುದಿಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ತಾವು ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಐಸಿಸಿ ಟೂರ್ನಿಗಾಗಿ ತಂಡವನ್ನು ಹೇಗೆ ಸಜ್ಜುಗೊಳಿಸಬೇಕು ಎಂಬುದರ ಕುರಿತು ನ್ಯಾಯಯುತವಾದ ಕಲ್ಪನೆ ಹೊಂದಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಭಾರತೀಯ ಕ್ರಿಕೆಟಿಗರಿಗೆ ನೀಡುವ ವಿರಾಮದ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ರೋಹಿತ್ ಶರ್ಮಾ, ಸಾಕಷ್ಟು ಕ್ರಿಕೆಟ್ ನಡೆಯುತ್ತಿದೆ, ಅದಕ್ಕಾಗಿಯೇ ಆಟಗಾರರಿಗೆ ನಡುವೆ ವಿರಾಮದ ಅಗತ್ಯವಿದೆ. ಢಾಕಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲು ಟೀಂ ಇಂಡಿಯಾ ಸಜ್ಜಾಗಿದೆ ಎಂದು ವಿವರಿಸಿದರು.

ಭಾರತ ತಂಡವು ತನ್ನ ಅತ್ಯುತ್ತಮ ಆಟಗಾರರು ಯಾವಾಗಲೂ ಹೆಚ್ಚಿನ ಒತ್ತಡದಲ್ಲಿ ಆಡಬೇಕೆಂದು ಜನರು ಬಯಸುತ್ತಾರೆ. ಆದರೆ ಆಟಗಾರರಿಗೆ ವಿರಾಮವನ್ನು ನೀಡುವ ಅಗತ್ಯವಿದೆ ಎಂದು ಭಾರತ ತಂಡದ ನಾಯಕ ಹೇಳಿದರು.
"ಕ್ರಿಕೆಟ್ ನಿಲ್ಲುವುದಿಲ್ಲ, ನಿರಂತರ ವೇಳಾಪಟ್ಟಿ ಇರುತ್ತದೆ ಮತ್ತು ನಾವು ನಮ್ಮ ಆಟಗಾರರನ್ನು ನಿರ್ವಹಿಸಬೇಕಾಗಿದೆ. ನಿಮ್ಮ ನೆಚ್ಚಿನ ಆಟಗಾರರು ಯಾವಾಗಲೂ ಕ್ರಿಕೆಟ್ ಆಡುತ್ತೊಇರಬೇಕೆಂದು ನೀವು ಬಯಸುತ್ತೀರಿ. ಇದೇ ವೇಳೆ ಅವರಿಗೆ ವಿಶ್ರಾಂತಿ ನೀಡುವುದು ಅಗತ್ಯವಾಗಿದೆ. ಆಗ ತಾಜಾತನದಿಂದ ಅತ್ಯುತ್ತಮ ಪ್ರದರ್ಶನ ಹೊರಬರಲಿದೆ," ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.

ಭಾರತ ತಂಡದ ವಿಶ್ವಕಪ್ ಸಿದ್ಧತೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ರೋಹಿತ್ ಶರ್ಮಾ ಉತ್ತರಿಸಿ, ದೊಡ್ಡ ಪಂದ್ಯಾವಳಿಗೆ ಇನ್ನೂ ಎಂಟರಿಂದ ಒಂಬತ್ತು ತಿಂಗಳುಗಳು ಉಳಿದಿವೆ. ಈ ಸಮಯದಲ್ಲಿ ತಂಡವು ಅದರ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು.
ಬಾಂಗ್ಲಾದೇಶ ಏಕದಿನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.