ಮುಂಬೈ: ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಹಿಂದಿನ ಎರಡೂ ಆವೃತ್ತಿಗಳಲ್ಲಿ ಭಾರತ, ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಈಗ ಈ ಎರಡೂ ತಂಡಗಳು ಮೂರನೇ ಬಾರಿಗೆ ಸೆಮಿಫೈನಲ್ನಲ್ಲಿ ಫೈಟ್ ನಡೆಸುತ್ತಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಹಮದಾಬಾದ್ ಫ್ಲೈಟ್ ಏರುವ ಕನಸು ಭಾರತ ತಂಡದ್ದಾಗಿದೆ.
ಟಿ20 ವಿಶ್ವಕಪ್ನಲ್ಲಿ ಎರಡೂ ತಂಡಗಳು ಸ್ಥಿರ ಪ್ರದರ್ಶನ ನೀಡಿವೆ. ಅದ್ರಲ್ಲೂ ಇಂಗ್ಲೆಂಡ್ ಸೂಪರ್ 8 ಹಂತದಲ್ಲಿ ಅಜೇಯವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆದಿದೆ. ಆದರೆ ಭಾರತ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 196 ರನ್ಗಳ ಗುರಿಯನ್ನು ಬೆನ್ನಟ್ಟಿ ಉಪಾಂತ್ಯಕ್ಕೆ ತಲುಪಿದೆ. ಭಾರತ ತಂಡದ ಸದ್ಯ ಆತ್ಮವಿಶ್ವಾಸವದಿಂದ ಬೀಗುತ್ತಿದೆ. ಅಲ್ಲದೆ ಭಾರತದ ಆತ್ಮವಿಶ್ವಾಸಕ್ಕೆ ಮುಂಬೈನ ವಾಂಖೆಡೆ ಅಂಗಳದಲ್ಲಿ ಅಂಕಿ ಅಂಶಗಳು ಸಹ ಬಲ ನೀಡಿವೆ. ಭಾರತ ದಶಕಗಳಿಂದ ಈ ಮೈದಾನದಲ್ಲಿ ಒಂದೇ ಒಂದು ಟಿ20 ಪಂದ್ಯವನ್ನು ಸೋತಿಲ್ಲ.

ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಇಂಗ್ಲೆಂಡ್ ಸಹ ಮತ್ತೊಮ್ಮೆ ಟ್ರೋಫಿಗೆ ಮುತ್ತಿಡುವ ಆಸೆಯನ್ನು ಹೊಂದಿದೆ. ಗುರುವಾರ ನಡೆಯಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದಕ್ಕೆ ಕಾರಣ ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಸಂಜು ಸ್ಯಾಮ್ಸನ್, ಸೆಮಿಫೈನಲ್ ಪಂದ್ಯದ ಪ್ರಮುಖ ಆಕರ್ಷಣೆ. ಬಿಗ್ ಮ್ಯಾಚ್ನಲ್ಲಿ ಸಂಜು ಹೇಗೆ ಆಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇನ್ನು ಮುಂಬೈನ ವಾಂಖೆಡೆ ಅಂಗಳ, ಇಂಗ್ಲೆಂಡ್ ಎದುರಾಳಿ ಎಂದರೆ ಅಭಿಷೇಕ್ ಶರ್ಮಾ. ಇಂಗ್ಲೆಂಡ್ ವಿರುದ್ಧವೇ ಅಭಿಷೇಕ್ ಶರ್ಮಾ ಇದೇ ಮೈದಾನದಲ್ಲಿ ಬಿಗ್ ಇನಿಂಗ್ಸ್ ಕಟ್ಟಿ ಅಬ್ಬರಿಸಿದ್ದರು. ಹೀಗಾಗಿ ಇವರ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಪರ ಆಡಿದ ಅನುಭವ ಹೊಂದಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಅವರಿಗೆ ಇದು ತವರು ಮೈದಾನ ಹೀಗಾಗಿ ಈ ಆಟಗಾರರು ಸಹ ಬಿಗ್ ಇನಿಂಗ್ಸ್ ಕಟ್ಟಿ ತಂಡದ ಜಯದಲ್ಲಿ ಮಿಂಚುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಲ್ರೌಂಡರ್ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೂ ಈ ಪಿಚ್ ಮರ್ಮ ಚೆನ್ನಾಗಿ ಅರಿವಿದ್ದು ಇವರು ಸಹ ಬಿಗ್ ಇನಿಂಗ್ಸ್ ಕಟ್ಟು ಯೋಜನೆ ಹಾಕಿಕೊಂಡಿದ್ದಾರೆ.
ಶಿವಂ ದುಬೆ ಅವರು ಸಹ ಮುಂಬೈ ಪರವೇ ದೇಶೀಯ ಟೂರ್ನಿಗಳನ್ನು ಆಡಲಿದ್ದು, ಇವರ ಪರಿಸ್ಥಿತಿಗೆ ತಕ್ಕಂತೆ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪ್ರತಿಭೆ. ಅಕ್ಷರ್ ಪಟೇಲ್ ತಮ್ಮ ಫಿರ್ಕಿ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ.

ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರಿಗೆ ಮುಂಬೈ ಎರಡನೇ ತವರು. ಹೀಗಾಗಿ ಈ ಪಿಚ್ನಲ್ಲಿ ಯಾವ ರೀತಿ ಬೌಲಿಂಗ್ ನಡೆಸಬೇಕು ಎಂಬುದನ್ನು ಬುಮ್ರಾ ಅರಿತಿದ್ದಾರೆ. ಇವರಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಹ ಒಳ್ಳೆಯ ಸಾಥ್ ನೀಡಬೇಕಿದೆ ಅಂದಾಗ ಗೆಲುವಿನ ಆಸೆ ಫಲಿಸುತ್ತದೆ. ಕಳೆದ ಕೆಲವು ಪಂದ್ಯಗಳಲ್ಲಿ ರನ್ ನೀಡಿ ಕೈ ಸುಟ್ಟುಕೊಂಡಿರುವ ವರುಣ್ ಚಕ್ರವರ್ತಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ. ಅಂದಾಗ ಗೆಲುವು ಸಾಧಿಸಬಹುದು.

ಇಂಗ್ಲೆಂಡ್ ತಂಡದಲ್ಲಿ ಇರುವ ಹಲವು ಆಟಗಾರರು ಐಪಿಎಲ್ನಲ್ಲಿ ಅಬ್ಬರದ ಪ್ರದರ್ಶನ ನೀಡಿದವರೇ. ಅವರಿಗೆ ಭಾರತದಲ್ಲಿ ಪಿಚ್ಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಇನ್ನು ಹಲವು ವರ್ಷಗಳಿಂದ ಐಪಿಎಲ್ ಆಡುತ್ತಿರುವ ಜೋಸ್ ಬಟ್ಲರ್ ಅವರು ಈ ಮೈದಾನದಲ್ಲಿ ಅಬ್ಬರಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ನ ತಂಡದ ಪರ ಆಡಿದ ಅನುಭವ ಹೊಂದಿರುವ ವಿಲ್ ಜಾಕ್ಸ್ ಸಹ ತಂಡ ಗೆಲುವಿನಲ್ಲಿ ಕಾಣಿಕೆ ನೀಡಲು ಯೋಜನೆ ಹಾಕಿಕೊಂಡಿದ್ದಾರೆ. ಸಂಘಟಿತ ಆಟದ ಮೂಲಕ ಸೂರ್ಯಕುಮಾರ್ ಪಡೆ ಶಾಕ್ ನೀಡಲು ಇಂಗ್ಲೆಂಡ್ ಸಹ ಪ್ಲ್ಯಾನ್ ಮಾಡಿಕೊಂಡಿದೆ.