ಭಾನುವಾರ, ಆಗಸ್ಟ್ 23ರಂದು ಡಬ್ಲಿನ್ನ ದಿ ವಿಲೇಜ್ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವೆ ನಡೆಯಬೇಕಿದ್ದ ಮೂರನೇ ಟಿ20 ಪಂದ್ಯವು ಸತತ ಮಳೆ ಸುರಿದ ಮತ್ತು ಒದ್ದೆಯಾದ ಮೈದಾನದ ಕಾರಣದಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ.
ಇದಕ್ಕೂ ಮುನ್ನ ನಡೆಸಿದ್ದ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಭಾರತ ತಂಡ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಶುಕ್ರವಾರ, ಆಗಸ್ಟ್ 18ರಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಮಳೆಯ ಕಾರಣ, ಡಿಎಲ್ಎಸ್ ನಿಯಮದ ಪ್ರಕಾರ 2 ರನ್ಗಳಿಂದ ಗೆಲುವು ಸಾಧಿಸಿತ್ತು. ಬಳಿಕ ಭಾನುವಾರ, ಆಗಸ್ಟ್ 20ರಂದು ನಡೆದ ಎರಡನೇ ಪಂದ್ಯದಲ್ಲಿ 33 ರನ್ಗಳಿಂದ ಜಯಭೇರಿ ಬಾರಿಸಿತ್ತು.
ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಚೊಚ್ಚಲ ಬಾರಿಗೆ ಚುಟುಕು ಸ್ವರೂಪದಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಜಸ್ಪ್ರೀತ್ ಬುಮ್ರಾ ಮೊದಲ ಟಿ20 ಸರಣಿ ಗೆದ್ದುಕೊಟ್ಟಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ಜಸ್ಪ್ರೀತ್ ಬುಮ್ರಾ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಪಂದ್ಯದಲ್ಲಿ 4 ಓವರ್ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದಿದ್ದರೆ, ಎರಡನೇ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದು ಒಂದು ಮೇಡನ್ ಸಹಿತ 15 ರನ್ ನೀಡಿ 2 ವಿಕೆಟ್ ಪಡೆದಿದ್ದರು.
ಭಾರತ ತಂಡ ತವರಿಗೆ ವಾಪಸ್ಸಾದ ನಂತರ ಬೆಂಗಳೂರಿನ ಆಲೂರಿನಲ್ಲಿ ಶಿಬಿರ ಸೇರಲಿದೆ. ಈಗಾಗಲೇ ಕೆಲವು ಹಿರಿಯ ಆಟಗಾರರು ತಲುಪಿದ್ದಾರೆ. ಆಗಸ್ಟ್ 30ರಿಂದ ಆರಂಭವಾಗುವ 2023ರ ಏಷ್ಯಾ ಕಪ್ ಪಂದ್ಯಾವಳಿಗೆ ತಯಾರಿ ನಡೆಸಲಿದ್ದಾರೆ.