ಬಿಸಿಸಿಐನ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ನೂತನ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಐದು ಟಿ20 ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿತು.
ಈ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಉತ್ತರಪ್ರದೇಶದ ಬ್ಯಾಟ್ಸ್ಮನ್ ರಿಂಕು ಸಿಂಗ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಆರಂಭಿಕ ರುತುರಾಜ್ ಗಾಯಕ್ವಾಡ್ ಅವರ ಹೆಸರುಗಳನ್ನು ಕಡೆಗಣಿಸಲಾಗಿತ್ತು. ಇದು ಭಾರತೀಯ ಅಭಿಮಾನಿಗಳಿಗೆ ಭಾರೀ ಅಚ್ಚರಿಯನ್ನುಂಟು ಮಾಡಿತ್ತು.

2023ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ರಿಂಕು ಸಿಂಗ್ ಅವರನ್ನು ಆಯ್ಕೆ ಮಾಡಲಾಗಲಿಲ್ಲ. ಇನ್ನು ಐಪಿಎಲ್ 2023ರಲ್ಲಿ ಸಿಎಸ್ಕೆ ತಂಡದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ರುತುರಾಜ್ ಗಾಯಕ್ವಾಡ್ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಆದರೆ, ಟಿ20 ಸರಣಿಗೆ ಕಡೆಗಣಿಸಲಾಗಿದೆ.
ಇದೀಗ ರಿಂಕು ಸಿಂಗ್ ಮತ್ತು ರುತುರಾಜ್ ಗಾಯಕ್ವಾಡ್ ಇಬ್ಬರಿಗೂ ಶೀಘ್ರದಲ್ಲೇ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಇಬ್ಬರೂ ಕ್ರಿಕೆಟಿಗರು ಮುಂದಿನ ತಿಂಗಳು ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಮೊದಲ ಆದ್ಯತೆಯಲ್ಲಿ ಆಯ್ಕೆಯಾಗುವ ಸಂಭವವಿದೆ.
ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿ ಪ್ರಕಾರ, ಆಗಸ್ಟ್ 18, 20 ಮತ್ತು 23ರಂದು ನಡೆಯಲಿರುವ ಮೂರು ಟಿ20 ಪಂದ್ಯಗಳಿಗಾಗಿ ಮಧ್ಯಮ ಕ್ರಮಾಂಕದ ರಿಂಕು ಸಿಂಗ್ ಮತ್ತು ಆರಂಭಿಕ ರುತುರಾಜ್ ಗಾಯಕ್ವಾಡ್ ಇಬ್ಬರೂ ಐರ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ.

ಇನ್ನು 2023ರ ಏಷ್ಯನ್ ಗೇಮ್ಸ್ ಮೇಲೆ ಕಣ್ಣಿಟ್ಟಿರುವ ಆಟಗಾರರ ದೊಡ್ಡ ಪಡೆಯನ್ನು ಪ್ರಯತ್ನಿಸಲು ಭಾರತೀಯ ಆಯ್ಕೆ ಸಮಿತಿ ಉತ್ಸುಕವಾಗಿದೆ. ಈ ವರ್ಷದ ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ ಸಹ ಒಳಗೊಂಡಿದೆ.
"ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಿಂಕು ಸಿಂಗ್ ಮತ್ತು ಇತರ ಆಟಗಾರರು ಐರ್ಲೆಂಡ್ಗೆ ಹೋಗಲಿದ್ದಾರೆ. ಆಯ್ಕೆ ಸಮಿತಿಯು ಎಲ್ಲರನ್ನೂ ಒಂದೇ ಹಂತದಲ್ಲಿ ಪ್ರಯತ್ನಿಸಲು ಬಯಸುವುದಿಲ್ಲ".
"ಭಾರತೀಯ ಏಕದಿನ ತಂಡದ ಏಳು ಆಟಗಾರರು ಟಿ20 ಆಡುವುದಿಲ್ಲ. ಅವರು ಆಗಸ್ಟ್ ಅಂತ್ಯದಲ್ಲಿ ನಡೆಯಲಿರುವ 2023ರ ಏಷ್ಯಾ ಕಪ್ ಆಡಲಿರುವುದರಿಂದ ಆ ಆಟಗಾರರು ಭಾರತ ತಂಡಕ್ಕೆ ಪ್ರಮುಖರಾಗಿದ್ದಾರೆ," ಎಂದು ಬಿಸಿಸಿಐ ಮೂಲ ಉಲ್ಲೇಖಿಸಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಪತ್ರಿಕಾ ವರದಿಯ ಪ್ರಕಾರ, ಏಷ್ಯನ್ ಗೇಮ್ಸ್ ತಂಡವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಆಯ್ಕೆ ಸಮಿತಿಯು ಹಂತ ಹಂತವಾಗಿ ಯುವ ಆಟಗಾರರನ್ನು ಪ್ರಯತ್ನಿಸಲು ನಿರ್ಧರಿಸಿದೆ.
"ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಹೆಚ್ಚಿನ ಭಾರತ "ಎ' ತಂಡದ ಪ್ರವಾಸವನ್ನು ಹೊಂದಲು ಬಿಸಿಸಿಐಯನ್ನು ಕೇಳಿದೆ ಮತ್ತು ಹಿರಿಯರ ತಂಡದಲ್ಲಿ ಅವಕಾಶ ನೀಡುವ ಮೊದಲು ಯುವ ಆಟಗಾರರನ್ನು ಅಲ್ಲಿ ಪ್ರಯತ್ನಿಸಲಾಗುವುದು. ಭಾರತ ಎ ತಂಡದ ಪ್ರವಾಸಗಳನ್ನು ಏರ್ಪಡಿಸಲು ಬಿಸಿಸಿಐ ಕೆಲವು ಮಂಡಳಿಗಳೊಂದಿಗೆ ಮಾತುಕತೆ ನಡೆಸುತ್ತಿದೆ," ಎಂದು ವರದಿಯಲ್ಲಿ ತಿಳಿಸಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಆಯ್ಕೆಯು ಅಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಮೊದಲ ಸಭೆಯಾಗಿದೆ. ಆಯ್ಕೆ ಸಮಿತಿಯು ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರನ್ನು ಟಿ20 ತಂಡಕ್ಕೆ ಇದೇ ಮೊದಲ ಬಾರಿಗೆ ಆಯ್ಕೆ ಮಾಡಿದೆ.
2023ರ ಐಪಿಎಲ್ನಲ್ಲಿ ರಿಂಕು ಸಿಂಗ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಆಡಿದ 14 ಪಂದ್ಯಗಳಲ್ಲಿ 59.25ರ ಸರಾಸರಿ, 149.52ರ ಸ್ಟ್ರೈಕ್-ರೇಟ್ನಲ್ಲಿ ಮತ್ತು 4 ಅರ್ಧಶತಕಗಳೊಂದಿಗೆ 474 ರನ್ ಬಾರಿಸಿದರು.