
ಭಾನುವಾರ, ಜನವರಿ 29ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಆತಿಥೇಯ ಭಾರತ ತಂಡವು 6 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ. ಇದೇ ವೇಳೆ ಟಿ20 ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿಕೊಂಡಿತು.
ನ್ಯೂಜಿಲೆಂಡ್ ನೀಡಿದ್ದ 100 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ 19.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿ ಗೆಲುವಿನ ಗಡಿ ದಾಟಿಸಿದರು. ಸೂರ್ಯಕುಮಾರ್ ಯಾದವ್ ಗೆಲುವಿನ ಬೌಂಡರಿ ಬಾರಿಸಿದರು.

ನಿಧಾನಗತಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 4 ಓವರ್ಗಳಾಗಿದ್ದಾಗ ತಂಡದ ಮೊತ್ತ 17 ರನ್ ಆಗಿದ್ದ ವೇಳೆ 11 ರನ್ ಗಳಿಸಿದ್ದ ಶುಭ್ಮನ್ ಗಿಲ್ ಔಟಾದರು. ಇಶಾನ ಕಿಶನ್ (19), ರಾಹುಲ್ ತ್ರಿಪಾಠಿ (13), ವಾಷಿಂಗ್ಟನ್ ಸುಂದರ್ (10), ಸೂರ್ಯಕುಮಾರ್ ಯಾದವ್ (26) ಮತ್ತು ಹಾರ್ದಿಕ್ ಪಾಂಡ್ಯ (15) ರನ್ ಗಳಿಸಿ ಗೆಲುವಿನ ಕೊಡುಗೆ ನೀಡಿದರು.
ನ್ಯೂಜಿಲೆಂಡ್ ಪರ ಬೌಲಿಂಗ್ನಲ್ಲಿ ಮೈಕೆಲ್ ಬ್ರೇಸ್ವೆಲ್ ಮತ್ತು ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಿಮ ಮತ್ತು ಸರಣಿ ನಿರ್ಣಾಯಕ ಪಂದ್ಯವು ಬುಧವಾರ, ಫೆಬ್ರವರಿ 1ರಂದು ಅಹಮದಾಬಾದ್ನಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತು ಮತ್ತು ಭಾರತಕ್ಕೆ 100 ರನ್ಗಳ ಗುರಿ ನೀಡಿದೆ. ಭಾರತದ ಬಿಗಿ ಬೌಲಿಂಗ್ ದಾಳಿಗೆ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳು ತತ್ತರಿಸಿದರು.
ಅರ್ಶ್ದೀಪ್ ಸಿಂಗ್ ಎರಡು ವಿಕೆಟ್ ಪಡೆದು ಮಿಂಚಿದರೆ, ಉಳಿದಂತೆ ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು. ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ 23 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದರು.