
ಭಾನುವಾರ, ಜನವರಿ 29ರಂದು ಲಕ್ನೋದ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಎರಡೂ ಕಡೆಯ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು.
ಇದೀಗ ಕಳಪೆ ಪಿಚ್ ಸಿದ್ಧಪಡಿಸಿದ್ದಕ್ಕಾಗಿ ಲಕ್ನೋದ ಏಕನಾ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನ ಪಿಚ್ ಕ್ಯುರೇಟರ್ನನ್ನು ವಜಾ ಮಾಡಲಾಗಿದೆ ಎಂದು ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ತಿಳಿಸಿದೆ.
ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಎರಡೂ ತಂಡಗಳಿಂದ ಕೇವಲ 200 ರನ್ಗಳು ಬಂದವು. ನ್ಯೂಜಿಲೆಂಡ್ ಮೊದಲ ಇನಿಂಗ್ಸ್ನಲ್ಲಿ 99 ರನ್ ಗಳಿಸಲು ಶಕ್ತವಾದರೆ, ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆತಿಥೇಯ ಭಾರತ ತಂಡ 19.5 ಓವರ್ಗಳಲ್ಲಿ 101 ರನ್ ಗಳಿಸಿತು.
"ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನ ಕ್ಯುರೇಟರ್ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವಿಗೆ ಮುಂಚಿತವಾಗಿ ಸಂಜೀವ್ ಕುಮಾರ್ ಅಗರ್ವಾಲ್ ಅವರನ್ನು ಹೊಸ ಪಿಚ್ ಕ್ಯುರೇಟರ್ ಆಗಿ ನೇಮಿಸಲಾಗಿದ್ದು, ಅವರು ಬಹಳ ಅನುಭವಿ ಕ್ಯುರೇಟರ್ ಆಗಿದ್ದಾರೆ. ನಾವು ಒಂದು ತಿಂಗಳಲ್ಲಿ ಪರಿಸ್ಥಿತಿಗಳನ್ನು ಸರಿಪಡಿಸುತ್ತೇವೆ," ಎಂದು ಸುದ್ದಿ ಸಂಸ್ಥೆ ಪಿಟಿಐ ಮಂಗಳವಾರ, ಜನವರಿ 31ರಂದು ವರದಿ ಮಾಡಿದೆ.

"ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟಿ20 ಪಂದ್ಯಕ್ಕಿಂತ ಮುಂಚಿತವಾಗಿ ಈ ಪಿಚ್ನಲ್ಲಿ ಈಗಾಗಲೇ ಸಾಕಷ್ಟು ದೇಶೀಯ ಕ್ರಿಕೆಟ್ ಆಡಲಾಗಿದೆ. ಪಿಚ್ ಕ್ಯುರೇಟರ್ ಒಂದು ಅಥವಾ ಎರಡು ಸ್ಟ್ರಿಪ್ಗಳನ್ನು ಅಂತಾರಾಷ್ಟ್ರೀಯ ಪಂದ್ಯಕ್ಕೆ ಬಿಡಬೇಕಿತ್ತು. ಮೇಲ್ಮೈಯನ್ನು ಅತಿಯಾಗಿ ಬಳಸಲಾಗಿದೆ ಮತ್ತು ಕೆಟ್ಟ ಹವಾಮಾನದಿಂದಾಗಿ ವಿಕೆಟ್ ಕಳಪೆಯಾಗಿ ರೂಪುಗೊಂಡಿತು," ಎಂದು ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಮೂಲಗಳು ಹೇಳಿವೆ.
ಎರಡನೇ ಪಂದ್ಯದ ಬಳಿಕ ಲಕ್ನೋದ ಪಿಚ್ ಕುರಿತು ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅಸಮಾಧಾನ ವ್ಯಕ್ತಪಡಿಸಿದ್ದರು.
"ನಿಜ ಹೇಳಬೇಕೆಂದರೆ, ಲಕ್ನೋದ ಪಿಚ್ ಆಘಾತಕಾರಿಯಾಗಿದೆ. ಎರಡು ವಿಕೆಟ್ಗಳ ನಡುವಿನ ಪಿಚ್ ಟಿ20 ಪಂದ್ಯಕ್ಕಾಗಿ ನಿರ್ಮಿಸಿದಂತಿಲ್ಲ. ಕ್ಯುರೇಟರ್ಗಳು ಮೊದಲೇ ಪಿಚ್ಗಳನ್ನು ಸಿದ್ಧಪಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು," ಎಂದು ಲಕ್ನೋದಲ್ಲಿ ಕಿವೀಸ್ ವಿರುದ್ಧ ಆರು ವಿಕೆಟ್ಗಳ ಗೆಲುವಿನ ನಂತರ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದರು.