IND Vs NZ: 2ನೇ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್ ಆಡಿಸದ ಬಗ್ಗೆ ಕಾರಣ ತಿಳಿಸಿದ ನಾಯಕ ಧವನ್

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯ ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ನ್ಯೂಜಿಲೆಂಡ್ ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಕೊನೆಯ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಸರಣಿ ಸಮಬಲವಾಗಲಿದೆ.
ಹ್ಯಾಮಿಲ್ಟನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಆರಂಭ ಪಡೆಯಿತು. ಆದರೆ, 4.5 ಓವರ್ ಗಳಾಗಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ನಂತರ ಸ್ವಲ್ಪ ಸಮಯದ ಬಳಿಕ ಪಂದ್ಯವನ್ನು ಮರು ಆರಂಭಿಸಲಾಯಿತು. ಮಳೆಯಿಂದ ತಡವಾದ ಕಾರಣ ಪಂದ್ಯವನ್ನು 29 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. 12.5 ಓವರ್ ಗಳಲ್ಲಿ ಭಾರತ 1 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದ್ದಾಗ ಮತ್ತೆ ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.
ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ XI ನಲ್ಲಿ ಎರಡು ಬದಲಾವಣೆಗಳನ್ನು ಮಾಡಿತ್ತು. ಮೊದಲನೇ ಪಂದ್ಯದಲ್ಲಿ ಆಡಿದ್ದ ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್ ಅವರನ್ನು ಆಡುವ ಬಳಗದಿಂದ ಕೈಬಿಟ್ಟು, ಅವರ ಬದಲಿಗೆ ದೀಪಕ್ ಹೂಡಾ ಮತ್ತು ದೀಪಕ್ ಚಹಾರ್ ಗೆ ಅವಕಾಶ ನೀಡಲಾಯಿತು.

ಸ್ಯಾಮ್ಸನ್ ಬಗ್ಗೆ ನಿರ್ಲಕ್ಷ್ಯವೇಕೆ ಎಂದ ಫ್ಯಾನ್ಸ್?
ಎರಡನೇ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ರನ್ನು ಕೈಬಿಟ್ಟ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಒಂದು ಪಂದ್ಯದಲ್ಲಿ ಆಡಿಸಿ, ಅವರು ರನ್ ಗಳಿಸಿದರೂ ಎರಡನೇ ಪಂದ್ಯದಲ್ಲಿ ಅವಕಾಶ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಟಿ20 ಸರಣಿಯಲ್ಲಿ ಅವಕಾಶ ಪಡೆಯದ ಸಂಜು ಸ್ಯಾಮ್ಸನ್ ಮೊದಲನೇ ಏಕದಿನ ಪಂದ್ಯದಲ್ಲಿ ಅವಕಾಶ ಪಡೆದಿದ್ದರು. 33 ರನ್ ಗಳಿಸಿದ್ದರೂ ಅವರನ್ನು ಎರಡನೇ ಏಕದಿನ ಪಂದ್ಯದಲ್ಲಿ ಕೈಬಿಟ್ಟದ್ದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
World Cup 2023: ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಎಚ್ಚರಿಕೆಗೆ ಖಡಕ್ ತಿರುಗೇಟು ಕೊಟ್ಟ ಕ್ರೀಡಾ ಸಚಿವ

ಕಾರಣ ತಿಳಿಸಿದ ನಾಯಕ ಶಿಖರ್ ಧವನ್
ಮಳೆಯಿಂದಾಗಿ ಪಂದ್ಯ ರದ್ದಾದ ನಂತರ ಮಾತನಾಡಿದ ಟೀಂ ಇಂಡಿಯಾ ನಾಯಕ ಶಿಖರ್ ಧವನ್, ಎರಡನೇ ಏಕದಿನ ಪಂದ್ಯದಲ್ಲಿ ಆಡುವ ಬಳಗವನ್ನು ಏಕೆ ಬದಲಾವಣೆ ಮಾಡಲಾಯಿತು ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಎರಡನೇ ಏಕದಿನ ಪಂದ್ಯದಲ್ಲಿ ಆರನೇ ಬೌಲರ್ ಬೇಕೆಂದು ಬಯಸಿದೆವು, ಆದ್ದರಿಂದ ಅನಿವಾರ್ಯವಾಗಿ ಸಂಜು ಸ್ಯಾಮ್ಸನ್ ಅವರ ಬದಲಿಗೆ ದೀಪಕ್ ಹೂಡಾರಿಗೆ ಅವಕಾಶ ನೀಡಲಾಯಿತು. ದೀಪಕ್ ಚಹಾರ್ ಎರಡೂ ಕಡೆ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯವಿರುವ ಕಾರಣ ಶಾರ್ದೂಲ್ ಠಾಕೂರ್ ಬದಲಿಗೆ ಅವರಿಗೆ ಅವಕಾಶ ನೀಡಲಾಯಿತು" ಎಂದು ಹೇಳಿದರು.
ಎರಡನೇ ಪಂದ್ಯದಲ್ಲಿ ಚೆಂಡು ಸ್ವಿಂಗ್ ಆಗುತ್ತದೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ, ಇದು ಬ್ಯಾಟಿಂಗ್ ಮಾಡಲು ಉತ್ತಮವಾಗಿತ್ತು. ಶುಭಮನ್ ಗಿಲ್ ಉತ್ತಮವಾಗಿ ಪ್ರದರ್ಶನ ನೀಡುತ್ತಿರುವುದು ಸಂತೋಷಕರವಾಗಿದೆ, 3ನೇ ಪಂದ್ಯಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು.

ನಾಯಕತ್ವದ ಬಗ್ಗೆ ಧವನ್ ಹೇಳಿದ್ದೇನು?
ಟೀಂ ಇಂಡಿಯಾನವನ್ನು ಮುನ್ನಡೆಸುವ ಅವರ ಅನುಭವದ ಬಗ್ಗೆ ಕೇಳಿದ ಪ್ರಶ್ನೆಗೂ ಧವನ್ ಉತ್ತರ ನೀಡಿದರು. "ಇದು ತುಂಬಾ ರೋಮಾಂಚನಕಾರಿ ಅನುಭವ ಆಗಿದೆ. ನಾನು ತಂಡದಲ್ಲಿ ಎಲ್ಲರಿಗಿಂತ ಚಿಕ್ಕವನಂತೆ ಆಡುತ್ತೇನೆ. ಆದರೆ, ಯುವ ಆಟಗಾರರಿಗೆ ಇದು ಉತ್ತಮ ಅವಕಾಶವಾಗಿದೆ." ಎಂದು ಹೇಳಿದರು.
"ಶುಭಮನ್ ಗಿಲ್ ಬ್ಯಾಟಿಂಗ್ ಮತ್ತು ವೇಗಿ ಉಮ್ರಾನ್ ಮಲಿಕ್ ಅವರ ಬೌಲಿಂಗ್ ನೋಡಲು ಸಂತೋಷವಾಗುತ್ತದೆ. ಒಂದು ತಂಡವಾಗಿ ನಾವು ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ. ಕ್ರೈಸ್ಟ್ ಚರ್ಚ್ನಲ್ಲಿ ನಡೆಯಲಿರುವ 3ನೇ ಏಕದಿನ ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ" ಎಂದು ಶಿಖರ್ ಧವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯ ಕೊನೆಯ ಪಂದ್ಯ ನವೆಂಬರ್ 30 ರಂದು ಕ್ರೈಸ್ಟ್ ಚರ್ಚ್ನಲ್ಲಿ ನಡೆಯಲಿದೆ. ಭಾರತ ಕೊನೆಯ ಪಂದ್ಯದಲ್ಲಿ ಗೆದ್ದರೆ ಸರಣಿ ಸಮಬಲವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications