
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ 2ನೇ ಟೆಸ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದರೂ, ಎದುರಾಳಿ ಸ್ಪಿನ್ನರ್ ಅಜಾಜ್ ಪಟೇಲ್ ದಾಳಿಗೆ ಪ್ರಮುಖ ವಿಕೆಟ್ಗಳನ್ನ ಕಳೆದುಕೊಂಡಿದೆ.
ಮಳೆಯಿಂದಾಗಿ ಮೈದಾನದ ಪಿಚ್ ಹೊರತುಪಡಿಸಿ ಔಟ್ಫೀಲ್ಡ್ ತೇವಾಂಶವಿದ್ದ ಕಾರಣ ಟಾಸ್ ವಿಳಂಬವಾಯಿತು. ಕಳೆದೆರಡು ದಿನಗಳಲ್ಲಿ ಮುಂಬೈ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ವಾಂಖೆಡೆ ಮೈದಾನ ತೇವಗೊಂಡಿದ್ದ ಪರಿಣಾಮ ಮೊದಲ ಸೆಷನ್ ನಷ್ಟವಾಯ್ತು. ಎರಡನೇ ಸೆಷನ್ನಲ್ಲಿ ಶುಭ್ಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್ ಅರ್ಧಶತಕದ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು.
ಆದ್ರೆ ಭಾರತದ ಬ್ಯಾಟ್ಸ್ಮನ್ಗಳಿಗೆ ಕಂಟಕಪ್ರಾಯರಾದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಭಾರತದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳನ್ನ ಪೆವಿಲಿಯನ್ಗೆ ಅಟ್ಟಿದರು. ಮೊದಲಿಗೆ 44 ರನ್ಗಳಿಸಿದ್ದ ಶುಭ್ಮನ್ ಗಿಲ್ ಸ್ಲಿಪ್ನಲ್ಲಿದ್ದ ರಾಸ್ಟೇಲರ್ಗೆ ವಿಕೆಟ್ ಒಪ್ಪಿಸಿದ್ರೆ, ಇದ್ರ ಬೆನ್ನಲ್ಲೇ ಚೇತೇಶ್ವರ ಪೂಜಾರ ಶೂನ್ಯಕ್ಕೆ ಬೌಲ್ಡ್ ಆದ್ರು.
ಪೂಜಾರ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಇಳಿದರು. ಕೊಹ್ಲಿ ಮೇಲೆ ಸಾಮಾನ್ಯವಾಗಿ ಸಾಕಷ್ಟು ನಿರೀಕ್ಷೆಗಳಿದ್ದವು.
ವಿರಾಟ್ ಕೊಹ್ಲಿ ಖಾತೆ ತೆರೆಯದೆ ನಾಲ್ಕು ಎಸೆತಗಳನ್ನು ಆಡಿ ಅಜಾಜ್ ಪಟೇಲ್ ಎಸೆತದಲ್ಲಿ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಲಾಯಿತು. ಆದರೆ ಈಗ ಕೊಹ್ಲಿ ಔಟ್ ವಿವಾದಾತ್ಮಕ ತಿರುವು ಪಡೆದುಕೊಂಡಿದೆ. ಚೆಂಡು ಮೊದಲು ಬ್ಯಾಟ್ಗೆ ತಾಗಿ ನಂತರ ಪ್ಯಾಡ್ಗೆ ಬಡಿದಂತಿತ್ತು. ಆದರೆ ಥರ್ಡ್ ಅಂಪೈರ್ ಆನ್ ಫೀಲ್ಡ್ ಅಂಪೈರ್ ನಿರ್ಧಾರವನ್ನು ಎತ್ತಿ ಹಿಡಿದರು.ವಿರಾಟ್ ಕೊಹ್ಲಿ ಮತ್ತು ಭಾರತೀಯ ಪಾಳಯವು ರಿವೀವ್ ನೋಡಿದ ನಂತರ ಎಲ್ಲರೂ ಶಾಕ್ ಆದರು.
ಮೊದಲ ಮೂರು ಎಸೆತಗಳನ್ನು ಕೊಹ್ಲಿ ಸಮರ್ಥವಾಗಿ ಎದುರಿಸಿದರು. ನಾಲ್ಕನೇ ಎಸೆತದಲ್ಲಿಯೂ ಅವರು ಡಿಫೆಂಡ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಪ್ಯಾಡ್ಗೆ ತಗುಲಿತು. ಹೀಗಾಗಿ ಕಿವೀಸ್ ತಂಡ ಮನವಿ ಮಾಡಿತು. ಆನ್ ಫೀಲ್ಡ್ ಅಂಪೈರ್ ಅನಿಲ್ ಚೌಧರಿ ಔಟೆಂದು ಬೆರಳು ಎತ್ತಿದರು. ತಕ್ಷಣ ಕೊಹ್ಲಿ ರಿವ್ಯೂ ತೆಗೆದುಕೊಂಡರು, ಆದ್ರೆ ರಿವ್ಯೂನಲ್ಲಿ ಚೆಂಡು ಒಂದೇ ಸಮಯದಲ್ಲಿ ಬ್ಯಾಟ್ ಮತ್ತು ಪ್ಯಾಡ್ಗೆ ತಗುವಂತಿತ್ತು. ಥರ್ಡ್ ಅಂಪೈರ್ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುವುದರ ಜೊತೆಗೆ ಒತ್ತಡಕ್ಕೆ ಒಳಗಾಗಿದ್ದರು.
ಇದಕ್ಕೆ ಕಾರಣ ಒಂದು ಆ್ಯಂಗಲ್ನಿಂದ ಚೆಂಡಿನ ಒಂದು ಬದಿ ಬ್ಯಾಟ್ ಮತ್ತು ಪ್ಯಾಡ್ನ ಒಂದು ಬದಿಯೊಂದಿಗೆ ಬಡಿದಂತೆ ತೋರುತ್ತಿತ್ತು. ಆದರೆ ಮೊದಲು ಚೆಂಡು ಯಾವುದಕ್ಕೆ ಬಡಿಯಿತು ಎಂಬುದು ಸ್ಪಷ್ಟವಾಗಿ ತೋರುತ್ತಿರಲಿಲ್ಲ. ಆದಾಗ್ಯೂ, ರಿವ್ಯೂ ನೋಡಿದಾಗ, ಚೆಂಡು ಬ್ಯಾಟ್ಗೆ ಬಡಿದು ಪ್ಯಾಡ್ನತ್ತ ಹೋಗಿದೆ ಎಂದು ಭಾವಿಸಲಾಯಿತು. ಇದರ ಜೊತೆಗೆ ಮೊದಲು ಬ್ಯಾಟ್ಗೆ ತಾಗಿದೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಮೂರನೇ ಅಂಪೈರ್ ಹೇಳಿದರು. ಹೀಗಾಗಿ ತಮ್ಮ ನಿರ್ಧಾರವನ್ನು ಎತ್ತಿಹಿಡಿಯುವಂತೆ ಮೈದಾನದ ಅಂಪೈರ್ಗೆ ಕೇಳಿದರು.
ಆದ್ರೆ ಇದಕ್ಕೂ ಮೊದಲು ಚೆಂಡು ಸ್ಟಂಪ್ಗೆ ಹೋಗುತ್ತಿದೆಯೇ ಅಥವಾ ಇಲ್ಲವೇ ಎಂದು ಹೇಳುವ ಮೊದಲು ಅವರು ಬಾಲ್ ಟ್ರ್ಯಾಕಿಂಗ್ ಅನ್ನು ನೋಡಲಿಲ್ಲ. ಈ ನಿರ್ಧಾರಕ್ಕೆ ಭಾರತೀಯ ಡ್ರೆಸ್ಸಿಂಗ್ ರೂಮ್ ಕೂಡ ಅಚ್ಚರಿ ವ್ಯಕ್ತಪಡಿಸಿದೆ. ಕೋಚ್ ರಾಹುಲ್ ದ್ರಾವಿಡ್ಗೆ ಅಂಪೈರ್ ನಿರ್ಧಾರದಿಂದ ಬೇಸರವಾಗಿದೆ ಎಂಬುದು ಅವರ ಮುಖದಿಂದಲೇ ಸ್ಪಷ್ಟವಾಯಿತು. ಇನ್ನು ಕೊಹ್ಲಿ ಔಟಾದ ಬಳಿಕ ಬ್ಯಾಟ್ನಿಂದ ಬೌಂಡರಿ ಲೈನ್ಗೆ ಬಡಿದು ಹೋದರು. ಅಲ್ಲದೆ ಡ್ರೆಸ್ಸಿಂಗ್ ರೂಂನಲ್ಲಿ ವೀಡೀಯೋ ನೋಡುವಾಗ ಅಂಪೈರ್ ನಿರ್ಧಾರ ಕಂಡು ನಗುತ್ತಾ ಬೇಸರ ವ್ಯಕ್ತಪಡಿಸಿದ್ರು.