
ನಾಯಕತ್ವದ ಅನನುಭವ
ರಿಷಭ್ ಪಂತ್ ಚೊಚ್ಚಲ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವವನ್ನು ಪಂತ್ ಹೊಂದಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ನ ಒತ್ತಡ ಮತ್ತೊಂದು ಹಂತದಲ್ಲಿರುತ್ತದೆ. ಪರಿಸ್ಥಿತಿ ಕೈಮೀರಿದ ಸಂದರ್ಭದಲ್ಲಿ ಮತ್ತೆ ಪಂದ್ಯಕ್ಕೆ ವಾಪಾಸಾಗುವಂತಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೊದಲ ಪಂದ್ಯದಲ್ಲಿ ರಿಷಭ್ ಪಂತ್ ವಿಫಲವಾದರು. ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ಭಾರತ ತಂಡದಿಂದ ಬಂದಿದ್ದರೂ ಅದನ್ನು ಸದುಪಯೋಗಪಡಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ.

ಬೌಲಿಂಗ್ನಲ್ಲಿ ಎಡವಿದ ಭಾರತ
ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಬೌಲಿಂಗ್ ವಿಭಾಗದಲ್ಲಿ ಎಡವಿದ್ದು ಪ್ರಮುಖ ಕಾರಣವಾಗಿದೆ. ಯಾವ ಬೌಲರ್ ಕೂಡ ಉತ್ತಮ ನಿಯಂತ್ರಣ ಸಾಧ್ಯವಾಗಲಿಲ್ಲ. ಪವರ್ಪ್ಲೇನಲ್ಲಿ ಎರಡು ವಿಕೆಟ್ ಪಡೆದರು ಕೂಡ ನಂತರ ಅದರ ಲಾಭ ಪಡೆಯಲು ಬೌಲಿಂಗ್ ವಿಭಾಗಕ್ಕೆ ಸಾಧ್ಯವಾಗಲಿಲ್ಲ. ಯೋಜನೆಗಳನ್ನು ಸೂಕ್ತ ರೀತಿಯಲ್ಲಿ ಕಾರ್ಯರೂಪಕ್ಕೆ ತರಲು ಭಾರತ ತಂಡದ ಬೌಲಿಂಗ್ ವಿಭಾಗ ಎಡವಿತು. ಹೀಗಾಗಿ ಭಾರತ ಈ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.

ಮಿಲ್ಲರ್, ಡುಸೆನ್ ಜೊತೆಯಾಟ
ಡೇವಿಡ್ ಮಿಲ್ಲರ್ ಹಾಗೂ ವಾನ್ ಡರ್ ಡುಸೆನ್ ಅವರ ಜೊತೆಯಾಟ ಭಾರತಕ್ಕೆ ಸೋಲಿನ ಆಘಾತ ಅನುಭವಿಸುವಂತಾಗಲು ದೊಡ್ಡ ಕಾರಣವಾಯಿತು. ಈ ಜೋಡಿಯನ್ನು ಬೇರ್ಪಡಿಸಲು ಭಾರತ ಬೌಲರ್ಗಳಿಗೆ ಸಾಧ್ಯವಾಗಲೇ ಇಲ್ಲ. ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚಿದ ಡೇವಿಡ್ ಮಿಲ್ಲರ್ ಆ ಫಾರ್ಮ್ಅನ್ನು ರಾಷ್ಟ್ರೀಯ ತಂಡದ ಪರವಾಗಿಯೂ ಮುಂದುವರಿಸುವಲ್ಲಿ ಯಶಸ್ವಿಯಾದರು. ಯಾವ ಬೌಲರ್ನನ್ನು ಕೂಡ ಬಿಡದೆ ಈ ಜೋಡಿ ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆಗೈದರು. ಅಂತಿಮ ಹಂತದವರೆಗೂ ಅಜೇಯವಾಗಿಳಿದು ಈ ಜೋಡಿ ತಮ್ಮ ತಂಡಕ್ಕೆ ಗೆಲುವನ್ನು ತಂದಿತ್ತಿದ್ದಾರೆ.

ಅವಕಾಶ ಕೈಚೆಲ್ಲಿದ ಶ್ರೇಯಸ್ ಐಯ್ಯರ್
ಇನ್ನು ಈ ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣವಾದ ಪ್ರಮುಖ ಅಂಶವರೆಂದರೆ ಶ್ರೇಯಸ್ ಐಯ್ಯರ್ ಕೈಬಿಟ್ಟ ಕ್ಯಾಚ್. ವಾನ್ ಡರ್ ಡುಸೆನ್ ಈ ಹಂತದಲ್ಲಿ ರನ್ಗಳಿಸಲು ಪರದಾಡುತ್ತಿದ್ದರು. 30 ಎಸೆತಗಳನ್ನು ಎದುರಿಸಿ 29 ರನ್ಗಳಿಸಿದ್ದ ಸಂದರ್ಭದಲ್ಲಿ ಡುಸೆನ್ ವಿಕೆಟ್ ಕಳೆದುಕೊಳ್ಳುವ ಸಂದರ್ಭ ಸೃಷ್ಟಿಯಾಗಿತ್ತು. ಹರ್ಷಲ್ ಪಟೇಲ್ ಎಸೆತದಲ್ಲಿ ಎಡವಿದ್ದರು ಡುಸೆನ್. ಆದರೆ ಸುಲಭವಾಗಿ ಬಂದಿದ್ದ ಚೆಂಡನ್ನು ಕ್ಯಾಚ್ ಆಗೊ ಪರಿವರ್ತಿಸುವಲ್ಲಿ ಐಯ್ಯರ್ ಎಡವಿದರು. ಇದು ತಂಡಕ್ಕೆ ದುಬಾರಿಯಾಯಿತು. ಈ ಅವಕಾಶವನ್ನು ಬಳಸಿಕೊಂಡ ಡುಸೆನ್ ಬಳಿಕ ತಮ್ಮ ಆಟದ ವೈಖರಿಯನ್ನು ಬದಲಾಯಿಸಿದರು. ನಂತರ ರನ್ ವೇಗವನ್ನು ಡುಸೆನ್ ಹೆಚ್ಚಿಸಿಕೊಂಡರು.


Click it and Unblock the Notifications
