
ಸೆಂಚುರಿಯನ್ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಇನ್ನು ಕೇವಲ 6 ವಿಕೆಟ್ ಗಳಷ್ಟೇ ಬಾಕಿ ಉಳಿದಿದೆ. ಟೀಂ ಇಂಡಿಯಾ ನೀಡಿರುವ 305ರನ್ಗಳ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 94 ರನ್ ಕಲೆಹಾಕಿದೆ.
ನಾಲ್ಕನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ನ ಆರಂಭದಲ್ಲೇ ಓಪನರ್ ಏಡನ್ ಮಕ್ರಾಮ್ ವಿಕೆಟ್ ಕಳೆದುಕೊಂಡಿತು. ಕೇವಲ 1 ರನ್ಗೆ ಮಕ್ರಾಮ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡ್ರು. ಇದ್ರ ಬೆನ್ನಲ್ಲೇ ಕೀಗನ್ ಪೀಟರ್ಸನ್ 17ರನ್ಗಳಷ್ಟೇ ದಾಖಲಿಸಿ ಸಿರಾಜ್ ಬೌಲಿಂಗ್ನಲ್ಲಿ ಔಟಾದ್ರು.
ರಾಸ್ಸಿ ವ್ಯಾನ್ ಡರ್ ಡಸ್ಸೆನ್ 11 ರನ್, ನೈಟ್ ವಾಚ್ಮನ್ ಆಗಿ ಕಣಕ್ಕಿಳಿದಿದ್ದ ಕೇಶವ್ ಮಹಾರಾಜ್ 8ರನ್ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ರು. ಅದ್ರಲ್ಲೂ ದಿನದಾಟದ ಕೊನೆಯಲ್ಲಿ ಕೇಶವ್ ಮಹಾರಾಜ್ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ರು.
ಆದ್ರೆ ಇತ್ತ ಏಕಾಂಗಿಯಾಗಿ ಹೋರಾಟ ನಡೆಸಿರುವ ನಾಯಕ ಡೀನ್ ಎಲ್ಗರ್ ಅಜೇಯ 52 ರನ್ ಕಲೆಹಾಕಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕ ಗೆಲುವಿಗೆ ಇನ್ನೂ 211ರನ್ ಬಾಕಿ ಉಳಿದಿದೆ. ಅದೇ ಭಾರತ ಗೆಲುವಿಗೆ ಇನ್ನು 6 ವಿಕೆಟ್ಗಳಷ್ಟೇ ಬಾಕಿ ಉಳಿದಿದೆ.
ಇದಕ್ಕೂ ಮೊದಲು 18 ರನ್ ಕಲೆಹಾಕಿದ್ದ ಭಾರತವು ನಾಲ್ಕನೇ ದಿನದಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಎಡವಿತು. ನೈಟ್ ವಾಚ್ಮನ್ ಆಗಿ ಬಂದಿದ್ದ ಶಾರ್ದೂಲ್ ಠಾಕೂರ್ 10 ರನ್ಗಳಿಸಿ ಕಗಿಸೊ ರಬಾಡ ಬೌಲಿಂಗ್ನಲ್ಲಿ ಔಟಾದರು. ಇದರ ಬೆನ್ನಲ್ಲೇ ಮೊದಲ ಇನ್ನಿಂಗ್ಸ್ ಶತಕ ಸಿಡಿಸಿದ್ದ ಕೆ.ಎಲ್ ರಾಹುಲ್ 23ರನ್ಗಳಿಸಿದ್ದಾಗ ಲುಂಗಿ ಎನ್ಗಿಡಿ ಬೌಲಿಂಗ್ನಲ್ಲಿ ಡೀನ್ ಎಲ್ಗರ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.
ನಾಯಕ ವಿರಾಟ್ ಕೊಹ್ಲಿ ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ. ಮೊದಲ ಇನ್ನಿಂಗ್ಸ್ನಂತೆ ಎರಡನೇ ಇನ್ನಿಂಗ್ಸ್ನಲ್ಲೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ಕೊಹ್ಲಿ ಎಡವಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮಾರ್ಕೊ ಜಾನ್ಸೆನ್ ದಾಳಿಯಲ್ಲಿ ವಿಕೆಟ್ ಕೀಪರ್ ಕ್ವಿಂಡನ್ ಡಿಕಾಕ್ಗೆ ಕ್ಯಾಚಿತ್ತು 18ರನ್ಗೆ ಇನ್ನಿಂಗ್ಸ್ ಮುಗಿಸಿದ್ರು. ಇದ್ರ ಬೆನ್ನಲ್ಲೇ ತಾಳ್ಮೆಯ ಆಟವಾಡ್ತಿದ್ದ ಚೇತೇಶ್ವರ್ ಪೂಜಾರ ಎರಡನೇ ಇನ್ನಿಂಗ್ಸ್ನಲ್ಲೂ ತಂಡದ ಕೈ ಹಿಡಿಯಲಿಲ್ಲ.
ಪೂಜಾರ 64 ಎಸೆತಗಳಲ್ಲಿ 16 ರನ್ ಕಲೆಹಾಕಿ ಲುಂಗಿ ಎನ್ಗಿಡಿಗೆ ವಿಕೆಟ್ ಒಪ್ಪಿಸಿದ್ರು. ಅತ್ಯಂತ ದೃಢ ವಿಶ್ವಾಸದಿಂದ ಆಡುತ್ತಿದ್ದ ರಹಾನೆ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ ತಂಡಕ್ಕೆ ಆಧಾರವಾದ್ರೂ ಎನ್ನುವಷ್ಟರಲ್ಲಿ , ಕೆಟ್ಟ ಹೊಡೆತಕ್ಕೆ ಕೈ ಹಾಕಿ ಮಾರ್ಕೊ ಜಾನ್ಸೆನ್ಗೆ ವಿಕೆಟ್ ಒಪ್ಪಿಸಿದ್ರು. ಈ ಮೂಲಕ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಪತನ ಮುಂದುವರಿಯಿತು.
ಇದಾದ ಬಳಿಕ ಆಲ್ರೌಂಡರ್ ಅಶ್ವಿನ್ 14ರನ್ಗೆ ಇನ್ನಿಂಗ್ಸ್ ಮುಗಿಸಿದ್ರೆ, ಶೇಕಡಾ 100ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸ್ತಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಕೆಟ್ಟ ಹೊಡೆತಕ್ಕೆ ಮುಂದಾಗಿ ರಬಾಡಗೆ ವಿಕೆಟ್ ಒಪ್ಪಿಸಿದ್ರು. 34 ಎಸೆತಗಳಲ್ಲಿ 34ರನ್ ಗಳಿಸಿದ ರಿಷಭ್ ಪಂತ್ ಔಟಾಗುತ್ತಿದ್ದಂತೆ ಭಾರತದ ಕೊನೆಯ ಆಸರೆಯು ಕೊನೆಗೊಂಡಿತು. ಅಂತಿಮವಾಗಿ ಟೀಂ ಇಂಡಿಯಾ 10 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು. ಅಲ್ಲದೆ ಮೊದಲ ಇನ್ನಿಂಗ್ಸ್ನಲ್ಲಿ 130ರನ್ ಮುನ್ನಡೆ ಸಾಧಿಸಿದರ ಪರಿಣಾಮ ಭಾರತ 304ರನ್ಗಳ ಮುನ್ನಡೆ ಸಾಧಿಸಿದೆ.