ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ20 ಪಂದ್ಯ ಗುರುವಾರ ಚಂಡೀಗಢದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಕನಸು ದಕ್ಷಿಣ ಆಫ್ರಿಕಾ ತಂಡದ್ದಾಗಿದೆ. ಇನ್ನು ಸೂರ್ಯ ಪಡೆ ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿಯಲ್ಲಿ 2-0 ಮುನ್ನಡೆ ಪಡೆಯುವ ಕನಸು ಕಾಣುತ್ತಿದೆ. ಕಟಕ್ನಲ್ಲಿ ಸಾಧಿಸಿದ 101 ರನ್ಗಳ ಗೆಲುವು ಭಾರತ ತಂಡದ ಮನೋಬಲವನ್ನು ಹೆಚ್ಚಿಸಿದೆ.
ಮಹಾರಾಜ ಯಾದವೀಂದ್ರ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ಬ್ಯಾಟರ್ಗಳಿಗೆ ಸಹಾಯಕವಾಗಲಿದೆ. ಇಲ್ಲಿನ ಪಿಚ್ ಕಪ್ಪು ಮಣ್ಣಿನಿಂದ ಕೂಡಿರುವ ಸಾಧ್ಯತೆ ಇದೆ. ಈ ಮೈದಾನದಲ್ಲಿ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ತಂಡವೇ ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಈ ಪಿಚ್ನಲ್ಲಿ ಆರಂಭದಲ್ಲಿ ವೇಗದ ಬೌಲರ್ಗಳು ವಿಕೆಟ್ ಬೇಟೆ ನಡೆಸುವ ಸಾಧ್ಯತೆ ಇದೆ. ಇನ್ನು ಸ್ಪಿನ್ ಬೌಲರ್ಗಳು ಸಹ ಶಿಸ್ತು ಬದ್ಧ ದಾಳಿ ನಡೆಸಿದರೆ, ವಿಕೆಟ್ ಕಾಲಂ ಫಿಲ್ ಮಾಡಬಹುದು.

ಟೀಮ್ ಇಂಡಿಯಾದ ಆರಂಭಿಕರಾದ ಶುಭಮನ್ ಗಿಲ್ ಹಾಗೂ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮೆಟ್ಟಿನಿಂತು ಬ್ಯಾಟ್ ಮಾಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಸೂರ್ಯ ಮುಂದಾಳತ್ವದಲ್ಲಿ ತಂಡ ಗೆಲುವು ಸಾಧಿಸುತ್ತದೆ. ಆದರೆ ಬ್ಯಾಟ್ ಮೌನಕ್ಕೆ ಶರಣಾಗಿದ್ದು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ತಿಲಕ್ ವರ್ಮಾ ಬಿರುಸಿನ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ.
ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇನ್ನು ಆಲ್ರೌಂಡರ್ ರೂಪದಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದು, ಇವರು ಕಳೆದ ಪಂದ್ಯದಲ್ಲಿ ಆಡಿದ ರೀತಿ ಆಡಿ, ತಂಡಕ್ಕೆ ನೆರವಾಗಬೇಕಿದೆ. ಇನ್ನು ಶಿವಂ ದುಬೆ, ಅಕ್ಷರ್ ಪಟೇಲ್ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗಬೇಕಿದೆ.
ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ನಿಂದ ಎದುರಾಳಿ ಬ್ಯಾಟರ್ಗಳನ್ನು ಕಾಡಬಲ್ಲರು. ಅಲ್ಲದೆ ಇವರು ಪವರ್ ಪ್ಲೇನಲ್ಲಿ ವಿಕೆಟ್ ಬೇಟೆ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ಖ್ಯಾತ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಸಹ ಮಿಡ್ಲ್ ಓವರ್ನಲ್ಲಿ ರನ್ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲರು.

ದಕ್ಷಿಣ ಆಫ್ರಿಕಾ ತಂಡದ ಅನುಭವಿ ಬೌಲರ್ ಲುಂಗಿ ಎನ್ಗಿಡಿ ಮೊದಲ ಪಂದ್ಯದಲ್ಲಿ ಶಿಸ್ತು ಬದ್ಧ ದಾಳಿ ನಡೆಸಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲೂ ಮಿಂಚುವ ಅನಿವಾರ್ಯತೆ ಇದೆ. ಲುಥೋ ಸಿಪಾಮ್ಲಾ ಹಾಗೂ ಮಾರ್ಕೊ ಜಾನ್ಸನ್ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಬ್ಯಾಟರ್ಗಳಾದ ಕ್ವಿಂಟನ್ ಡಿಕಾಕ್, ಏಡನ್ ಮಾರ್ಕ್ರಮ್, ಟ್ರಿಸ್ಟನ್ ಸ್ಟಬ್ಸ್, ಡೆವಾಲ್ಡ್ ಬ್ರೇವಿಸ್ ಸಮಯೋಚಿತ ಆಟವನ್ನು ಆಡಿ ತಂಡದ ಗೆಲುವಿನಲ್ಲಿ ಮಿಂಚಬೇಕು. ಅಂದಾಗ ಗೆಲುವಿನ ಕನಸು ಫಲಿಸುತ್ತದೆ.