
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶ ಕಾಣದೇ ರದ್ದುಗೊಂಡಿದೆ. ಹೀಗಾಗಿ ಐದು ಪಂದ್ಯಗಳ ಸರಣಿಯು 2-2 ಸಮಬಲದೊಂದಿಗೆ ಕೊನೆಗೊಂಡಿದ್ದು, ಉಭಯ ತಂಡಗಳು ಟ್ರೋಫಿಯನ್ನು ಹಂಚಿಕೊಂಡಿವೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಇಂದು (ಭಾನುವಾರ, ಜೂನ್ 19) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು.

ದಕ್ಷಿಣ ಆಫ್ರಿಕಾದ ನಾಯಕ ಕೇಶವ್ ಮಹಾರಾಜ್ ಮೂರು ಬದಲಾವಣೆಗಳೊಂದಿಗೆ ಬೌಲಿಂಗ್ ಮಾಡಲು ಆಯ್ಕೆ ಮಾಡಿದ ನಂತರ ಮಳೆಯು ಪಂದ್ಯದ ಆರಂಭವನ್ನು ಅಡ್ಡಿಪಡಿಸಿತು. ಭಾರತ ಎರಡು ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡಿತು ಮತ್ತು 3.3 ಓವರ್ಗಳ ನಂತರ ಎರಡು ವಿಕೆಟ್ಗೆ 28 ರನ್ ಗಳಿಸಿತ್ತು.
ನಂತರ ಮಳೆಯು ಮತ್ತಷ್ಟು ಮುಂದುವರೆಯಿತು. ತಪಾಸಣೆಯ ಸರಣಿಯ ನಂತರ, ಒದ್ದೆಯಾದ ಔಟ್ಫೀಲ್ಡ್ನಿಂದಾಗಿ ಪಂದ್ಯವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು. ಸರಣಿಯಲ್ಲಿ 6 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮಳೆ ನಿಲ್ಲದ ಕಾರಣ ಪಂದ್ಯವಾಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬೆಂಗಳೂರಿನ ಕೊನೆಯ ಪಂದ್ಯವನ್ನು ರದ್ದುಗೊಳಿಸಲು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಯಿತು. ಇದಕ್ಕೂ ಮೊದಲು ಪ್ರತಿ ತಂಡದ 20 ಓವರ್ಗಳ ಸಂಖ್ಯೆಯನ್ನು 19ಕ್ಕೆ ಇಳಿಸಲಾಗಿತ್ತು.

ಟಿ20 ಸರಣಿಯ ಮೊದಲ ಎರಡು ಪಂದ್ಯಗಳನ್ನು ಆಫ್ರಿಕಾ ತಂಡ ಗೆದ್ದಿದ್ದರೆ, ಇನ್ನೂಳಿದ ಎರಡು ಪಂದ್ಯಗಳನ್ನು ಭಾರತ ತಂಡ ಗೆದ್ದು ಬೀಗಿತು. ಬೆಂಗಳೂರಿನ ಪಂದ್ಯಕ್ಕೆ ಮಳೆ ಅಡಚಣೆಯಾಗುವ ಸಾಧ್ಯತೆ ಹೆಚ್ಚಿತ್ತು. ಕಳೆದ ಎರಡ್ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬರುತ್ತಿರುವುದರಿಂದ ಇಂದು ಕೂಡ ಮಳೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಸೂಚಿಸಿತ್ತು.