
ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಂಡಿದ್ದು ಟೀಮ್ ಇಂಡಿಯಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸುತ್ತಿದೆ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯವಾದ ನಂತರ ಟೀಮ್ ಇಂಡಿಯಾ ಆಟಗಾರರು ಕಣಕ್ಕಿಳಿಯುತ್ತಿರುವ ಪ್ರಥಮ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದ್ದು, ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ವಿಶ್ರಾಂತಿಗೆಂದು ಈ ಸರಣಿಯಿಂದ ಹೊರಗುಳಿದಿದ್ದರು.
ಹೀಗಾಗಿ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ಅವರಿಗೆ ವಹಿಸಿ ಉಪನಾಯಕ ಸ್ಥಾನವನ್ನು ರಿಷಭ್ ಪಂತ್ ಅವರಿಗೆ ನೀಡಲಾಗಿತ್ತು. ಆದರೆ ಸರಣಿಯ ಮೊದಲ ಪಂದ್ಯ ಆರಂಭವಾಗುವ ಮುನ್ನವೇ ನಾಯಕ ಕೆ ಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ಗಾಯದ ಸಮಸ್ಯೆಗೊಳಗಾಗಿ ಸರಣಿಯಿಂದಲೇ ಹೊರಬಿದ್ದರು. ಹೌದು, ನಿನ್ನೆ ( ಜೂನ್ 8 ) ಈ ಕುರಿತಾಗಿ ವಿಷಯವನ್ನು ಹಂಚಿಕೊಂಡ ಬಿಸಿಸಿಐ ಇಬ್ಬರೂ ಸಹ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿಯುತ್ತಿದ್ದು, ಬದಲಿ ನಾಯಕನಾಗಿ ರಿಷಭ್ ಪಂತ್ ನೇಮಕಗೊಂಡಿದ್ದರೆ, ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ ಎಂಬ ಪ್ರಕಟಣೆಯನ್ನು ಹೊರಡಿಸಿತು.
ಹೀಗೆ ಸರಣಿಯಿಂದ ಹೊರಬಿದ್ದ ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ಅವಕಾಶ ಕಳೆದುಕೊಂಡದ್ದಕ್ಕಾಗಿ ಬೇಸರವನ್ನು ಹೊರಹಾಕಿದ್ದಾರೆ. ಮೊದಲಿಗೆ ಕೆಎಲ್ ರಾಹುಲ್ ತವರು ನೆಲದಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಕಳೆದುಕೊಂಡದ್ದಕ್ಕಾಗಿ ತುಂಬಾ ಬೇಸರವಾಗುತ್ತಿದೆ ಎಂಬ ಟ್ವೀಟ್ ಮಾಡಿ ನಿರಾಸೆ ಹೊರಹಾಕಿದ್ದರು. ಇದೀಗ ಕುಲದೀಪ್ ಯಾದವ್ ಕೂಡಾ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿದ್ದು, 'ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಕೈ ತಪ್ಪಿಸಿಕೊಂಡದ್ದು ನಿಜಕ್ಕೂ ಬೇಸರ ತಂದಿದೆ. ಆದರೆ ಕಣಕ್ಕಿಳಿದಿರುವ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವಿದ್ದು ನನ್ನ ಬೆಂಬಲ ಅವರಿಗಿದೆ. ಮುಂದಿನ ದಿನಗಳಲ್ಲಿ ಬಲಿಷ್ಠವಾಗಿ ತಂಡಕ್ಕೆ ಮರಳುವತ್ತ ಗಮನ ಹರಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.