
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಿದೆ. ಮುಂದಿನ ಮೂರು ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ ಮಾತ್ರವೇ ಸರಣಿ ವಶಕ್ಕೆ ಪಡೆಯಲು ಸಾದ್ಯವಿದೆ. ಹೀಗಾಗಿ ರಿಷಬ್ ಪಂತ್ ಪಡೆಯ ಮೇಲೆ ಈಗ ಹೆಚ್ಚಿನ ಒತ್ತಡಗಳಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕ್ರಮಾಂಕದ ಬಗ್ಗೆ ಶ್ರೇಯಸ್ ಐಯ್ಯರ್ ಮಾತನಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಐದು ಓವರ್ಗಳು ಬಾಕಿ ಇರುವಾಗ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಅಂತಿಮ ಹಂತದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದರು. ಈ ಪ್ರದರ್ಶನದ ಬಳಿಕ ಮಾತನಾಡಿದ ಶ್ರೇಯಸ್ ಐಯ್ಯರ್ ಮುಂದಿನ ಪಂದ್ಯಗಳಲ್ಲಿಯೂ ದಿನೇಶ್ ಕಾರ್ತಿಕ್ ಅವರನ್ನು 15 ಓವರ್ಗಳ ಬಳಿಕ ಕಣಕ್ಕಿಳಿಸುವ ಯೋಜನೆ ಮುಂದುವರಿಸಲಾಗುತ್ತದೆ. ಸ್ಲಾಗ್ ಓವರ್ಗಳಿಗಾಗಿ ಅವರನ್ನು ಉಳಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 21 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿಇದರಿಂದಾಗಿ ಭಾರತ 148/6 ರನ್ಗಳನ್ನು ಗಳಿಸಲು ಸಾಧ್ಯವಾಯಿತು.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. 13 ನೇ ಓವರ್ನಲ್ಲಿ ಭಾರತ 90/4 ವಿಕೆಟ್ ಕಳೆದುಕೊಂಡಿತ್ತು. ಈ ಹಂಯತದಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ಗೆ ಇಳಿಯಬೇಕಾಗಿತ್ತು. ಆದರೆ ಮ್ಯಾನೇಜ್ಮೆಂಟ್ ದಿನೇಶ್ ಕಾರ್ತಿಕ್ ಅವರನ್ನು ಡೆತ್ ಓವರ್ಗಳಿಗೆ ಉಳಿಸಿಕೊಳ್ಳಲು ಬಯಸಿತ್ತು. ಹೀಗಾಗಿ ಅಕ್ಷರ್ ಪಟೇಲ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ದಿನೇಶ್ ಕಾರ್ತಿಕ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಆದರೆ ಅಂತಿಮ ಓವರ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಅವರು ಭಾರತ ತಂಡ 148/6 ರನ್ಗಳನ್ನು ಗಳಿಸಲು ಕಾರಣವಾದರು.
ಕಾರ್ತಿಕ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ ಬಗ್ಗೆ ಮಾಜಿ ಕ್ರಿಕೆಟಿಗರು ಮತ್ತು ವಿಶ್ಲೇಷಕರು ಟೀಕಿಸಿದ್ದಾರೆ. ಆದರೆ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಬೆಂಬಲಿಸಿದ ಶ್ರೇಯಸ್ ಐಯ್ಯರ್ ತಂಡ ದಿನೇಶ್ ಕಾರ್ತಿಕ್ ಫಿನಿಶಿಂಗ್ ಕೌಶಲ್ಯಗಳನ್ನು ಸಂಪೂರ್ಣವಾಗಿ ಬಳಸಲು ನಿರ್ಧರಿಸಿದೆ. ಆ ಕಾರಣದಿಂದಾಗಿ ಅವರನ್ನು ಡೆತ್ ಓವರ್ಗಳಿಗೆ ಉಳಿಸಿಕೊಳ್ಳಲಾಯಿತು ಎಂದು ಶ್ರೇಯಸ್ ಅಯ್ಯರ್ ಬಹಿರಂಗಪಡಿಸಿದರು.
"ಇದು ಖಂಡಿತವಾಗಿಯೂ ನಾವು ಮೊದಲೇ ತೆಗೆದುಕೊಂಡಿದ್ದ ರಣತಂತ್ರವಾಗಿದೆ. ನಮಗೆ ಏಳು ಓವರ್ಗಳು ಉಳಿದಿದ್ದಾಗ ಅಕ್ಷರ್ ಪಟೇಲ್ ಸಿಂಗಲ್ಸ್ಗಳನ್ನು ತೆಗೆದುಕೊಳ್ಳಬಲ್ಲಂತಾ ಆಟಗಾರ. ಅವರು ಸ್ಟ್ರೈಕ್ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆ ಸಮಯದಲ್ಲಿ ಯಾರು ಕ್ರಿಸ್ಗೆ ಇಳಿದರೂ ದೊಡ್ಡ ಹೊಡೆತಗಳಿಗೆ ಮುಂದಾಗುವ ಸಂದರ್ಭ ಅದಾಗಿರಲಿಲ್ಲ" ಎಂದಿದ್ದಾರೆ ಶ್ರೇಯಸ್ ಐಯ್ಯರ್.
"ಡಿಕೆ ಬಂದಿದ್ದರೂ ಅವರು ಅದನ್ನೇ ಮಾಡುತ್ತಿದ್ದರು. 15 ಓವರ್ಗಳ ನಂತರ ದಿನೇಶ್ ಕಾರ್ತಿಕ್ ನಮಗೆ ದೊಡ್ಡ ಅಸ್ತ್ರವಾಗಿದ್ದಾರೆ. ಆ ಸಂದರ್ಭದಲ್ಲಿ ಅವರು ಕಣಕ್ಕಿಳಿದರೆ ನೇರವಾಗಿ ಚೆಂಡುಗಳನ್ನು ಬೀಸಲು ಆರಂಭಿಸುತ್ತಾರೆ. ಆರಂಭದಲ್ಲಿ ಅವರು ಕೂಡ ಸವಾಲು ಅನುಭವಿಸಿದರು. ಈ ಪಂದ್ಯದಲ್ಲಿ ಪಿಚ್ ದೊಡ್ಡ ಪಾತ್ರವನ್ನು ವಹಿಸಿತ್ತು. ನಾವು ಈ ರಣತಂತ್ರವನ್ನು ಮುಂದಿನ ಪಂದ್ಯಗಳಲ್ಲಿಯೂ ಬಳಸಿಕೊಳ್ಳಲಿದ್ದೇವೆ" ಎಂದಿದ್ದಾರೆ ಶ್ರೇಯಸ್ ಐಯ್ಯರ್.