ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೂರು ವಿಕೆಟ್ಗಳಿಂದ ಭಾರತವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ನಾಲ್ಕು ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಈ ಸೋಲಿನೊಂದಿಗೆ ಭಾರತದ 11 ಪಂದ್ಯಗಳ ಗೆಲುವಿನ ಓಟಕ್ಕೂ ಬ್ರೇಕ್ ಬಿದ್ದಿದೆ. ಮೊದಲು ಬ್ಯಾಟ್ ಮಾಡಿದ ಭಾರತ 6 ವಿಕೆಟ್ಗೆ 124 ರನ್ ಗಳಿಸಿತು.
ದಕ್ಷಿಣ ಆಫ್ರಿಕಾ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ಕಂಡು ಬಂತು. ಹೀಗಾಗಿ ಭಾರತ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಗಲಿಲ್ಲ. ಆದರೆ, ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ ಭಾರತಕ್ಕೆ ಗೆಲುವು ತಂದುಕೊಡಲು ಸಾಕಷ್ಟು ಕಸರತ್ತು ಮಾಡಿದರು. ಅದ್ಭುತ ಸ್ಪಿನ್ ಬೌಲಿಂಗ್ ಮಾಡುವ ಮೂಲಕ 5 ವಿಕೆಟ್ ಪಡೆದರು. ಇದರ ಹೊರತಾಗಿಯೂ ಹರಿಣಗಳ ಪಡೆ ಮುಂದೆ ಭಾರತ ಸೋಲು ಕಂಡಿತ್ತು.

ವರುಣ್ ಚಕ್ರವರ್ತಿ ಸ್ಪಿನ್ ದಾಳಿಗೆ ತತ್ತರಿಸಿ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಹರಿಣಗಳ ಪಡೆ 7 ವಿಕೆಟ್ಗೆ 86 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಹರಿಣಗಳ ಪಡೆ ಪರ ಟ್ರಿಸ್ಟಾನ್ ಸ್ಟಬ್ಸ್ ಅಜೇಯ 47 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ಸ್ಟಬ್ಸ್ ಮತ್ತು ಜೆರಾಲ್ಡ್ ಕೊಯೆಟ್ಜಿ ಎಂಟನೇ ವಿಕೆಟ್ಗೆ 42 ರನ್ಗಳ ಜೊತೆಯಾಟವನ್ನು ಮಾಡಿ ತಂಡಕ್ಕೆ ಜಯ ತಂದು ಕೊಟ್ಟರು. ಭಾರತದ ಪರ ಟಾಪ್ ಆರ್ಡರ್ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಬೌಲರ್ಗಳು ಸಹ ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, 'ನೀವು ಎಷ್ಟು ರನ್ ಗಳಿಸಿದರೂ ಸದಾ ಬೆಂಬಲಿಸಬೇಕು. ಟಿ20 ಪಂದ್ಯದಲ್ಲಿ ನೀವು 125 ಅಥವಾ 140 ರನ್ ಗಳಿಸಲು ಬಯಸುವುದಿಲ್ಲ. ಆದರೆ ನಮ್ಮ ಹುಡುಗರ ಬೌಲಿಂಗ್ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ವರುಣ್ ಚಕ್ರವರ್ತಿ ಅವರನ್ನು ಹೊಗಳಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ 125 ರನ್ಗಳನ್ನು ಡಿಫೆಂಡ್ ಮಾಡುವಾಗ 5 ವಿಕೆಟ್ ಪಡೆಯುವುದು ನಂಬಲಸಾಧ್ಯವಾಗಿದೆ. ಅವರು ತಮ್ಮ ಆಟದ ಮೇಲೆ ನಿಜವಾಗಿಯೂ ಶ್ರಮಿಸಿದ್ದು, ಅವಕಾಶಕ್ಕಾಗಿ ಅವರು ಕಾಯುತ್ತಿದ್ದರು ಎಂದು ಸೂರ್ಯ ಹೇಳಿದ್ದಾರೆ. 2021ರಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ವರುಣ್ ಭರ್ಜರಿ ಪುನರಾಗಮನ ಮಾಡಿದ್ದು, ನಿರಂತರವಾಗಿ ಟಿ20 ಪಂದ್ಯಗಳಲ್ಲಿ ವಿಕೆಟ್ ಕಬಳಿಸುತ್ತಿದ್ದಾರೆ.