
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಂತಹ ಹಿರಿಯ ಆಟಗಾರರು ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಿಂದ ವಿಶ್ರಾಂತಿ ಪಡೆದ ನಂತರ, ಮಂಗಳವಾರ (ಜನವರಿ 10) ದಿಂದ ಶ್ರೀಲಂಕಾ ವಿರುದ್ಧ ಆರಂಭವಾಗುವ ಏಕದಿನ ಸರಣಿಗೆ ಹಿಂದಿರುಗಲಿದ್ದಾರೆ.
ಇನ್ನು ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮೊಂದಿಗೆ ಇನ್ನಿಂಗ್ಸ್ ತೆರೆಯುವ ಆರಂಭಿಕ ಆಟಗಾರನ ಹೆಸರನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸೋಮವಾರ ದೃಢಪಡಿಸಿದ್ದು, ಶುಭಮನ್ ಗಿಲ್ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಹೀಗಾಗಿ, ದುರದೃಷ್ಟವಶಾತ್ ಇನ್ನೊಬ್ಬ ಆರಂಭಿಕ ಇಶಾನ್ ಕಿಶನ್ ಮೊದಲ ಪಂದ್ಯದಿಂದ ಹೊರಗುಳಿಯಬೇಕಾಗಿದೆ.
ಶುಭಮನ್ ಗಿಲ್ 2022ರಲ್ಲಿ ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಇದೇ ವೇಳೆ ಇಶಾನ್ ಕಿಶನ್ ತನ್ನ ಚೊಚ್ಚಲ ದ್ವಿಶತಕದೊಂದಿಗೆ ತನ್ನನ್ನೂ ಗಮನದಲ್ಲಿಟ್ಟುಕೊಳ್ಳುವಂತೆ ಆಯ್ಕೆಗಾರರ ಗಮನ ಸೆಳೆದಿದ್ದರು. ಆದರೆ, ಶುಭಮನ್ ಗಿಲ್ ಓರ್ವ ಉತ್ತಮ ಆರಂಭಿಕ ಆಟಗಾರ ಎಂದು ಸಾಬೀತುಪಡಿಸಿರುವುದರಿಂದ ತಂಡದ ಮ್ಯಾನೇಜ್ಮೆಂಟ್ ಬಲಗೈ ಬ್ಯಾಟರ್ನನ್ನು ಆಯ್ಕೆ ಮಾಡಲಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

"ಸುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಇಬ್ಬರೂ ಆರಂಭಿಕರು ನಿಜವಾಗಿಯೂ ಉತ್ತಮವಾಗಿ ಆಟವಾಡುತ್ತಿದ್ದಾರೆ. ಆದರೆ ಇಬ್ಬರೂ ಹೇಗೆ ಸಾಗಿದ್ದಾರೆ ಎಂಬುದನ್ನು ನೋಡಿದರೆ, ಶುಭಮನ್ ಗಿಲ್ಗೆ ನಾವು ಮೊದಲ ಅವಕಾಶ ನೀಡುವುದು ನ್ಯಾಯಯುತವಾಗಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಕಳೆದ ಪಂದ್ಯಗಳಲ್ಲಿ ಗಿಲ್ ಸಾಕಷ್ಟು ರನ್ ಗಳಿಸಿದ್ದರು," ಎಂದು ಮೊದಲ ಏಕದಿನ ಪಂದ್ಯದ ಮುನ್ನಾದಿನ ಸುದ್ದಿಗೋಷ್ಠಿಯಲ್ಲಿ ನಾಯಕ ರೋಹಿತ್ ಶರ್ಮಾ ತಿಳಿಸಿದರು.
ಇನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಇಶಾನ್ ಕಿಶನ್ ಅವರ ಪ್ರಯತ್ನ ಮತ್ತು ಪ್ರದರ್ಶನಗಳನ್ನು ಅರ್ಥಮಾಡಿಕೊಂಡಿದ್ದು, ಮುಂದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಆಗಿ ತಂಡದಲ್ಲಿ ಉಳಿಯುತ್ತಾರೆ ಎಂದು ಭರವಸೆ ನೀಡಿದರು.
"ಇಶಾನ್ ಕಿಶನ್ ಅವರು ಭಾರತ ತಂಡಕ್ಕೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ದ್ವಿಶತಕ ಬಾರಿಸಿದರು ಮತ್ತು ಅದನ್ನು ಗಳಿಸಲು ಏನು ಬೇಕು ಎಂದು ನನಗೆ ತಿಳಿದಿದ್ದು, ಅದು ದೊಡ್ಡ ಸಾಧನೆಯಾಗಿದೆ. ಆದರೆ ಪ್ರಾಮಾಣಿಕ ಮತ್ತು ನ್ಯಾಯಯುತವಾಗಿರಲು, ಈ ಮೊದಲು ಉತ್ತಮ ಪ್ರದರ್ಶನ ನೀಡಿದ ಹುಡುಗನಿಗೆ ನಾವು ಹೆಚ್ಚಿನ ಅವಕಾಶ ನೀಡಬೇಕಾಗಿದೆ," ಎಂದು ರೋಹಿತ್ ಶರ್ಮಾ ಹೇಳಿದರು.
"ನಾವು ಇಶಾನ್ ಕಿಶನ್ರೊಂದಿಗೆ ಆಡಲು ಸಾಧ್ಯವಾಗದಿರುವುದು ದುರದೃಷ್ಟಕರ. ಆದರೆ ಕಳೆದ 8-9 ತಿಂಗಳುಗಳಲ್ಲಿ ಭಾರತ ತಂಡದ ಏಕದಿನ ಕ್ರಿಕೆಟ್ ಹೇಗೆ ಸಾಗಿದೆ ಎಂಬುದನ್ನು ನೋಡಿದರೆ, ಶುಭಮನ್ ಗಿಲ್ಗೆ ಅವಕಾಶ ನೀಡುವುದು ನ್ಯಾಯೋಚಿತವಾಗಿದೆ. ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇಶಾನ್ ಕಿಶನ್ ಅವರು ತಂಡದಲ್ಲಿರುತ್ತಾರೆ ಮತ್ತು ಪಂದ್ಯಗಳನ್ನು ಆಡುವಾಗ ನಮಗೆ ಪರಿಸ್ಥಿತಿಗಳು ಹೇಗೆ ಹೊರಹೊಮ್ಮುತ್ತವೆ ಎಂದು ನೋಡುತ್ತೇವೆ," ಎಂದು ರೋಹಿತ್ ಶರ್ಮಾ ಉತ್ತರಿಸಿದರು.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಅರ್ಶ್ದೀಪ್ ಸಿಂಗ್.