ಅಂದು ಸಚಿನ್ ಇಂದು ಜಡೇಜಾ: ರೋಹಿತ್ ಶರ್ಮಾ, ದ್ರಾವಿಡ್ ನಿರ್ಧಾರಕ್ಕೆ ಅಭಿಮಾನಿಗಳು ಕಿಡಿ!

ಭಾರತ ಹಾಗೂ ಶ್ರಿಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಆಕರ್ಷಕ ಪ್ರದರ್ಶನ ನೀಡಿದರೆ ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಅಮೋಘ ಪ್ರದರ್ಶನ ನೀಡಿ ತಂಡದ ದೊಡ್ಡ ಮೊತ್ತಕ್ಕೆ ಕಾರಣವಾದರು. 228 ಎಸೆತಗಳನ್ನು ಎದುರಿಸಿದ ರವೀಂದ್ರ ಜಡೇಜಾ ಅಜೇಯ 175 ರನ್ಗಳಿಸಿ ಕ್ರೀಸ್ನಲ್ಲಿದ್ದರು. ಈ ಸಂದರ್ಭದಲ್ಲಿ 574 ರನ್ಗಳಿಸಿದ್ದ ಟೀಮ್ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಟೀಮ್ ಇಂಡಿಯಾ ಮೊದಲ ಎರಡು ದಿನಗಳ ಆಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಸುಸ್ಥಿತಿಯಲ್ಲಿದ್ದರೂ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಒಮದು ನಿರ್ಧಾರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.
ಹಾಗಾದರೆ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಅಭಿಮಾನಿಗಳು ಕಿಡಿಕಾರಲು ಕಾರಣವೇನು? ಮುಂದೆ ಓದಿ..

175 ರನ್ಗಳಿಸಿ ಅಜೇಯವಾಗಿದ್ದಾಗ ಡಿಕ್ಲೇರ್ ಘೋಷಣೆ
ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಎರಡನೇ ಶತಕವನ್ನು ದಾಖಲಿಸಿದರು. ಶತಕದ ಬಳಿಕ ರವೀಂದ್ರ ಜಡೇಜಾ ಮತ್ತಷ್ಟು ವೇಗವಾಗಿ ರನ್ಗಳಿಸುತ್ತಾ ತಂಡ ಶೀಘ್ರವಾಗಿ ರನ್ಕಲೆಹಾಕಲು ಕಾರಣವಾದರು. ಅಲ್ಲದೆ ವೈಯಕ್ತಿಕ ಮೊತ್ತವನ್ನು 200ರತ್ತ ದಾಟಿಸುವ ಪ್ರಯತ್ನದಲ್ಲಿದ್ದರು. ಆದರೆ 175 ರನ್ಗಳಿಸುವಷ್ಟರಲ್ಲಿ ತಂಡದ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದಾರೆ.

ದ್ವಿಶತಕಗಳಿಸಲು ಸಮಯ ನೀಡಬೇಕಿತ್ತು ಎಂಬ ಅಭಿಮಾನಿಗಳು ಬೇಸರ
ರವೀಂದ್ರ ಜಡೇಜಾ ಅಮೋಘ ಆಟವನ್ನು ಪ್ರದರ್ಶಿಸುವ ಮೂಲಕ ತಂಡಕ್ಕೆ ಅದ್ಭುತ ಕೊಡುಗೆ ನೀಡಿದರು. ಆದರೆ ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಈ ಆಲ್ರೌಂಡರ್ಗೆ ದ್ವಿಶತಕವನ್ನು ಪೂರ್ಣಗೊಳಿಸಲು ಮತ್ತಷ್ಟು ಸಮಯಾವಕಾಶ ನೀಡಬೇಕಾಗಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ರೋಹಿತ್ ಶರ್ಮಾ ಹಾಗೂ ಕೋಚ್ ರಾಹಿಲ್ ಅವರ ಡಿಕ್ಲೇರ್ ನಿರ್ಧಾರಕ್ಕೆ ಅಭಿಮಾನಿಗಳು ಕಟುವಾಗಿ ಟೀಕಿಸಿದ್ದಾರೆ.

ಸಚಿನ್ 194* ರನ್ಗಳ ಇನ್ನಿಂಗ್ಸ್ ನೆನಪಿಸಿದ ಅಭಿಮಾನಿಗಳು
ಇನ್ನು ರವೀಂದ್ರ ಜಡೇಜಾ 175 ರನ್ಗಳಿಸಿದ್ದಾಗ ಡಿಕ್ಲೇರ್ ಘೋಷಣೆ ಮಾಡಿದ ನಿರ್ಧಾರಕ್ಕೆ ಅಭಿಮಾನಿಗಳು ಕಟುವಾಗಿ ಟೀಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಲ್ತಾನ್ ಟೆಸ್ಟ್ನಲ್ಲಿ ಪಾಕಿಸ್ತಾನದ ವಿರುದ್ಧ ಸಚಿನ್ ತೆಂಡೂಲ್ಕರ್ 194 ರನ್ಗಳಿ ಅಜೇಯವಾಗಿದ್ದಾಗ ರಾಹುಲ್ ದ್ರಾವಿಡ್ ಡಿಕ್ಲೇರ್ ಘೋಷಣೆ ಮಾಡಿದ್ದರು. ಈ ಘಟನೆ ಭಾರೀ ಟೀಕೆಗೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಅಂತಾದ್ದೇ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ.

ಇತ್ತಂಡಗಳ ಆಡುವ ಬಳಗ
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ
ಬೆಂಚ್: ಮೊಹಮ್ಮದ್ ಸಿರಾಜ್, ಶುಬ್ಮನ್ ಗಿಲ್, ಕುಲದೀಪ್ ಯಾದವ್, ಉಮೇಶ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೀಕರ್ ಭರತ್, ಸೌರಭ್ ಕುಮಾರ್
ಶ್ರೀಲಂಕಾ ಪ್ಲೇಯಿಂಗ್ XI: ದಿಮುತ್ ಕರುಣರತ್ನೆ(ನಾಯಕ), ಲಹಿರು ತಿರಿಮನ್ನೆ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ಸುರಂಗ ಲಕ್ಮಲ್, ಲಸಿತ್ ಎಂಬುಲ್ಡೆನಿಯಾ, ವಿಶ್ವ ಫೆರ್ನಾಂಡೊ, ಲಹಿರು ಕುಮಾರ
ಬೆಂಚ್: ಪ್ರವೀಣ್ ಜಯವಿಕ್ರಮ, ದಿನೇಶ್ ಚಂಡಿಮಲ್, ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಮೀರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications