ಭಾನುವಾರ, ಜುಲೈ 28ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಪ್ರವಾಸಿ ಭಾರತ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಮಳೆ-ಬಾಧಿತ ಪಂದ್ಯದಲ್ಲಿ ಡಕ್ವರ್ಥ ಲೂಯಿಸ್ ವಿಧಾನದ (DLS) ಮೂಲಕ ಗೆದ್ದ ನಂತರ, ಭಾರತ ತಂಡವು ಶ್ರೀಲಂಕಾ ವಿರುದ್ಧ ಅವರದೇ ನೆಲದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟಿ20 ಸರಣಿಯನ್ನು ವಶಪಡಿಸಿಕೊಂಡಿತು.

ಕಳೆದ ತಿಂಗಳು ಟಿ20 ವಿಶ್ವಕಪ್ ಗೆಲುವಿನ ನಂತರ, ಚುಟುಕು ಸ್ವರೂಪದ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದ ರೋಹಿತ್ ಶರ್ಮಾ ಅವರಿಂದ ನಾಯಕತ್ವದ ಅಧಿಕಾರ ವಹಿಸಿಕೊಂಡ ಸೂರ್ಯಕುಮಾರ್ ಯಾದವ್ ಭಾರತ ತಂಡದ ಪೂರ್ಣ ಪ್ರಮಾಣದ ಟಿ20 ನಾಯಕರಾಗಿ ತಮ್ಮ ಕಾರ್ಯವನ್ನು ಸರಣಿ ಗೆಲುವಿನೊಂದಿಗೆ ಪ್ರಾರಂಭಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕುಸಾಲ್ ಪೆರೆರಾ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು.
ಪವರ್ಪ್ಲೇನಲ್ಲಿ ಆತಿಥೇಯ ಆರಂಭಿಕರಾದ ಪಾಥುಮ್ ನಿಸ್ಸಾಂಕ ಮತ್ತು ಕುಸಾಲ್ ಮೆಂಡೀಸ್ ಉತ್ತಮ ಅಡಿಪಾಯ ಹಾಕಲು ವಿಫಲರಾದರು. ಮೊದಲ ವಿಕೆಟ್ಗೆ ಈ ಜೋಡಿ 3.3 ಓವರ್ಗಳಲ್ಲಿ 26 ರನ್ಗಳ ಜೊತೆಯಾಟವಾಡಿದರು.
ಕುಸಾಲ್ ಮೆಂಡಿಸ್ 11 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರೆ, ಪಾಥುಮ್ ನಿಸ್ಸಾಂಕ 24 ಎಸೆತಗಳಲ್ಲಿ 5 ಬೌಂಡರಿಗಳ ಸಮೇತ 32 ರನ್ ಗಳಿಸಿದರು.

ನಂತರ ಬಂದ ಕುಸಾಲ್ ಪೆರೆರಾ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 53 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಇನ್ನು ಕಮಿಂದು ಮೆಂಡಿಸ್ 23 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ 26 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಾಯಕ ಚರಿತ್ ಅಸಲಂಕಾ 12 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿದರೆ, ದಸುನ್ ಶನಕ ಮತ್ತು ವನಿಂದು ಹಸರಂಗ ಸೊನ್ನೆ ಸುತ್ತಿದರು. ರಮೇಶ್ ಮೆಂಡಿಸ್ 12 ರನ್, ಮಹೀಶ್ ತೀಕ್ಷಣ 2 ಮತ್ತು ಮತೀಶ್ ಪತಿರಾನ 1 ರನ್ ಗಳಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಬೌಲಿಂಗ್ನಲ್ಲಿ ಭಾರತ ತಂಡದ ಪರ ರವಿ ಬಿಷ್ಣೋಯಿ 4 ಓವರ್ಗಳಲ್ಲಿ 26 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅರ್ಶ್ದೀಪ್ ಸಿಂಗ್ 3 ಓವರ್ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 4 ಓವರ್ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ಓವರ್ಗಳಲ್ಲಿ 23 ರನ್ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು.
ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಮತ್ತೆ ಮಳೆ ಸುರಿಯಿತು. ಹೀಗಾಗಿ ಆಟವು ತಡವಾಗಿ ಆರಂಭಗೊಂಡಿತು ಮತ್ತು ಭಾರತ ತಂಡಕ್ಕೆ 8 ಓವರ್ಗಳಲ್ಲಿ 78 ರನ್ಗಳ ಪರಿಷ್ಕೃತ ಟಾರ್ಗೆಟ್ ನೀಡಲಾಯಿತು.
ಭಾರತ ತಂಡದ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ದೊಡ್ಡ ಜೊತೆಯಾಟ ನೀಡಲಿಲ್ಲ. ಏಕೆಂದರೆ ಸಂಜು ಸ್ಯಾಮ್ಸನ್ ತಾನು ಎದುರಿಸಿ ಮೊದಲ ಎಸೆತದಲ್ಲೇ ಡಕ್ಗೆ ಔಟಾದರು. ಇನ್ನು ಯಶಸ್ವಿ ಜೈಸ್ವಾಲ್ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ಗಳ ಮೂಲಕ 30 ರನ್ ಬಾರಿಸಿದರು.

ನಾಯಕ ಸೂರ್ಯಕುಮಾರ್ ಯಾದವ್ ಸ್ಫೋಟಕ ಆಟವಾಡಿ 12 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 26 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 22 ರನ್ ಗಳಿಸಿದರೆ, ರಿಷಭ್ ಪಂತ್ ಅಜೇಯ 2 ರನ್ ಗಳಿಸಿ ಇನ್ನೂ 9 ಎಸೆತಗಳು ಮತ್ತು 7 ವಿಕೆಟ್ಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿಸಿದರು.
ಬೌಲಿಂಗ್ನಲ್ಲಿ ಶ್ರೀಲಂಕಾ ಪರ ಮಹೀಶ್ ತೀಕ್ಷಣ, ವನಿಂದು ಹಸರಂಗ ಮತ್ತು ಮತೀಶ್ ಪತಿರಾನ ತಲಾ ಒಂದೊಂದು ವಿಕೆಟ್ ಪಡೆದರು. ಭಾರತದ ರವಿ ಬಿಷ್ಣೋಯಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.