
ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳನ್ನು ಆಡಲು ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಈಗಾಗಲೇ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದೆ. ಇತ್ತ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಸತತವಾಗಿ ವೈಟ್ ವಾಷ್ ಸಾಧಿಸುತ್ತಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಹೀಗೆ ಪ್ರವಾಸಿ ಶ್ರೀಲಂಕಾಗೆ ಟಿ ಟ್ವೆಂಟಿ ಸರಣಿಯಲ್ಲಿ ವೈಟ್ ವಾಷ್ ಬಳಿದಿದ್ದ ಟೀಮ್ ಇಂಡಿಯಾ ನಂತರ ಮೊಹಾಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಶ್ರೀಲಂಕಾಗೆ ಸೋಲುಣಿಸಿತು.
ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 222 ರನ್ಗಳ ಬೃಹತ್ ಅಂತರದ ಇನ್ನಿಂಗ್ಸ್ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ ಸದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಗಲು ರಾತ್ರಿ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಸಾಮಾನ್ಯ ಮೊತ್ತ ದಾಖಲಿಸಿದೆ. ಹೌದು, ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ 4 ಮತ್ತು ನಾಯಕ ರೋಹಿತ್ ಶರ್ಮಾ 15 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹನುಮ ವಿಹಾರಿ 31 ರನ್ ಗಳಿಸಿದರೆ, 23 ರನ್ಗಳಿಗೆ ಔಟ್ ಆದ ವಿರಾಟ್ ಕೊಹ್ಲಿ ಈ ಇನ್ನಿಂಗ್ಸ್ನಲ್ಲಿಯೂ ಶತಕ ಬಾರಿಸದೇ ನಿರಾಸೆ ಮೂಡಿಸಿದರು. ಇನ್ನುಳಿದಂತೆ ರಿಷಭ್ ಪಂತ್ 39, ಶ್ರೇಯಸ್ ಐಯ್ಯರ್ 92, ರವೀಂದ್ರ ಜಡೇಜಾ 4 ರನ್, ರವಿಚಂದ್ರನ್ ಅಶ್ವಿನ್ 13, ಅಕ್ಷರ್ ಪಟೇಲ್ 9, ಮೊಹಮ್ಮದ್ ಶಮಿ 5 ರನ್ ಗಳಿಸಿದರು ಹಾಗೂ ಯಾವುದೇ ರನ್ ಗಳಿಸದ ಜಸ್ಪ್ರಿತ್ ಬುಮ್ರಾ ಅಜೇಯರಾಗಿ ಉಳಿದರು.
ಈ ಮೂಲಕ ಮೊದಲನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ 252 ರನ್ಗಳಿಗೆ ಆಲ್ಔಟ್ ಆಗಿದ್ದು, 92 ರನ್ಗಳ ಕೊಡುಗೆ ನೀಡಿದ ಶ್ರೇಯಸ್ ಐಯ್ಯರ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ಹೇಳಿಕೊಳ್ಳುವಂತ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ಶ್ರೀಲಂಕಾ ಪರ ಲಸಿತ್ ಎಂಬುಲ್ದೇನಿಯಾ ಮತ್ತು ಪ್ರವೀಣ್ ಜಯವಿಕ್ರಮ ತಲಾ 3 ವಿಕೆಟ್ ಪಡೆದರೆ, ಧನಂಜಯ ಡಿ ಸಿಲ್ವಾ 2 ವಿಕೆಟ್ ಪಡೆದರು ಹಾಗೂ ಸುರಂಗ ಲಕ್ಮಲ್ 1 ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್ ಪಿಚ್ ಎನಿಸಿಕೊಂಡಿದ್ದ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್ನಲ್ಲಿ ಈ ರೀತಿ ಸಾಮಾನ್ಯ ಮೊತ್ತ ಕಲೆಹಾಕಿದ್ದು ಶ್ರೀಲಂಕಾ ಯಾವ ರೀತಿ ಬ್ಯಾಟಿಂಗ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ (ನಾಯಕ), ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ದಿಮುತ್ ಕರುಣಾರತ್ನೆ (ನಾಯಕ), ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ