
ಬೆಂಗಳೂರಿನ ಎನ್. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಶೇಕಡಾ ನೂರಕ್ಕೆ ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಕೆಎಸ್ಸಿಎ ಆಡಳಿತ ಮಂಡಳಿ ನಿರ್ಧರಿಸಿದೆ.
ಮಾರ್ಚ್ 12 ರಿಂದ ಮಾರ್ಚ್ 16ರವರೆಗೆ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವು ಹೊನಲು ಬೆಳಕಿನ ಪಂದ್ಯವಾಗಿದ್ದು, ಪಿಂಕ್ ಬಾಲ್ನಲ್ಲಿ ಆಡಲಾಗುತ್ತದೆ. ಈ ಪಂದ್ಯದಲ್ಲಿ ಈ ಮೊದಲು ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಆದ್ರೀಗ ತನ್ನ ನಿರ್ಧಾರ ಬದಲಿಸಿರುವ ಕೆಎಸ್ಸಿಎ ಶೇ. 100ರಷ್ಟು ಪ್ರೇಕ್ಷಕರಿಗೆ ಅವಕಾಶವನ್ನ ನೀಡಿದೆ.
''ಕೆಎಸ್ಸಿಎ ಈ ಸುದ್ದಿಯನ್ನು ತಿಳಿಸಲು ತುಂಬಾ ಸಂತೋಷದಾಯಕವಾಗಿದೆ. ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗೆ ಉತ್ತಮ ಪ್ರೇಕ್ಷಕರ ಬೆಂಬಲ ಸಿಕ್ಕಿದ್ದು, ವೀಕ್ಷಣೆಯ ದೃಷ್ಟಿಯಲ್ಲೂ ಉತ್ತಮ ಬೆಳವಣಿಗೆ ಕಂಡುಬಂದ ಪರಿಣಾಮ, ಬೆಂಗಳೂರಿನಲ್ಲಿ ಮಾರ್ಚ್ 12-16ರವರೆಗೆ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಮುಂದಿನ ಯಾವುದೇ ನಿರ್ದಿಷ್ಟ ಆದೇಶ ಬರುವತನಕ ಕೆಎಸ್ಸಿಎ ಪೂರ್ಣ ಪ್ರಮಾಣದಲ್ಲಿ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಿದೆ.
ಪೇಟಿಎಂ ಕೆಎಸ್ಸಿಎ ಅಧಿಕೃತ ಟಿಕೆಟ್ ಪಾಲುದಾರನಾಗಿದ್ದು, ಹೆಚ್ಚುವರಿ ಟಿಕೆಟ್ಗಳನ್ನು ಬಾಕ್ಸ್ ಆಫೀಸ್ ಸೇಲ್ ಮೂಲಕ ನೀಡಲಿದ್ದು 11 ಮಾರ್ಚ್ 2022 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾರಾಟ ಮಾಡಲಿದೆ.
ಟಿಕೆಟ್ ದರಗಳು ಮತ್ತು ಸ್ಟ್ಯಾಂಡ್ ವಿವರ ಈ ಕೆಳಗಿದೆ:
ಗ್ರ್ಯಾಂಡ್ ಟೆರೆಸ್: 1250 ರೂಪಾಯಿ (ಗೇಟ್ ನಂ. 18)
ಇ ಎಕ್ಸಿಕ್ಯೂಟಿವ್, ಎನ್ ಸ್ಟ್ಯಾಂಡ್: 750 ರೂಪಾಯಿ (ಗೇಟ್ ನಂ. 18)
ಡಿ ಕಾರ್ಪೊರೇಟ್, ಎ ಸ್ಟ್ಯಾಂಡ್, ಬಿ ಲೋವರ್ ಮತ್ತು ಬಿ ಅಪ್ಪರ್: 500 ರೂಪಾಯಿ (ಗೇಟ್ ನಂ. 19)
ಜಿ ಅಪ್ಪರ್/ ಜಿ ಲೋವರ್ 1 ಮತ್ತು ಜಿ ಲೋವರ್ 2: 100 ರೂಪಾಯಿ (ಗೇಟ್ ನಂ. 2)