
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ 91 ರನ್ಗಳ ಪ್ರಚಂಡ ಗೆಲುವು ಸಾಧಿಸಿತು. ಇದೇ ವೇಳೆ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಭಾರತ ಗೆದ್ದುಕೊಂಡಿತು.
ಇದೇ ವೇಳೆ ಭಾರತದ ಮಾಜಿ ಟೆಸ್ಟ್ ಆಟಗಾರ ವಾಸಿಂ ಜಾಫರ್ ಅವರು ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಅವರನ್ನು "ಗಣನೀಯವಾಗಿ ಸುಧಾರಿಸಿದ್ದಾರೆ' ಎಂದು ಹೇಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಉಮ್ರಾನ್ ಮಲಿಕ್ರನ್ನು ನೋಡಿದ ನಂತರ ಈ ಯುವ ವೇಗಿ ಕೂಡ 'ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯ' ಪಡೆದಿದ್ದಾರೆ ಎಂದು ವಾಸಿಂ ಜಾಫರ್ ತಿಳಿಸಿದರು.
ಐಪಿಎಲ್ 2022ರ ಸಮಯದಲ್ಲಿ ತನ್ನ ಅತಿ ವೇಗದ ಬೌಲಿಂಗ್ನಿಂದ ಭಾರತ ತಂಡದ ಆಯ್ಕೆಗಾರರನ್ನು ಮೆಚ್ಚಿಸಿದ ನಂತರ, ಉಮ್ರಾನ್ ಮಲಿಕ್ ಕಳೆದ ವರ್ಷ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಚೊಚ್ಚಲ ಪ್ರವೇಶ ಮಾಡಿದರು.
ಇನ್ನು ಇತ್ತೀಚಿಗೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಏಳು ವಿಕೆಟ್ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

"ಉಮ್ರಾನ್ ಮಲಿಕ್ ಗಣನೀಯವಾಗಿ ಸುಧಾರಿಸಿದ್ದಾರೆಂದು ನಾನು ಭಾವಿಸಿದ್ದೇನೆ. ನಾನು ಅವರನ್ನು ಐಪಿಎಲ್ನಲ್ಲಿ ನೋಡಿದಾಗಿನಿಂದ, ಅವರು ಈ ಸ್ವರೂಪದಲ್ಲಿ ಯಾವಾಗಲೂ ದುಬಾರಿಯಾಗುತ್ತಾರೆ ಎಂದು ನಾನು ಭಾವಿಸಿದ್ದೆ. ಏಕೆಂದರೆ ಅವನ ಬೌಲಿಂಗ್ನಲ್ಲಿ ಹೆಚ್ಚಿನ ಸ್ವಿಂಗ್ ಅಥವಾ ನಿಧಾನವಾದ ಬಾಲ್ಗಳಿರಲಿಲ್ಲ. ಗಂಟೆಗೆ 145-150 ಕಿಮೀ ವೇಗದಲ್ಲಿ ಬೌಲ್ ಮಾಡುವಾಗ, ಕೆಲವೊಮ್ಮೆ ನೀವು ನಿಧಾನಗತಿ ಬೌಲಿಂಗ್ನಿಂದ ಬ್ಯಾಟರ್ಗಳನ್ನು ವಂಚಿಸಬೇಕು," ಎಂದು ವಾಸಿಂ ಜಾಫರ್ ಇಎಸ್ಪಿಎನ್ಕ್ರಿಕ್ಇನ್ಫೋಗೆ ತಿಳಿಸಿದರು.
"ಹೆಚ್ಚಿನ ವೇಗದಿಂದ ಕೂಡಿರುವ ಬಾಲ್ ಮೈದಾನದಿಂದ ಹೊರಗೆ ಹೋಗುತ್ತದೆ. ಏಕೆಂದರೆ ಬ್ಯಾಟರ್ಗಳು ಆ ವೇಗವನ್ನು ಬಳಸಿ ಸಿಕ್ಸರ್ಗಟ್ಟುವ ಬುದ್ಧಿವಂತರಾಗಿದ್ದಾರೆ. ಆದರೆ ಉಮ್ರಾನ್ ಮಲಿಕ್ ಲೈನ್ ಮತ್ತು ಲೆಂಗ್ತ್ ಬೌಲ್ ಗಣನೀಯವಾಗಿ ಸುಧಾರಿಸಿದೆ ಮತ್ತು ಅವರು ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಅವರು ಈ ಪಂದ್ಯಗಳಲ್ಲಿ ದುಬಾರಿಯಾಗಿದ್ದರೂ, ನಿರ್ಣಾಯಕ ವಿಕೆಟ್ಗಳನ್ನು ಪಡೆದರು. ಹಾಗಾಗಿ, ನಾನು ಅವರನ್ನು ಐಪಿಎಲ್ನಲ್ಲಿ ನೋಡಿದ ನಂತರ ಗಣನೀಯ ಸುಧಾರಣೆಗಳನ್ನು ತೋರಿಸಿದ್ದಾನೆ," ಎಂದು ಮಾಜಿ ಟೆಸ್ಟ್ ಬ್ಯಾಟ್ಸ್ಮನ್ ವಾಸಿಂ ಜಾಫರ್ ಹೇಳಿದರು.
ರಾಜ್ಕೋಟ್ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಉಮ್ರಾನ್ ಮಲಿಕ್ 10.30ರ ಎಕಾನಮಿಯೊಂದಿಗೆ ಮೂರು ಓವರ್ಗಳಲ್ಲಿ 31 ರನ್ಗಳನ್ನು ಬಿಟ್ಟುಕೊಟ್ಟು, ಶ್ರೀಲಂಕಾ ನಾಯಕ ದಸುನ್ ಶನಕ ಮತ್ತು ಮಹೀಶ್ ತೀಕ್ಷಣ ಅವರ ರೂಪದಲ್ಲಿ ಎರಡು ವಿಕೆಟ್ಗಳನ್ನು ಪಡೆದರು.
ರೋಹಿತ್ ಶರ್ಮಾ ನಾಯಕತ್ವದ ಭಾರತ ಮಂಗಳವಾರ (ಜನವರಿ 10) ಗುವಾಹಟಿಯಲ್ಲಿ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲಿದೆ.