
ಮಂಗಳವಾರ, ಜನವರಿ 11 ರಂದು ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 67 ರನ್ಗಳ ಅಮೋಘ ಗೆಲುವು ದಾಖಲಿಸಿತು ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿತು.
ಇನ್ನು ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ತಮ್ಮ ಉತ್ತಮ ಆರಂಭವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಸುವರ್ಣಾವಕಾಶ ಕಳೆದುಕೊಂಡರು ಎಂದು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ನಾಯಕ ರೋಹಿತ್ ಶರ್ಮಾ 9 ಬೌಂಡರಿಗಳು ಮತ್ತು 3 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಮೂಲ್ಯ 83 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಶತಕವನ್ನಾಗಿ ಪರಿವರ್ತಿಸಲು ಮತ್ತು 2023ರ ಹೊಸ ವರ್ಷವನ್ನು ಅತ್ಯುತ್ತಮವಾಗಿ ಆರಂಭಿಸಲು ಅದ್ಭುತವಾಗಿ ಕಾಣಿಸುತ್ತಿದ್ದರು. ಆದರೆ ಶ್ರೀಲಂಕಾ ವೇಗದ ಬೌಲರ್ ದಿಲ್ಶಾನ್ ಮಧುಶಂಕ ಅವರ ಹೊರ ಹೋಗುತ್ತಿದ್ದ ಬಾಲನ್ನು ಕೆಣಕಿ ಕ್ಲೀನ್ ಬೌಲ್ಡ್ ಆದರು.
ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 19.4 ಓವರ್ಗಳಲ್ಲಿ ಆರಂಭಿಕ ವಿಕೆಟ್ಗೆ 143 ರನ್ಗಳ ಜೊತೆಯಾಟ ನಡೆಸಿ ಭಾರತದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿದರು. ಆದರೆ, ಉತ್ತಮವಾಗಿ ಆಡುತ್ತಿದ್ದ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ದೊಡ್ಡ ರನ್ ಗಳಿಸುವ ಅವಕಾಶವನ್ನು ಹೊಂದಿದ್ದರು ಎಂದು ಗೌತಮ್ ಗಂಭೀರ್ ಭಾವಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ಗಿಲ್ ಔಟಾದ ನಂತರ ಕ್ರೀಸ್ಗೆ ಬಂದ 34 ವರ್ಷದ ವಿರಾಟ್ ಕೊಹ್ಲಿ, ಏಕದಿನದಲ್ಲಿ ತಮ್ಮ 45ನೇ ಶತಕ ಮತ್ತು ತವರಿನಲ್ಲಿ 20ನೇ ಶತಕವನ್ನು ದಾಖಲಿಸಿದರು. ವಿರಾಟ್ ಕೊಹ್ಲಿ 87 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 113 ರನ್ ಗಳಿಸಿದರು.

"ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಇಬ್ಬರೂ ಸುಲಭವಾಗಿ 150ರಿಂದ160 ರನ್ ಗಳಿಸಬಹುದೆಂದು ಯೋಚಿಸುತ್ತಿದ್ದೆ. ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಮತ್ತೊಂದು ದ್ವಿಶತಕ ಗಳಿಸುವ ಸಾಧ್ಯತೆಯೂ ಇತ್ತು. ಆದರೆ, ವಿರಾಟ್ ಕೊಹ್ಲಿ ಈ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡರು," ಎಂದು ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ತಿಳಿಸಿದರು.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಗೌತಮ್ ಗಂಭೀರ್, ""ಉನ್ನತ ಮತ್ತು ಶ್ರೇಷ್ಠ ಆಟಗಾರರು ಏನು ಮಾಡುತ್ತಾರೆಂದರೆ, ಉತ್ತಮ ಆರಂಭಗಳನ್ನು ಶತಕಗಳನ್ನಾಗಿ ಪರಿವರ್ತಿಸುತ್ತಾರೆ ಮತ್ತು ವಿರಾಟ್ ಕೊಹ್ಲಿ ಅದನ್ನು ಮಾಡಿ ತೋರಿಸಿದ್ದಾರೆ,'' ಎಂದು ಹೇಳಿದರು.
"ರೋಹಿತ್ ಶರ್ಮಾ ಬಗ್ಗೆ ನನಗೆ ಖಾತ್ರಿಯಿತ್ತು, ಅವರು ಬ್ಯಾಟಿಂಗ್ ಮಾಡಿದ ರೀತಿಯಿಂದಾಗಿ ಇಡೀ ಆಟದಲ್ಲಿ ಪ್ರಾಬಲ್ಯ ಸಾಧಿಸಲು ಇದು ಉತ್ತಮ ಅವಕಾಶವಿತ್ತು. ಅವರು ಬಯಸಿದ್ದರೆ ಅವರು ಇನ್ನೊಂದು ದ್ವಿಶತಕ ಗಳಿಸಲು ನೋಡಬಹುದಿತ್ತು," ಎಂದು ಮಾಜಿ ಎಡಗೈ ಬ್ಯಾಟ್ಸ್ಮನ್ ತಿಳಿಸಿದರು.
ಇನ್ನು ಶುಭಮನ್ ಗಿಲ್ 60 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 80 ರನ್ ಗಳಿಸಿದ್ದಾಗ, ಶ್ರೀಲಂಕಾ ನಾಯಕ ದಸುನ್ ಶನಕ ಅವರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ರೂಪದಲ್ಲಿ ಔಟ್ ಆದರು.
ಶುಕ್ರವಾರ, ಜನವರಿ 12ರಂದು ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಎದುರಿಸಲಿದೆ.