ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 4 ರನ್ಗಳ ಅಂತರದಿಂದ ಸೋಲು ಅನುಭವಿಸಿದೆ. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತೀವ್ರ ಹೋರಾಟ ನಡೆಸಿದವು. ಆದರೆ ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ ಗೆಲುವಿನ ನಗೆ ಬೀರಿದೆ.
ಈ ಪಂದ್ಯದಲ್ಲಿ ಬಹುತೇಕ ಅವಧಿಯಲ್ಲಿ ಭಾರತ ತಂಡ ಗೆಲುವಿನ ಅವಕಾಶವನ್ನು ಹೆಚ್ಚಾಗಿ ಹೊಂದಿತ್ತು. ಆದರೆ ಕೊನೆಯ ಹಂತದಲ್ಲಿ ಮಾಡಿಕೊಂಡ ಒಂದು ಎಡವಟ್ಟು ತಂಡವನ್ನು ಸೋಲಿನತ್ತ ಮುಖಮಾಡುವಂತೆ ಮಾಡಿತು. ಅದಕ್ಕೆ ಕಾರಣವಾಗಿದ್ದು ವೆಸ್ಟ್ ಇಂಡಿಸ್ ತಂಡದ ಆಲ್ರೌಂಡರ್ ಕೇಲ್ ಮೇಯರ್ಸ್. ಅದ್ಭುತ ಫಿಲ್ಡಿಂಗ್ ಮೂಲಕ ಭಾರತಕ್ಕೆ ಆಘಾತ ನೀಡಿದರು.

ಈ ಪಂದ್ಯದಲ್ಲಿ ವಿಂಡೀಸ್ ನಾಯಕ ಪೋವೆಲ್ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡ ನಂತರ ಬ್ರೆಂಡನ್ ಕಿಂಗ್ ಉತ್ತಮ ಆರಂಭ ನೀಡಿದಾಗ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತಿತ್ತು. ಆದರೆ ಯುಜ್ವೇಂದ್ರ ಚಹಾಲ್ ಅವರ ಅದ್ಭುತ ಪ್ರದರ್ಶನ ಐದನೇ ಓವರ್ನಲ್ಲಿ ಕಿಂಗ್ ಮತ್ತು ಕೈಲ್ ಮೇಯರ್ಗಳನ್ನು ಬೇರ್ಪಡಿಸುವ ಮೂಲಕ ಭಾರತದ ಕಮ್ಬ್ಯಾಕ್ಗೆ ಕಾರಣವಾಯಿತು.
ನಂತರ ನಿಕೋಲಸ್ ಪೂರನ್ ಸ್ಪೋಟಕ ಆಟ ಭಾರತಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿತ್ತಾದರೂ ಕುಲ್ದೀಪ್ ಯಾದವ್ ಮಧ್ಯಮ ಓವರ್ನಲ್ಲಿ ಉತ್ತಮ ದಾಳಿ ನಡೆಸಿದ ಪರಿಣಾಮ ಅವರ ವೇಗಕ್ಕೂ ತಡೆ ಬಿದ್ದಿತ್ತು. 15ನೇ ಓವರ್ನಲ್ಲಿ 41 ರನ್ಗಳಿಸಿದ್ದಾಗ ಪೂರನ್ ವಿಕೆಟ್ ಕಳೆದುಕೊಂಡರು. ನಾಯಕ ರೋವ್ಮನ್ ಪೋವೆಲ್ 48 ರನ್ಗಳ ಕೊಡುಗೆ ನೀಡಿದರು. ಅಂತಿಮವಾಗಿ ವೆಸ್ಟ್ ಇಂಡಿಸ್ ತಂಡ ನಿಗದಿತ 20 ಓವರ್ನಲ್ಲಿ 6 ವಕಕೆಟ್ ಕಳೆದುಕೊಂಡು 149 ರನ್ಗಳನ್ನು ಗಳಿಸಲು ಮಾತ್ರವೇ ಶಕ್ತವಾಯಿತು.
ಇದನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಮೊದಲಿಗೆ ಅಕೀಲ್ ಹುಸೇನ್ ಹಾಗೂ ಮೆಕ್ಕಾಯ್ ಆರಂಭಿಕರಿಬ್ಬರನ್ನು ಕೂಡ ಶೀಘ್ರವಾಗಿ ಔಟ್ ಮಾಡುವ ಮೂಲಕ ಆಘಾತ ನೀಡಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ತಮ್ಮ ಎಂದಿನ ಟಿ20 ಶೈಲಿಯ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫವಾಗಿದ್ದು 21 ಎಸೆತಗಳಲ್ಲಿ 21 ರನ್ಗಳಿಸಿದರು. ಈ ಮಧ್ಯೆ ಪದಾರ್ಪಣಾ ಪಂದ್ಯದಲ್ಲಿ ಆಡಿದ ತಿಲಕ್ ವರ್ಮಾ 22 ಎಸೆತಗಳಲ್ಲಿ 39 ರನ್ ಬಾರಿಸಿ ಗಮನಸೆಳೆದು ವಿಕೆಟ್ ಕಳೆದುಕೊಂಡರು.
ಹೀಗೆ ಒತ್ತಡ ಹೆಚ್ಚಾಗುತ್ತಿದ್ದಂತೆ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ಕ್ರೀಸ್ಗೆ ಇಳಿದು ರನ್ನ ಅಂತರವನ್ನು ಕಡಿಮೆಗೊಳಿಸುವ ಪ್ರಯತ್ನ ನಡೆಸಿದರು. ಈ ಇಬ್ಬರು 30 ಎಸೆತಗಳಲ್ಲಿ 37 ರನ್ಗಳಿಸಿವಲ್ಲಿ ತಂಡವನ್ನು ತಂದು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ನಾಯಕ ಪಾಂಡ್ಯ 19 ರನ್ಗಳಿಸಿ ವಿಕೆಟ್ ಕಳೆದುಕೊಂಡರು. ಅದಾದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಕೇಲ್ ಮೇಯರ್ಸ್ ಅವರ ಅದ್ಭುತ ಫಿಲ್ಡಿಂಗ್ಗೆ ರನೌಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ನಂತರ ಬಂದ ಅಕ್ಷರ್ ಪಟೇಲ್ ಕುಲ್ದೀಪ್ ಯಾದವ್ ಸನ್ಣ ಹೋರಾಟ ಪ್ರದರ್ಶಿಸಿದರು ಕೂಡ ಅದು ತಂಡದ ಗೆಲುವಿಗೆ ಸಾಕಾಗಲಿಲ್ಲ.
ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ರನೌಟ್ ಪಂದ್ಯದ ಸೋಲಿಗೆ ಪ್ರಮುಖ ಕಾಣವಾಯಿತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಈ ರನೌಟ್ 2019ರಲ್ಲಿ ಎಂಎಸ್ ಧೋನಿ ಅವರ ರನೌಟನ್ನು ನೆನಪಿಸಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ