ಬುಧವಾರ, ಜುಲೈ 12ರಂದು ಡೊಮಿನಿಕಾದ ರೋಸೋವಿನಲ್ಲಿರುವ ವಿಂಡ್ಸರ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಕೆಲವು ಬದಲಾವಣೆಗೆ ಕೈ ಹಾಕಲಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಯಶಸ್ವಿ ಜೈಸ್ವಾಲ್ ಚೊಚ್ಚಲ ಟೆಸ್ಟ್ ಪಂದ್ಯವಾಡಲಿದ್ದಾರೆ ಮತ್ತು ತಮ್ಮೊಂದಿಗೆ ಬ್ಯಾಟಿಂಗ್ ಆರಂಭಿಸಲಿದ್ದಾರೆ ಎಂದು ಮಂಗಳವಾರ ಖಚಿತಪಡಿಸಿದ್ದಾರೆ.

ಕಳೆದ ತಿಂಗಳು ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನಾಯಕ ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಶುಭ್ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಚೇತೇಶ್ವರ ಪೂಜಾರ ಆ ಸ್ಥಾನದಲ್ಲಿ ಆಡುತ್ತಿದ್ದರು.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾಗದ ಚೇತೇಶ್ವರ ಪೂಜಾರ ಅವರ ಸ್ಥಾನವನ್ನು ತುಂಬಲು ಶುಭ್ಮನ್ ಗಿಲ್ 3ನೇ ಸ್ಥಾನಕ್ಕೆ ಇಳಿಯುತ್ತಾರೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

"ಶುಭ್ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡುತ್ತಾರೆ. ಏಕೆಂದರೆ ಸ್ವತಃ ಅವರೇ 3ನೇ ಸ್ಥಾನದಲ್ಲಿ ಆಡಲು ಬಯಸುತ್ತಾರೆ," ಎಂದು ರೋಹಿತ್ ಶರ್ಮಾ ಬುಧವಾರದ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ನಾನು ನನ್ನ ಎಲ್ಲಾ ರೀತಿಯ ಕ್ರಿಕೆಟ್ ಅನ್ನು 3 ಮತ್ತು 4ನೇ ಕ್ರಮಾಂಕದಲ್ಲಿ ಆಡಿದ್ದೇನೆ ಎಂದು ಕೋಚ್ ರಾಹುಲ್ ದ್ರಾವಿಡ್ ಜೊತೆ ಚರ್ಚಿಸಿದರು. ನಾನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ನನ್ನ ತಂಡಕ್ಕೆ ಉತ್ತಮ ಪ್ರದರ್ಶನ ನೀಡಬಹುದೆಂದು ನಾನು ಭಾವಿಸುತ್ತೇನೆ ಎಂದು ಶುಭ್ಮನ್ ಹೇಳಿದ್ದಾರೆ," ಎಂದು ರೋಹಿತ್ ಶರ್ಮಾ ತಿಳಿಸಿದರು.
"ಹೀಗಾಗಿ ನಾವು ಈ ಬದಲಾವಣೆ ಮಾಡಲು ಪ್ರಯತ್ನಿಸುತ್ತೇವೆ ಮತ್ತು ಇದು ದೀರ್ಘಕಾಲದವರೆಗೆ ಮುಂದುವರಿಯುತ್ತದೆ ಎಂದು ಭಾವಿಸುತ್ತೇನೆ. ನಾವು ಹಲವು ವರ್ಷಗಳಿಂದ ಎಡಗೈ ಆರಂಭಿಕನನ್ನು ಹುಡುಕುತ್ತಿದ್ದೇವೆ. ಈಗ ನಾವು ಆ ಎಡಗೈ ಆಟಗಾರನನ್ನು ಪಡೆದಿದ್ದೇವೆ, ಯಶಸ್ವಿ ಜೈಸ್ವಾಲ್ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ ಮತ್ತು ಅವರು ನಿಜವಾಗಿಯೂ ಆ ಸ್ಥಾನವನ್ನು ತನ್ನದಾಗಿಸಿಕೊಳ್ಳಬಹುದು," ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.
ಯಶಸ್ವಿ ಜೈಸ್ವಾಲ್ ಹೊರತಾಗಿ ವಿಕೆಟ್ ಕೀಪರ್- ಬ್ಯಾಟರ್ ಇಶಾನ್ ಕಿಶನ್ ಕೂಡ ಮೊದಲಕ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಬಹುದು ಎಂದು ತೋರುತ್ತದೆ. ಕೆಎಸ್ ಭರತ್ ಬದಲಿಗೆ ವಿಕೆಟ್ಕೀಪರ್ ಆಗಬಹುದು. ಭರತ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಬ್ಯಾಟಿಂಗ್ನಲ್ಲಿ ಕಳಪೆಯಾಗಿದ್ದಾರೆ. 44ರ ಗರಿಷ್ಠ ಸ್ಕೋರ್ನೊಂದಿಗೆ ಕೇವಲ 18.42 ಸರಾಸರಿ ಹೊಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಬ್ಬರು ಸ್ಪಿನ್ನರ್ಗಳೊಂದಿಗೆ ಆಡಲಿದೆ ಎಂದು ರೋಹಿತ್ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ತಪ್ಪಿಸಿಕೊಂಡಿದ್ದ ರವಿಚಂದ್ರನ್ ಅಶ್ವಿನ್ ಅವರು ರವೀಂದ್ರ ಜಡೇಜಾ ಅವರೊಂದಿಗೆ ಜೊತೆಗಾರನಾಗಲಿದ್ದಾರೆ.
ರವಿಚಂದ್ರನ್ ಅಶ್ವಿನ್ ಜೊತೆಯಲ್ಲಿ ಭಾರತ ತಂಡ ಮೂವರು ವೇಗಿಗಳಾದ ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕಟ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಕಣಕ್ಕಿಳಿಸಬಹುದು.
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್/ಜಯದೇವ್ ಉನಾದ್ಕಟ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್: ಕ್ರೈಗ್ ಬ್ರಾಥ್ವೈಟ್ (ನಾಯಕ), ಜೆರ್ಮೈನ್ ಬ್ಲಾಕ್ವುಡ್, ಟಾಗೆನರೈನ್ ಚಂದ್ರಪಾಲ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ರೇಮನ್ ರೈಫರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಜಿ ಮೋತಿ-ಕನ್ಹೈ, ಕೆಮರ್ ರೋಚ್.