
ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಅಜೇಯ ಜಯ ಸಾಧಿಸಿರುವ ಭಾರತ ತಂಡ ಬುಧವಾರ (ಜುಲೈ 27)ರಂದು ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುತ್ತಿದೆ.
ಇತ್ತಂಡಗಳ ನಡುವೆ ನಡೆಯುವ ಮೂರನೇ ಏಕದಿನ ಪಂದ್ಯವು ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ತಂಡದ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ನಿಕೋಲಸ್ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಮೊದಲು ಬೌಲಿಂಗ್ ಮಾಡಲಿದೆ.
ಬುಧವಾರ ವೆಸ್ಟ್ ಇಂಡೀಸ್ ವಿರುದ್ಧ ಮತ್ತೊಂದು ಕ್ಲೀನ್ಸ್ವೀಪ್ ಮೂಲಕ ವಿಶ್ವದಾಖಲೆ-ಗೆಲುವಿನ ಸಾಧನೆಯನ್ನು ಅಗ್ರಸ್ಥಾನಕ್ಕೇರಿಸುವ ಗುರಿಯನ್ನು ಹೊಂದಿರುವ ಭಾರತೀಯ ತಂಡವು ಗೆಲುವಿನ ಸರಮಾಲೆಗೆ ಮತ್ತೊಂದು ಗೆಲುವನ್ನು ಸೇರಿಸಿಕೊಳ್ಳಲು ಎದುರು ನೋಡುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮಾದರಿಯಲ್ಲಿ ಸತತ 12ನೇ ಸರಣಿ ಜಯವನ್ನು ದಾಖಲಿಸುವ ಮೂಲಕ ಭಾರತ ಭಾನುವಾರದಂದು ವಿಶ್ವದಾಖಲೆಯನ್ನು ನಿರ್ಮಿಸಿದೆ. ತಂಡವೊಂದರ ವಿರುದ್ಧ ಅತಿ ಹೆಚ್ಚು ಜಯ ಗಳಿಸಿದ ಕೀರ್ತಿ ಭಾರತದ್ದಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಕೆಲವು ಮೀಸಲು ಆಟಗಾರರನ್ನು ಕಣಕ್ಕೆ ಇಳಿಸಬಹುದು. ಭಾರತ ತಂಡದ ಬೆಂಚ್ ಬಲವನ್ನು ಪರೀಕ್ಷಿಸುವ ನಡುವೆ ಉತ್ತಮ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ಇಂದಿನ ಪಂದ್ಯದಲ್ಲಿ ಭಾರತ ತಂಡ ಒಂದು ಬದಲಾವಣೆಯನ್ನು ಮಾಡಿದ್ದು, ಅವೇಶ್ ಖಾನ್ ಬದಲಿಗೆ ಪ್ರಸಿದ್ಧ್ ಕೃಷ್ಣ ವಾಪಸ್ ಆಗಿದ್ದಾರೆ. ಇನ್ನೊಬ್ಬ ಯುವ ವೇಗಿ ಅರ್ಷದೀಪ್ ಸಿಂಗ್ ಮತ್ತೆ ಬೆಂಚ್ ಕಾಯಿಸಬೇಕಾಗಿದೆ.
ಅದೇ ರೀತಿ ವೆಸ್ಟ್ ಇಂಡೀಸ್ನ ನಾಯಕ ನಿಕೋಲಸ್ ಪೂರನ್ ಟಾಸ್ ವೇಳೆ ಮಾತನಾಡಿ, ಸತತ ಎರಡು ಸೋಲುಗಳ ಹೊರತಾಗಿಯೂ ಈ ಪಂದ್ಯದಲ್ಲಿ ಗೆಲುವನ್ನು ಪಡೆಯಲು ಸಾಕಷ್ಟು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ತಂಡದಲ್ಲಿ ಅವರು ಮೂರು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ತಿಳಿಸಿದ್ದು, ಜೇಸನ್ ಹೋಲ್ಡರ್, ಕೀಮೊ ಪಾಲ್ ಮತ್ತು ಕೀಸಿ ಕಾರ್ಟಿ ಆಡಲಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ಆಡುವ 11ರ ಬಳಗ
ಭಾರತ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್,
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಕೀಸಿ ಕಾರ್ಟಿ, ನಿಕೋಲಸ್ ಪೂರನ್ (ನಾಯಕ), ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ಕೀಮೋ ಪಾಲ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಹೇಡನ್ ವಾಲ್ಷ್, ಜೇಡನ್ ಸೀಲ್ಸ್