ಭಾರತ ಮತ್ತೊಂದು ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಬಹುತೇಕ ಒಂದು ತಿಂಗಳ ವಿರಾಮದ ಬಳಿಕ ಭಾರತ ಮತ್ತೊಂದು ಸರಣಿಯನ್ನಾಡುತ್ತಿದ್ದು ಈ ಸಂದರ್ಭದಲ್ಲಿ ಭಾರತದ ಆಡುವ ಬಳಗದ ವಿಚಾರವಾಗಿ ಮತ್ತೆ ಚರ್ಚೆಗಳು ಆರಂಭವಾಗಿದೆ. ಅದರಲ್ಲೂ ಪಂತ್ ಗಾಯದ ಬಳಿಕ ವಿಕೆಟ್ ಕೀಪರ್ ಬ್ಯಾಟರ್ ವಿಚಾರವಾಗಿ ಇನ್ನೂ ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿಯೂ ಈ ಸ್ಥಾನ ತುಂಬುವರು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಪಂತ್ ಗಾಯದಿಂದಾಗಿ ಆಡುವ ಬಳಗದಿಂದ ಹೊರಬಿದ್ದ ಬಳಿಕ ಕೆಎಸ್ ಭರತ್ಗೆ ಆ ಅವಕಾಶವನ್ನು ನೀಡಲಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅವಕಾಶ ನೀಡಲಾಗಿದ್ದು ಅಲ್ಲಿ ಬ್ಯಾಟ್ನಿಂದ ವಿಫಲವಾದ ಕೆಎಸ್ ಭರತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಮತ್ತೊಂದು ಅವಕಾಶ ದೊರೆತರೈ ಅದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ.

ಈ ಕಾರಣದಿಂದಾಗಿ ಕೆಎಸ್ ಭರತ್ ಬದಲಿಗೆ ಇಶಾನ್ ಕಿಶನ್ಗೆ ಅವಕಾಶ ನೀಡಬೇಕು ಎಂಬ ಚರ್ಚೆಗಳು ನಡೆಯುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿಯೂ ಇಶಾನ್ ಕಿಶನ್ಗೆ ಅವಕಾಶ ನೀಡಬೇಕು ಎಂಬುದು ಕೆಲ ಕ್ರಿಕೆಟ್ ಪಂಡಿತರು ಹಾಗೂ ಅಭಿಮಾಣಿಗಳ ವಾದವಾಗಿತ್ತು. ಇದೀಗ ಮತ್ತೆ ಅದೇ ಚರ್ಚೆ ಶುರುವಾಗಿದೆ.
ಅಂದಹಾಗೆ ಕೆಎಸ್ ಭರತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ವಿಕೆಟ್ ಹಿಂದೆ ಉತ್ತಮವಾಗಿಯೇ ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಿದ್ದರು. ಆದರೆ ಅವರಿಂದ ದೊಡ್ಡ ಮೊತ್ತದ ರನ್ ಹರಿದು ಬಾರದಿರುವುದು ಅವರ ಸ್ಥಾನಕ್ಕೆ ಕುತ್ತುಬರುವಂತೆ ಮಾಡಿದೆ. ಈ ಮಹತ್ವದ ಪಂದ್ಯದಲ್ಲಿ ಭರತ್ ಅವರು ಮೊದಲ ಇನ್ನಿಂಗ್ಸ್ನಲ್ಲಿ 5 ರನ್ಗಳಿಸಿದ್ದರೆ ಎರಡನೇ ಇ್ನಿಂಗ್ಸ್ಲ್ಲಿ 23 ರನ್ಗಳಿಸಿದ್ದರು. ಒಟ್ಟಾರೆಯಾಗಿ ಕಳೆದ ಆರು ಇನ್ನಿಂಗ್ಸ್ಗಳಲ್ಲಿ ಭರತ್ ಗಳಿಸಿದ್ದು ಕೇವಲ 101 ರನ್ ಮಾತ್ರ.
ಇನ್ನು ಇಶಾನ್ ಕಿಶನ್ ಬ್ಯಾಟಿಂಗ್ ವಿಚಾರದಲ್ಲಿ ರಿಷಭ್ ಪಂತ್ ರೀತಿ ಆಕ್ರಮಣಕಾರಿಯಾಗಿ ಎದುರಾಳಿ ಮೇಲೆ ದಾಳಿಗಿಳಿಯುವ ಆಟಗಾರ. ಆದರೆ ಇಶಾನ್ ಕಿಶನ್ ಏಕದಿನ ಹಾಗೂ ಟಿ20 ಮಾದರಿಯಲ್ಲಿ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೂ ಟೆಸ್ಟ್ ಮಾದರಿಗೆ ಇನ್ನು ಕೂಡ ಪದಾರ್ಪಣೆ ಮಾಡಿಲ್ಲ. ಆದರೆ ಟೆಸ್ಟ್ ಮಾದರಿಯಲ್ಲಿ ಸುದೀರ್ಘ ಕಾಲ ವಿಕೆಟ್ ಕೀಪಿಂಗ್ನಂಥಾ ಜವಾಬ್ಧಾರಿ ನಿರ್ವಹಿಸಲು ಕಿಶನ್ ಎಷ್ಟರಮಟ್ಟಿಗೆ ಸಮರ್ಥರು ಎಂಬುದು ಮ್ಯಾನೇಜ್ಮೆಂಟ್ಗೆ ಕಾಡುವ ಪ್ರಶ್ನೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಎರಡು ದಿನಗಳ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ. ಈ ಅಭ್ಯಾಸ ಪಂದ್ಯದಲ್ಲಿ ಯಾರು ಉತ್ತಮವಾದ ಪ್ರದರ್ಶನ ನೀಡುತ್ತಾರೆ ಅವರಿಗೆ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ.
ಟೀಮ್ ಇಂಡಿಯಾ ಟೆಸ್ಟ್ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.