ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಟೀಮ್ ಇಂಡಿಯಾದ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನೇತೃತ್ವದ ಬಲಿಷ್ಠ ತಂಡವನ್ನು ಈ ಸರಣಿಗೆ ಆಯ್ಕೆ ಮಾಡಲಾಗಿದ್ದು ಕೆಲ ಯುವ ಆಟಗಾರರಿಗೂ ಇಲ್ಲಿ ಅವಕಾಶ ದೊರೆತಿದೆ. ಈ ಪ್ರವಾಸದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಓರ್ವ ವೇಗದ ಬೌಲರ್ ತಮ್ಮ ಆಯ್ಕೆಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಹೀಗೆ ಟೀಮ್ ಇಂಡಿಯಾದಲ್ಲಿ ತಮ್ಮ ಆಯ್ಕೆಗೆ ಅಚ್ಚರಿ ವ್ಯಕ್ತಪಡಿಸಿರುವ ವೇಗಿ ಬೇರೆ ಯಾರೂ ಅಲ್ಲ, ನವ್ದೀಪ್ ಸೈನಿ. ಕೌಂಟಿ ಕ್ರಿಕೆಟ್ನಲ್ಲಿ ಆಡಲು ಸಜ್ಜಾಗಿತ್ತಿದ್ದ ನವ್ದೀಪ್ ಸೈನಿಗೆ ಭಾರತ ತಂಡದ ಕರೆ ಬಂದಿದ್ದು ಸಂತಸ ಹಂಚಿಕೊಂಡಿದ್ದಾರೆ. ಕೌಂಟಿ ಕ್ರಿಕೆಟ್ ಆಡಲು ಯುಕೆಗೆ ಬಂದಿಳಿದ ನವ್ದೀಪ್ ಸೈನಿಗೆ ಅಲ್ಲಿ ಈ ಸುದ್ದಿ ಬಂದಿದ್ದು ಇದು ಅಚ್ಚರಿ ಮೂಡಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"ನಾನು ಇಲ್ಲಿಗೆ ಕೌಂಟಿ ಕ್ರಿಕೆಟ್ ಆಡುವ ಸಲುವಾಗಿ ಇವತ್ತು ಇಲ್ಲಿಗೆ ಬಂದಿಳಿದಿದ್ದೇನೆ. ವಿಮಾನ ನಿಲ್ದಾಣದಿಂದ ಹೊರಬಂದ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ವಿಚಾರ ತಿಳಿಯಿತು" ಎಂದು ಇಂಡಿಯನ್ಸ್ ಎಕ್ಸ್ಪ್ರೆಸ್ಗೆ ಲಂಡನ್ನಿಂದಲೇ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರವಾಸಕ್ಕೆ ಆಯ್ಕೆಯಾಗುವುದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ ನವ್ದೀಪ್ ಸೈನಿ.
"ಪ್ರಾಮಾಣಿಕವಾಗೊ ಹೇಳಬೇಕೆಂದರೆ ನಾನು ಈ ಆಯ್ಕೆಯನ್ನು ನಿರೀಕ್ಷಿಸಿರಲಿಲ್ಲ. ಹೌದು, ಐಪಿಎಲ್ನಲ್ಲಿ ಡ್ಯೂಕ್ಸ್ ಬಾಲ್ನಲ್ಲಿ ನಾನು ಅಭ್ಯಾಸವನ್ನು ನಡೆಸಿದ್ದೆ. ಬಹುಶಃ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಸಂದರ್ಭದಲ್ಲಿ ನೆಟ್ ಬೌಲರ್ ಆಗಿ ಆಯ್ಕೆ ಮಾಡಬಹುದು ಎಂದುಕೊಂಡಿದ್ದೆ" ಎಂದು ನವ್ದೀಪ್ ಸೈನಿ ಹೇಳಿಕೆ ನೀಡಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಒಂದು ಕೌಂಟಿ ಪಂದ್ಯವನ್ನು ಆಡುವ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದಿರುವ ಅವರು ಈ ಮೂಲಕ ವೆಸ್ಟ್ ಇಂಡೀಸ್ ಸರಣಿಗೆ ಉತ್ತಮ ಸಿದ್ಧತೆಯಾಗಲಿದೆ ಎಂದಿದ್ದಾರೆ. "ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಒಂದು ಪಂದ್ಯವನ್ನು ಆಡುವ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಇಲ್ಲಿ ನಗೆ ಕೆಲ ಓವರ್ಗಳ ಬೌಲಿಂಗ್ ಮಾಡುವ ಅವಕಾಶ ದೊರೆತರೆ ಅದು ವಿಂಡೀಸ್ ಪ್ರವಾಸಕ್ಕೆ ಉತ್ತಮ ಸಿದ್ಧತೆಯಾಗಲಿದೆ" ಎಂದಿದ್ದಾರೆ ಸೈನಿ.
"ಇದು ವೆಸ್ಟ್ ಇಂಡೀಸ್ಗೆ ನನ್ನ ಎರಡನೇ ಪ್ರವಾಸ. ಕಳೆದ ಬಾರಿ ಆಡುವ ಅವಕಾಶ ದೊರೆತಿರಲಿಲ್ಲ. ಆದರೆ ಈ ಬಾರಿ ಆ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಅಲ್ಲಿನ ವಾತಾವರಣದ ಅರಿವು ನನಗಿದೆ. ಪಿಚ್ಗಳು ನಿಧಾನ ಮತ್ತು ತಗ್ಗಿದ್ದು ಭಾರತದರುವಂತೆಯೇ ಇರಲಿದೆ" ಎಂದಿದ್ದಾರೆ ನವ್ದೀಪ್ ಸೈನಿ ಪ್ರತಿಕ್ರಿಯಿಸಿದ್ದಾರೆ.
ಟೀಮ್ ಇಂಡಿಯಾ ಟೆಸ್ಟ್ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.