ಜುಲೈ 12ರಿಂದ ಆರಂಭವಾಗುವು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶುಕ್ರವಾರ, ಜೂನ್ 23ರಂದು ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಪ್ರಕಟಿಸಿದೆ.
ಭಾರತ ಕ್ರಿಕೆಟ್ ತಂಡವು ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಜುಲೈ 12ರಂದು ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರವಾಸ ಪ್ರಾರಂಭವಾಗಲಿದೆ. ನಂತರ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ.

ಇದೇ ವೇಳೆ ಭಾರತದ ಅನುಭವಿ ಟೆಸ್ಟ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಭಾರತದ ಟೆಸ್ಟ್ ತಂಡಕ್ಕೆ ಅವರು ವಾಪಸಾತಿ ಅಲ್ಪಕಾಲಿಕವಾಗಿತ್ತು.
35 ವರ್ಷದ ಚೇತೇಶ್ವರ ಪೂಜಾರ ಅವರು ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನದ ನಂತರ ತಂಡದಿಂದ ಕೈಬಿಡಲಾಗಿದೆ. ಆ ಪಂದ್ಯದಲ್ಲಿ ಭಾರತ ತಂಡ 209 ರನ್ಗಳ ಹೀನಾಯ ಸೋಲು ಅನುಭವಿಸಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಮುನ್ನ ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಶಿಪ್ ಡಿವಿಷನ್ 2ರಲ್ಲಿ ಆಡಿದ್ದ ಚೇತೇಶ್ವರ ಪೂಜಾರ, ಓವಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 14 ಮತ್ತು 27 ರನ್ ಗಳಿಸಿದರು.

ಭಾರತ ಟೆಸ್ಟ್ ತಂಡದಿಂದ ಚೇತೇಶ್ವರ ಪೂಜಾರ ಕೈಬಿಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಜನವರಿ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 1-2 ಸೋಲಿನ ನಂತರ ಅವರನ್ನು ಮೊದಲ ಬಾರಿಗೆ ಕೈಬಿಡಲಾಗಿತ್ತು.
ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಬಲಗೈ ಬ್ಯಾಟರ್ ಆಡಿರಲಿಲ್ಲ. ಆದರೆ, ಚೇತೇಶ್ವರ ಪೂಜಾರ ಅವರು ಭಾರತ ಮತ್ತು ಇಂಗ್ಲೆಂಡ್ನ ದೇಶೀಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡಕ್ಕೆ ಮರಳಿದ್ದರು.
ಮರುನಿಗದಿಪಡಿಸಿದ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಇಂಗ್ಲೆಂಡ್ ವಿರುದ್ಧ 13 ಮತ್ತು 66 ರನ್ ಗಳಿಸಿದ್ದರು. ಅನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿದ್ದರು. ಆಗ 90 ಮತ್ತು 102 ರನ್ ಗಳಿಸಿದರು. ಆ ಬಳಿಕ 2023ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ 59 ಗರಿಷ್ಠ ಸ್ಕೋರ್ನೊಂದಿಗೆ 140 ರನ್ ಗಳಿಸಲಷ್ಟೇ ಶಕ್ತರಾದರು.
ಇನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಜಿಂಕ್ಯ ರಹಾನೆ ಅವರನ್ನು ಭಾರತ ಟೆಸ್ಟ್ ತಂಡದ ಉಪನಾಯಕರನ್ನಾಗಿ ನೇಮಿಕ ಮಾಡಲಾಗಿದೆ. ಅಜಿಂಕ್ಯ ರಹಾನೆ ತಮ್ಮ ಟೆಸ್ಟ್ ಪುನರಾಗಮನ ಪಂದ್ಯದಲ್ಲಿ 89 ಮತ್ತು 46 ರನ್ಗಳೊಂದಿಗೆ ಉತ್ತಮವಾಗಿ ಆಡಿದ್ದರು. ಇನ್ನು ಆಸ್ಟ್ರೇಲಿಯಾ ವಿರುದ್ಧ ಫೈನಲ್ನಲ್ಲಿ ನಾಲ್ಕು ವಿಕೆಟ್ಗಳನ್ನು ಕಬಳಿಸಿದ ನಂತರ, ಭಾರತದ ವೇಗಿ ಮೊಹಮ್ಮದ್ ಶಮಿಗೆ ಕೆರಿಬಿಯನ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದ್ದು, ಮೊದಲ ಪಂದ್ಯ ಜುಲೈ 12ರಿಂದ 16ರವರೆಗೆ ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ನಡೆಯಲಿದ್ದರೆ, ಎರಡನೇ ಪಂದ್ಯ ಜುಲೈ 20ರಿಂದ 24ರವರೆಗೆ ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆಯಲಿದೆ.