ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ನಿರ್ಣಾಯಕ ಪಂದ್ಯ ಇಂದು ನಡೆಯಲಿದೆ. ಟ್ರಿನಿಡಾಡ್ನ ಟರೌಬಾದಲ್ಲಿರುವ ಬ್ರಿಯಾನ್ ಲಾರಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ಇಲ್ಲಿ ಗೆದ್ದ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ರವೀಂದ್ರ ಜಡೇಜಾ ಮಾತನಾಡಿದ್ದು ಕೊನಡಯ ಪಂದ್ಯವನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅನಿರೀಕ್ಷಿತ ಆಘಾತಕ್ಕೆ ಒಳಗಾಯಿತು. ಮೊದಲ ಪಂದ್ಯವನ್ನು ಗೆದ್ದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ ಭಾರತ ತಂಡ ಎರಡು ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿದು ಕೈಸುಟ್ಟುಕೊಂಡಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲು ಅನುಭವಿಸಿದ್ದಲ್ಲದೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಭಾರೀ ಹಿನ್ನಡೆ ಅನುಭವಿಸಿತು. ಹೀಗಾಗಿ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿದೆ.

"ವಾವು ಬಹಳ ಆತ್ಮವಿಶ್ವಾಸದಿಂದ ಇದ್ದು ಯಾವುದೇ ಅನುಮಾನಗಳು ನಮ್ಮಲ್ಲಿ ಇಲ್ಲ. ನಾವು ಒಂದು ಪಂದ್ಯವನ್ನು ಸೋತಿದ್ದೇವೆ ಎನ್ನುವುದು ನಮಗೆ ಗೊತ್ತಿದೆ. ಆದರೆ ಅದು ಪರವಾಗಿಲ್ಲ, ಆಟದ ಒಂದು ಭಾಗ ಅದು. ವಿಶೇಷವಾಗಿ ಪ್ರಯತ್ನ ಪಟ್ಟಾಗ ಇಂಥಾದ್ದು ನಡೆಯುತ್ತದೆ. ನಾವು ಖಂಡಿತವಾಗಿಯೂ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿದ್ದು ಸರಣಿಯನ್ನು ಗೆಲ್ಲಲಿದ್ದೇವೆ" ಎಂದಿದ್ದಾರೆ ರವೀಂದ್ರ ಜಡೇಜಾ.
ಗಮನಾರ್ಹ ಸಂಗತಿಯೆಂದರೆ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿತ್ತು. ಹೀಗಾಗಿ ಅಕ್ಷರ್ ಪಟೇಲ್ ಮತ್ತು ಸಂಜು ಸ್ಯಾಮ್ಸನ್ ಅವರು ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದರು. ಸರಣಿಯ ಮೊದಲ ಪಂದ್ಯದಲ್ಲಿ 115 ರನ್ಗಳ ಸಾಧಾರಣ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ ಭಾರತ ಈ ಎರಡನೇ ಪಂದ್ಯದಲ್ಲಿ ಅದ್ಭುತ ಆರಂಭದ ಹೊರತಾಗಿಯೂ ನೀರಸವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು.
ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳದೆ 90 ರನ್ಗಳನ್ನು ಗಳಿಸಿದ್ದ ಟೀಮ್ ಇಂಡಿಯಾ ನಂತರ 181 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಭಾರತದ ಪರವಾಗಿ ಇಶಾನ್ ಕಿಶನ್ 55 ರನ್ಗಳಿಸಿದ್ದರೆ ಉಳಿದಂತೆ ಶುಬ್ಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಮಾತ್ರವೇ 20 ರನ್ಗಳ ಗಡಿದಾಟಿದ್ದರು. ವೆಸ್ಟ್ ಇಂಡಿಸ್ ಬೌಲರ್ಗಳಾದ ಗುಡಕೇಶ್ ಮೋಟಿ ಮತ್ತು ರೊಮಾರಿಯೋ ಶಫರ್ಡ್ ತಲಾ ಮೂರು ವಿಕೆಟ್ ಕಬಳಿಸಿ ತಂಡಕ್ಕೆ ಆಘಾತ ನೀಡಿದ್ದರು.