
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ಏಕದಿನ ತಂಡದ ನಾಯಕತ್ವ ವಹಿಸಿಕೊಂಡ ನಂತರ ಭಾರತ ಮೊದಲ ಏಕದಿನ ಸರಣಿಯನ್ನು ವೆಸ್ಟ್ ಇಂಡಿಸ್ ವಿರುದ್ಧ ಗೆದ್ದುಕೊಂಡಿದೆ. ಬುಧವಾರ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 44 ರನ್ಗ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಸರಣಿ ಭಾರತದ ಕೈವಶವಾಗಿದೆ. ಈ ಪಂದ್ಯದಲ್ಲು ಗೆಲುವು ಸಾಧಿಸಿದ ಬಳಿಕ ಭಾರತೀಯ ಕ್ರಿಕೆಟ್ ತಂಡದ ನಾಯಕ ರೊಹಿತ್ ಶರ್ಮಾ ಬಗ್ಗೆ ಸಾಕಷ್ಟ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಕೂಡ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸಲ್ಮಾನ್ ಬಟ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಎರಡನೇ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದರು. ಈ ಸಂದರ್ಭದಲ್ಲಿ ನಾಯಕನಾಗಿ ರೋಹಿತ್ ಶರ್ಮಾ ತಂಡದ 237 ರನ್ಗಳನ್ನು ರಕ್ಷಣೆ ಮಾಡಿಕೊಳ್ಳಲು ತೆಗೆದುಕೊಂಡ ಕೆಲ ಆಕ್ರಮಣಕಾರಿ ನಿರ್ಧಾರಗಳನ್ನು ಪ್ರಶಂಸಿಸಿದ್ದಾರೆ. ಭಾರತೀಯ ನಾಯಕ ಪರಿಣಾಮಕಾರಿ ಫೀಲ್ಡಿಂಗ್ ನಿಯೋಜನೆ ಹಾಗೂ ಪಂದ್ಯದುದ್ದಕ್ಕೂ ಸೂಕ್ತ ಸಂದರ್ಭದಲ್ಲಿ ಮಾಡಿದ ಬೌಲಿಂಗ್ ಬದಲಾವಣೆಗೆ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
"ರೋಹಿತ್ ಶರ್ಮಾ ಅವರ ಫಿಲ್ಡಿಂಗ್ ನಿಯೋಜನೆ ಅತ್ಯಂತ ಪರಿಣಾಮಕಾರಿಯಾಗಿತ್ತು. ಆಕ್ರಮಣಕಾರಿ ಮನೋಭಾವ ಹಾಗೂ ಬೌಲಿಂಗ್ ಬದಲಾವಣೆಗಳನ್ನು ನೋಡುವುದಕ್ಕೂ ಉತ್ತಮವಾಗಿತ್ತು. ಅವರ ನಾಯಕತ್ವದಲ್ಲಿ ಅವರು ಅತ್ಯುನ್ನತ ಮಟ್ಟದಲ್ಲಿದ್ದರು. ಕಡಿಮೆ ರನ್ಗಳ ಪಂದ್ಯ ರಣತಂಥ್ರದ ದೃಷ್ಟಿಯಿಂದ ಸಾಕಷ್ಟು ಪರೀಕ್ಷೆಗೆ ಒಳಪಡಿಸುತ್ತದೆ" ಎಂದು ಸಲ್ಮಾನ್ ಬಟ್ ಹೇಳಿಕೆ ನೀಡಿದ್ದಾರೆ.
ಇನ್ನು ಇದೇ ಸಮದರ್ಭದಲ್ಲಿ ಸಲ್ಮಾನ್ ಬಟ್ ಭಾರತೀಯ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆಯೂ ಪಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿರಾಟ್ ಕೊಹ್ಲಿ ಐಸಿಸಿ ಟ್ರೋಫಿಗಳನ್ನು ಗೆಲ್ಲದಿದ್ದರೂ ಆತ ನಾಯಕನಾಗಿ ಸಾಕಷ್ಟು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಾಯಕತ್ವದ ದಾಖಲೆ ಅದ್ಭುತವಾಗಿದೆ ಎಂದಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಆ ಹುದ್ದೆಗೆ ರೋಹಿತ್ ಶರ್ಮಾ ಸೂಕ್ತವಾದ ಆಯ್ಕೆ ಎಂದು ಸಲ್ಮಾನ್ ಬಟ್ ಹೇಳಿಕೊಂಡಿದ್ದಾರೆ.
"ಭಾರತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬ ಕಾರಣಕ್ಕೆ ನಾವು ಕೊಹ್ಲಿ ನಾಯಕತ್ವವನ್ನು ಕಟುವಾಗಿ ಟೀಕಿಸುತ್ತೇವೆ. ಆದರೆ ಅವರ ಗೆಲುವಿನ ಪ್ರತಿಶತ ಸಾಕಷ್ಟು ಅತ್ಯುತ್ತಮವಾಗಿದೆ. ಇನ್ನು ರೋಹಿತ್ ಶರ್ಮಾ ನಾಯಕನಾಗಿ ರಣತಂತ್ರದಲ್ಲಿ ಅದ್ಭುತವಾಗಿದ್ದು ಅದನ್ನು ಅವರು ಐಪಿಎಲ್ನಲ್ಲಿ ಸಾಬೀತುಪಡಿಸಿದ್ದಾರೆ. ಆತ ನಾಯಕತ್ವಕ್ಕೆ ಖಂಡಿತಾ ಅರ್ಹತೆಯನ್ನು ಪಡೆಯುತ್ತಾರೆ. ಆದರೆ ವಿರಾಟ್ ಕೊಹ್ಲಿ ಅತ್ಯುತ್ತಮ ನಾಯಕನಲ್ಲ ಎಂಬ ಮಾತನ್ನು ನಾನು ಹೇಳಲಾರೆ" ಎಂದಿದ್ದಾರೆ ಸಲ್ಮಾನ್ ಬಟ್.
ಇನ್ನು ಈ ಸಂದರ್ಭದಲ್ಲಿ ಅಗ್ರ ಕ್ರಮಾಂಕದ ಪ್ರಮುಖ ಆಟಗಾರರು ಶೀಘ್ರವಾಗಿ ವಿಕೆಟ್ ಕಳೆದುಕೊಂಡಾಗ ಸೂರ್ಯಕುಮಾರ್ ಯಾದವ್ ನೀಡಿದ ಪ್ರದರ್ಶನದ ಬಗ್ಗೆಯೂ ಸಲ್ಮಾನ್ ಬಟ್ ವಿಶೇಷ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಶೀರ್ಘರವಾಗಿ ವಿಕೆಟ್ ಕಳೆದುಕೊಂಡಿದ್ದಾಗಲೂ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಒತ್ತಡದ ಸಂದರ್ಭದಲ್ಲಿ ಅದ್ಭುತ ಇನ್ನಿಂಗ್ಸ್ವೊಂದನ್ನು ಕಟ್ಟಿದ್ದಾರೆ. ಇದು ತಂಡಕ್ಕೆ ಬಹಳ ಮುಖ್ಯವಾಗಿತ್ತು. ಇದು ಬಲಿಷ್ಠ ಮನೋಧರ್ಮ ಹೊಂದಿರುವ ಆಟಗಾರನ ಅದ್ಭುತವಾದ ಇನ್ನಿಂಗ್ಸ್ನ ಸಂಕೇತವಾಗಿದೆ" ಎಂದಿದ್ದಾರೆ.