
ದ್ವಿತೀಯ ಪಂದ್ಯದಲ್ಲಿ ಇಬ್ಬರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ
ಪ್ರಥಮ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ವಿಕೆಟ್ ಹಿಂದೆ ಉತ್ತಮ ಪ್ರದರ್ಶನ ನೀಡಿದರಾದರೂ ಬ್ಯಾಟಿಂಗ್ನಲ್ಲಿ ಯಶಸ್ವಿಯಾಗಲಿಲ್ಲ. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ 18 ಎಸೆತಗಳಲ್ಲಿ ಕೇವಲ 12 ರನ್ ಕಲೆಹಾಕಿ ನಿರಾಸೆ ಮೂಡಿಸಿದರು. ಇನ್ನು ತನ್ನ ಪಾಲಿನ ಎಲ್ಲಾ 10 ಓವರ್ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ 62 ರನ್ ನೀಡಿದರು ಹಾಗೂ ಯಾವುದೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಹೀಗೆ ಪ್ರಥಮ ಪಂದ್ಯದಲ್ಲಿ ನಿರೀಕ್ಷಿಸಿದ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿರುವ ಸಂಜು ಸ್ಯಾಮ್ಸನ್ ಮತ್ತು ಪ್ರಸಿದ್ಧ್ ಕೃಷ್ಣ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಿಂದ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸ್ಯಾಮ್ಸನ್ ಮತ್ತು ಪ್ರಸಿದ್ಧ್ ಕೃಷ್ಣ ಬದಲು ಕಣಕ್ಕಿಳಿಯುವವರು ಯಾರು?
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮತ್ತು ಬೌಲರ್ ಪ್ರಸಿದ್ಧ್ ಕೃಷ್ಣ ವಿಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಿಂದ ಹೊರಗುಳಿದರೆ, ಬದಲಿ ಆಟಗಾರರಾಗಿ ವಿಕೆಟ್ ಕೀಪರ್ ಇಶಾನ್ ಕಿಶನ್ ಮತ್ತು ವೇಗಿ ಅರ್ಷ್ ದೀಪ್ ಸಿಂಗ್ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ. ಆರಂಭಿಕರಾಗಿ ಶಿಖರ್ ಧವನ್ ಮತ್ತು ಶುಬ್ ಮನ್ ಗಿಲ್ ಉತ್ತಮ ಪ್ರದರ್ಶನ ನೀಡಿರುವ ಕಾರಣ ದ್ವಿತೀಯ ಏಕದಿನ ಪಂದ್ಯದಲ್ಲಿಯೂ ಈ ಜೋಡಿಯೇ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಹಾಗೂ ಸಂಜು ಸ್ಯಾಮ್ಸನ್ ಬದಲಾಗಿ ಕಣಕ್ಕಿಳಿಯಲಿರುವ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯವನ್ನು ಹೊಂದಿದ್ದು, ಆರಂಭಿಕರು ಬೇಗನೇ ಔಟ್ ಆದರೂ ಸಹ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬೌಂಡರಿಗಳನ್ನು ಬಾರಿಸಿ ಎದುರಾಳಿಗಳ ಮೇಲೆ ಒತ್ತಡ ಹೇರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ ಏಕೈಕ ಟಿ ಟ್ವೆಂಟಿ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಮಿಂಚಿದ್ದ ಅರ್ಶದೀಪ್ ಸಿಂಗ್ ಪ್ರಸಿದ್ಧ್ ಕೃಷ್ಣ ಬದಲಾಗಿ ಕಣಕ್ಕಿಳಿದು ಉತ್ತಮ ಬೌಲಿಂಗ್ ಮಾಡುವ ನಿರೀಕ್ಷೆಯಿದೆ.

ಈ ಇಬ್ಬರು ಬದಲಾದರೆ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಹೀಗಿರಲಿದೆ
ಸಂಜು ಸ್ಯಾಮ್ಸನ್ ಬದಲಾಗಿ ಇಶಾನ್ ಕಿಶನ್ ಮತ್ತು ಪ್ರಸಿದ್ಧ್ ಕೃಷ್ಣ ಬದಲಾಗಿ ಅರ್ಷದೀಪ್ ಸಿಂಗ್ ತಂಡ ಸೇರಿದರೆ ಟೀಮ್ ಇಂಡಿಯಾ ಹೀಗಿರಲಿದೆ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.


Click it and Unblock the Notifications












