
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಅಂತ್ಯವಾಗಿದ್ದು ಭಾರತ ಉತ್ತಮ ಪ್ರದರ್ಶನ ನಿಡುವ ಮೂಲಕ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಹಾಗೂ ವೆಂಕಟೇಶ್ ಐಯ್ಯರ್ ಬ್ಯಾಟಿಂಗ್ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಭಾರತ ಇನ್ನೂ 7 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತ್ತು.
ಆದರೆ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ ಪ್ರದರ್ಶನ ಅವರ ಫಾರ್ಮ್ ಮೇಲೆ ಅನುಮಾನ ಮೂಡಿಸಿದೆ. ಇಶಾನ್ ಕಿಶನ್ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು 35 ರನ್ಗಳ ಕೊಡುಗೆ ನೀಡಿದ್ದಾರೆ. ಆದರೆ ಇದಕ್ಕಾಗಿ ಇಶಾನ್ ಕಿಶನ್ ಬಳಸಿದ್ದು 42 ಎಸೆತಗಳನ್ನು. ತಮ್ಮ ಸಾಮಾನ್ಯ ಶೈಲಿಗೆ ವ್ಯತಿರಿಕ್ತವಾಗಿ ಆಡಿದ್ದರು ಇಶಾನ್ ಕಿಶನ್. ಹೀಗಾಗಿ ಮುಂದಿನ ಪಂದ್ಯದಲ್ಲಿ ಆರಂಭಿಕ ಜೋಡಿಯಲ್ಲಿ ಬದಲಾವಣೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಬೆಂಚ್ ಕಾಯುತ್ತಿರುವ ಗಾಯಕ್ವಾಡ್ಗೆ ಸಿಗಲಿದೆಯಾ ಅವಕಾಶ?: ಋತುರಾಜ್ ಗಾಯಕ್ವಾಡ್ ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರ ಎಂಬುದು ಸಿಕ್ಕ ಅವಕಾಶದಲ್ಲಿ ಸಾಧಿಸಿದ್ದಾರೆ. ಅದರಲ್ಲೂ ಐಪಿಎಲ್ನಲ್ಲಿ ಕಳೆದ ಆವೃತ್ತಿಯಲ್ಲಿ ಗಾಯಕ್ವಾಡ್ ಆರೆಂಜ್ ಕ್ಯಾಪ್ ಪಡೆದು ಮಿಂಚಿದ್ದರು. ಅಲ್ಲದೆ ದೇಶೀಯ ಕ್ರಿಕೆಟ್ನಲ್ಲಿಯೂ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಆದರೆ ನ್ಯೂಜಿಲೆಂಡ್ ವಿರುದ್ಧಧ ಟಿ20 ಸರಣಿಯಲ್ಲಿ ಸಂಪೂರ್ಣವಾಗಿ ಬೆಂಚ್ ಕಾದಿದ್ದ ಋತುರಾಜ್ ಗಾಯಕ್ವಾಡ್ ವೆಸ್ಟ್ ಇಂಡೀಸ್ ಸರಣಿಯ ಎರಡನೇ ಪಂದ್ಯದಲ್ಲಾದರೂ ಅವಕಾಶ ಪಡೆಯಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಯುವ ಆಟಗಾರ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಲು ಇದೇ ಸೂಕ್ತ ಸಂದರ್ಭ ಎಂದು ನಿರ್ಧರಿಸುತ್ತಾ ಎಂಬುದು ಕುತೂಹಲ ಮೂಡಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಖಾಯಂ ಆರಂಭಿಕ ಆಟಗಾರ ಕೆಎಲ್ ರಾಹುಲ್ ಗಾಯದ ಕಾರಣ ಅಲಭ್ಯವಾಗಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡಿದ್ದರು. ಆದರೆ ಇಶಾನ್ ಕಿಶನ್ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿಫಲವಾಗಿದ್ದಾರೆ.
ಇನ್ನು ಋತುರಾಜ್ ಗಾಯಕ್ವಾಡ್ ಕಳೆದ ಐಪಿಎಲ್ನಲ್ಲಿ ಹಾಗೂ ದೇಶೀಯ ಕ್ರಿಕೆಟ್ ವಿಜಯ್ ಹಜಾರೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಅತ್ಯುತ್ತಮ ಫಾರ್ಮ್ನಲ್ಲಿರುವುದು ಸ್ಪಷ್ಟವಾಗಿದೆ. ಅಲ್ಲದೆ ಕೆಎಲ್ ರಾಹುಲ್ಗೆ ಗಾಯವಾಗಿರುವ ಕಾರಣ ಹೊಸ ಆರಂಭಿಕ ಜೋಡಿಯನ್ನು ಪರೀಕ್ಷಿಸಲು ಇದೊಂದು ಅತ್ಯುತ್ತಮ ಅವಕಾಶವೂ ಆಗಿದೆ. ಅಲ್ಲದೆ ಇಶಾನ್ ಕಿಶನ್ ವೆಸ್ಟ್ ಇಮಡೀಸ್ ವಿರುದ್ಧ ಆತ್ಮ ವಿಶ್ವಾಸದ ಪ್ರದರ್ಶನ ನೀಡಿಲ್ಲವಾದ ಕಾರಣ ಋತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡಲು ಇದು ಸೂಕ್ತ ಸಂದರ್ಭ.
2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್/ ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ ಅಯ್ಯರ್, ದೀಪಕ್ ಚಾಹರ್/ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಯುಜುವೇಂದ್ರ ಚಾಹಲ್