
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಬುಧವಾರದಿಂದ ಆರಂಭವಾಗಲಿದೆ. ಮೂರು ಪಂದ್ಯಗಳ ಈ ಚುಟುಕು ಮಾದರಿಯ ಸರಣಿ ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯಲಿದ್ದು ಎರಡು ತಂಡಗಳು ಕೂಡ ಈ ಸರಣಿಯಲ್ಲಿ ಪೈಪೋಟಿ ನಡೆಸಲು ಸಜ್ಜಾಗಿದೆ. ಭಾರತ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದು ಟಿ20 ಸರಣಿಯಲ್ಲಿಯೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಆದರೆ ವಿಂಡೀಸ್ ತಂಡದಲ್ಲಿ ಚುಟುಕು ಮಾದರಿಗೆ ಹೇಳಿ ಮಾಡಿಸಿದ ಆಟಗಾರರ ದಂಡೇ ಇದ್ದು ತೀವ್ರ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ.
ಆದರೆ ಟಿ20 ಸರಣಿಯ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಹಿನ್ನಡೆಯೊಂದು ಉಂಟಾಗಿದೆ. ತಂಡದ ಉಪ ನಾಯಕ ಕೆಎಲ್ ರಾಹುಲ್ ಏಕದಿನ ಸರಣಿಯ ಎರಡನೇ ಪಂದ್ಯದ ಬಳಿಕ ಗಾಯಗೊಂಡಿದ್ದು ಸಂಪೂರ್ಣ ಟಿ20 ಸರಣಿಯಿಂದ ಹೊರಗುಳಿಯುತ್ತಿದ್ದಾರೆ. ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿಯೂ ರಾಹುಲ್ ಆಡುವ ಬಳಗದಿಂದ ಹೊರಗುಳಿದಿದ್ದರು.
ಕೆಎಲ್ ರಾಹುಲ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಟಿ20 ತಂಡದ ಉಪ ನಾಯಕನ ಜವಾಬ್ಧಾರಿ ಈಗ ಯುವ ಆಟಗಾರನ ಹೆಗಲೇರಿದೆ. ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಉಪನಾಯಕನ ಸ್ಥಾನವನ್ನು ಅಲಂಕರಿಸಲಿದ್ದಾರೆ. ಟೀಮ್ ಇಂಡಿಯಾ ಉಪ ನಾಯಕನ ಸ್ಥಾನದ ಬಗ್ಗೆ ಸೋಮವಾರ ಬಿಸಿಸಿಐ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೂರು ಪಂದ್ಯಗಳು ಫೆಬ್ರವರಿ 16, 18 ಹಾಗೂ 20ರಂದು ಈಡನ್ ಗಾರ್ಡನ್ನಲ್ಲಿ ನಡೆಯಲಿದೆ.
ಟಿ20 ಸರಣಿಯಿಂದ ವಾಶಿಂಗ್ಟನ್ ಸುಂದರ್ ಔಟ್: ಇನ್ನು ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ಟೀಮ್ ಇಂ ಡಿಯಾದ ಮತ್ತೋರ್ವ ಆಟಗಾರ ಕೂಡ ಹೊರಬಿದ್ದಿದ್ದಾರೆ. ಯುವ ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಗಾಯದ ಕಾರಣದಿಂದಾಗಿ ಈ ಸರಣಿಯ ಅಲಭ್ಯವಾಗುತ್ತಿರುವುದಾಗಿ ಬಿಸಿಸಿಐ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಹೀಗಾಗಿ ವಾಶಿಂಗ್ಟನ್ ಸುಂದರ್ ಸ್ಥಾನಕ್ಕೆ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ಸ್ಥಾನ ನೀಡಲಾಗಿದೆ.
ಭಾರತ ಟಿ20 ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್ ಕೀಪರ್), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲದೀಪ್ ಯಾದವ್