ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಮಂಡಳಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಚೇತನ್ ಶರ್ಮಾ ಸ್ಥಾನ ದೊರೆದ ಬಳಿಕ ಅಜಿತ್ ಅಗರ್ಕರ್ ಈ ಹುದ್ದೆಯನ್ನು ನಿರ್ವಹಿಸಲಿದ್ದು ಇದೀಗ ಮೊದಲ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ ಆಡಲಿದ್ದು ಆ ಸರಣಿಗೆ ಭಾರತ ತಂಡದ ಸದಸ್ಯರನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಮಂಡಳಿ ಪ್ರಕಟಿಸಲಿದೆ.
ಟೀಮ್ ಇಂಡಿಯಾ ಈಗಾಗಲೇ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು ಜುಲೈ 12ರಿಂದ ಮೊದಲ ಟೆಸ್ಟ್ ಆರಂಭವಾಗುವ ಮೂಲಕ ಅಧಿಕೃತವಾಗಿ ಈ ಪ್ರವಾಸ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದರೆ ಟಿ20 ಸರಣಿಗೆ ಮಾತ್ರ ತಂಡವನ್ನು ಹೆಸರಿಸಿರಲಿಲ್ಲ. ಇದೀಗ ಆ ಜವಾಬ್ಧಾರಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಮಂಡಳಿ ಮೇಲಿದ್ದು ಮುಂದಿನ ವಾರ ಈ ಬಗ್ಗೆ ಸಭೆ ನಡೆಸಿ ತಂಡವನ್ನು ಘೋಷಣೆ ಮಾಡುವ ಸಾಧ್ಯತೆಯಿದೆ.

ಭಾರತೀಯ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಈಗಾಗಲೇ ಭಾರತೀಯ ತಂಡದ ಆಯ್ಕೆ ಮಂಡಳಿಯ ಮುಖ್ಯಸ್ಥರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದು ಇವರ ಅಧ್ಯಕ್ಷತೆಯಲ್ಲಿಯೇ ಸಭೆ ನಡೆಯಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಈ ಟಿ20 ಸರಣಿ ಹೆಚ್ಚಿನ ಯುವ ಆಟಗಾರರಿಗೆ ಅಕಾಶಕ್ಕೆ ವೇದಿಕೆಯಾಗುವ ಸಾಧ್ಯತೆಯಿದ್ದು ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯಾವೆಲ್ಲಾ ಆಟಗಾರರು ಈ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲಿದ್ದಾರೆ ಎಂಬುದು ಈಗಿರುವ ಕುತೂಹಲ.
ತಂಡದ ಆಯ್ಕೆ ವಿಚಾರವಾಗಿ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್ಸ್ಪೋರ್ಟ್ಗೆ ಮಾಹಿತಿ ನೀಡಿದ್ದು ಈ ವಿಚಾರವಾಗಿ ಕೆಲ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ. "ಟಿ20ಗಾಗಿ ನಾವು ಸಾಕಷ್ಟು ಸಮಯವನ್ನು ಹೊಂದಿದ್ದು ಈ ಸಂದರ್ಭವನ್ನು ಸೂಕ್ತವಾದ ಪ್ರತಿಭೆಗಳನ್ನು ಈ ಸರಣಿಗೆ ಆಯ್ಕೆ ಮಾಡುವುದು ಅಗತ್ಯವಾಗಿದೆ. ಇದು ಸಾಕಷ್ಟು ಯುವ, ಹೊಸ ಪ್ರತಿಭೆಗಳಿಗೆ ಪರೀಕ್ಷೆಯಾಗಲಿದ್ದು ಇದಕ್ಕಾಗಿ ಆಯ್ಕೆ ಮಂಡಳಿಯ ಮುಖ್ಯಸ್ಥರ ಸಲಹೆ ಅಗತ್ಯವಾಗಿದೆ" ಎಂದಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಸಿದ್ಧವಾಗಿರುವುದು ಸ್ಪಷ್ಟವಾದಂತಾಗಿದೆ.
ಇನ್ನು ವೆಸ್ಟ್ ಇಂಡಿಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ ಕೂಡ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿಯೇ ಭಾರತ ತಂಡ ಕಣಕ್ಕಿಳಿಯಲಿದ್ದು ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಸರಣಿಯಿಂದ ಹೊರಗುಳಿಯಲಿದ್ದಾರೆ. ಆದರೆ ಈ ಸರಣಿಗಾಗಿ ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಕಮ್ಬ್ಯಾಕ್ ಮಾಡುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಶಮಿ ಹೊರಗುಳಿದಿದ್ದಾರೆ.
ಇನ್ನು 2023ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸುತ್ತಿರುವ ಸಂಜು ಸ್ಯಾಮ್ಸನ್ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿರುವ ಸೂರ್ಯಕುಮಾರ್ ಕೂಡ ತಂಡಕ್ಕೆ ವಾಪಾಸಾಗಲಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಸಾಕಷ್ಟು ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಈ ಪೈಕಿ ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಜಿತೇಶ್ ಶರ್ಮಾ ಮತ್ತು ರಿಂಕು ಸಿಂಗ್ ಮೇಲೆ ಆಯ್ಕೆ ಮಂಡಳಿ ಚಿತ್ತನೆಟ್ಟಿರುವುದು ಸ್ಪಷ್ಟ. ಇವರಲ್ಲಿ ಯಾರಿಗೆಲ್ಲಾ ಅವಕಾಶ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.