
ತಲೆನೋವು ತಂದಿವೆ 3 ಅಂಶಗಳು
ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಕುರಿತಾಗಿ ತಲೆನೋವು ತಂದಿರುವ 3 ಅಂಶಗಳ ಪಟ್ಟಿ
1. ಶಿಖರ್ ಧವನ್ ಜತೆ ಯಾರು ಆರಂಭಿಕರಾಗಿ ಕಣಕ್ಕೆ ಇಳಿಯುತ್ತಾರೆ?
2. ತಂಡದ ಮಧ್ಯಮ ಕ್ರಮಾಂಕವನ್ನು ಯಾವ ರೀತಿ ರೂಪಿಸಬೇಕು?
3. ತಂಡದ ಬೌಲಿಂಗ್ ಕಾಂಬಿನೇಷನ್ ಹೇಗಿರಬೇಕು?

ತಂಡದ ಆರಂಭಿಕ ಆಟಗಾರ ಮತ್ತು ಮಧ್ಯಮ ಕ್ರಮಾಂಕ
ಟೀಮ್ ಇಂಡಿಯಾ ಪರ ನಾಯಕ ಶಿಖರ್ ಧವನ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವುದು ಖಚಿತ. ಧವನ್ ಜತೆಗೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲು ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶುಬ್ ಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್ ರೀತಿಯ ಆಟಗಾರರ ಆಯ್ಕೆಗಳು ಇದ್ದು, ಈ ಪೈಕಿ ಇಶಾನ್ ಕಿಶನ್ ಉತ್ತಮ ಆಯ್ಕೆ ಎನ್ನಬಹುದು. ಆದರೆ ಧವನ್ ಮತ್ತು ಇಶಾನ್ ಕಿಶನ್ ಇಬ್ಬರೂ ಸಹ ಎಡಗೈ ಬ್ಯಾಟ್ಸ್ಮನ್ಗಳಾಗಿರುವುದರಿಂದ ತಂಡ ಎಡಗೈ ಮತ್ತು ಬಲಗೈ ಬ್ಯಾಟ್ಸ್ಮನ್ಗಳ ಓಪನಿಂಗ್ ಕಾಂಬಿನೇಷನ್ ಬಳಸುವ ಸಾಧ್ಯತೆಗಳಿವೆ. ಹೀಗಾಗಿ ಧವನ್ ಜತೆ ಯಾರನ್ನು ಆರಂಭಿಕರಾಗಿ ಕಣಕ್ಕೆ ಇಳಿಸಬೇಕು ಎಂಬ ವಿಷಯ ಇದೀಗ ದ್ರಾವಿಡ್ ಅವರಿಗೆ ತಲೆನೋವಾಗಿದೆ. ಇನ್ನು ಶುಬ್ ಮನ್ ಗಿಲ್ ಮೂರನೇ ಕ್ರಮಾಂಕ ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುವುದು ಖಚಿತ. ಹೀಗಾಗಿ ಮಧ್ಯಮ ಕ್ರಮಾಂಕದ 2 ಸ್ಥಾನಗಳಿಗೆ ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಅಯ್ಯರ್ ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬುದು ಪ್ರಶ್ನೆಯಾಗಿದೆ.

ಬೌಲಿಂಗ್ ಕಾಂಬಿನೇಷನ್
ಇನ್ನು ತಂಡದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇಲ್ಲದ ಕಾರಣ ಆತನ ಸ್ಥಾನ ತುಂಬುವ ಸಾಮರ್ಥ್ಯವಿರುವ ವೇಗದ ಆಲ್ರೌಂಡರ್ ಆಟಗಾರನನ್ನು ಆರಿಸಬೇಕಾದ ಅಗತ್ಯವಿದೆ. ಇಂಗ್ಲೆಂಡ್ ವಿರುದ್ಧದ ಒಂದೇ ಒಂದು ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡಿದ್ದ ಅರ್ಷದೀಪ್ ಸಿಂಗ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅರ್ಷದೀಪ್ ಸಿಂಗ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತ. ಇನ್ನು ಅರ್ಷದೀಪ್ ಸಿಂಗ್ ಜತೆ ಶಾರ್ದೂಲ್ ಠಾಕೂರ್ ಕೂಡಾ ಕಣಕ್ಕಿಳಿಯುವುದು ಖಚಿತ ಎಂದು ಹೇಳಬಹುದಾಗಿದ್ದು, ಯುಜುವೇಂದ್ರ ಚಾಹಲ್ ಸ್ಪಿನ್ನರ್ ಆಗಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಹೀಗಾಗಿ ಉಳಿದಿರುವ ಒಂದು ವೇಗದ ಬೌಲರ್ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಅಥವಾ ಪ್ರಸಿದ್ಧ್ ಕೃಷ್ಣ ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಉಂಟಾಗಲಿದೆ.


Click it and Unblock the Notifications












