ಬುಧವಾರ, ಜುಲೈ 12ರಂದು ಡೊಮಿನಿಕಾದ ರೋಸೋವಿನಲ್ಲಿರುವ ವಿಂಡ್ಸರ್ ಪಾರ್ಕ್ ಸ್ಟೇಡಿಯಂನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳು ಮುಖಾಮುಖಿಯಾಗಲಿವೆ.
ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಜಿ ಬ್ಯಾಟ್ಸ್ಮನ್ ವಾಸಿಂ ಜಾಫರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡದ ಆಡುವ 11ರ ಬಳಗವನ್ನು ಆಯ್ಕೆ ಮಾಡಿ ಹಂಚಿಕೊಂಡಿದ್ದಾರೆ.

ರಿಷಭ್ ಪಂತ್ ಗಾಯಗೊಂಡ ನಂತರ ಭಾರತ ಟೆಸ್ಟ್ ತಂಡಕ್ಕೆ ಪ್ರಸ್ತುತ ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಕೆಎಸ್ ಭರತ್ ಅವರ ಬದಲು ಎಡಗೈ ಬ್ಯಾಟರ್ ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್ ಪಾತ್ರಕ್ಕೆ ವಾಸಿಂ ಜಾಫರ್ ಆಯ್ಕೆ ಮಾಡಿದ್ದಾರೆ.
ಇದೇ ವೇಳೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ಗೆ ಅವಕಾಶ ನೀಡಬೇಕು ಎಂದು ವಾಸಿಂ ಜಾಫರ್ ಸೂಚಿಸಿದರು. ಇನ್ನು ಎರಡು ಸ್ಪಿನ್ ಬೌಲಿಂಗ್ ಆಯ್ಕೆಗಳನ್ನು ಹೆಸರಿಸಿದ್ದು, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಲ್ಲಿರಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖೇಶ್ ಕುಮಾರ್, ಮೊಹಮ್ಮದ್ ಸಿರಾಜ್ ಮತ್ತು ಜಯದೇವ್ ಉನಾದ್ಕಟ್ ಅವರನ್ನು ವೇಗದ ಬೌಲಿಂಗ್ ವಿಭಾಗದಲ್ಲಿರಿಸಿದ್ದಾರೆ.
ವಾಸಿಂ ಜಾಫರ್ ಅವರು ಬ್ಯಾಟಿಂಗ್ ವಿಭಾಗದಲ್ಲಿ ಶುಭ್ಮನ್ ಗಿಲ್ ಅವರನ್ನು 3ನೇ ಕ್ರಮಾಂಕಕ್ಕೆ ಇಳಿಸಿದ್ದು, ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಆಯ್ಕೆ ಮಾಡಿದರು.
ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಅವರಿಗೆ ಭಾರತದ ಆಡುವ 11ರ ಬಳಗದಲ್ಲಿ 4 ಮತ್ತು 5ನೇ ಕ್ರಮಾಂಕ ನೀಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25ರ ಚಕ್ರವನ್ನು ಪ್ರಾರಂಭಿಸುತ್ತಿರುವ ರೋಹಿತ್ ಶರ್ಮಾ ಬಳಗಕ್ಕೆ ತಮ್ಮ ಅತ್ಯುತ್ತಮ ಸಂಯೋಜನೆಯನ್ನು ಈ ಸರಣಿಯಲ್ಲಿ ಗುರುತಿಸುವುದು ಅತಿ ಮುಖ್ಯವಾಗಿದೆ ಎಂದು ವಾಸಿಂ ಜಾಫರ್ ನಂಬಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ಎರಡು ತಂಡಗಳ ನಡುವೆ ಆಡಿದ 98 ಟೆಸ್ಟ್ ಪಂದ್ಯಗಳಲ್ಲಿ 30 ಪಂದ್ಯಗಳನ್ನು ಗೆದ್ದಿರುವ ವೆಸ್ಟ್ಇಂಡೀಸ್ ಹೆಡ್-ಟು-ಹೆಡ್ ವಿಷಯದಲ್ಲಿ ಭಾರತ ವಿರುದ್ಧ ಉತ್ತಮ ದಾಖಲೆ ಹೊಂದಿದ್ದರೆ, ಭಾರತ ತಂಡ ಈವರೆಗೆ 28 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತ ತಂಡವೇ ಮೇಲುಗೈ ಸಾಧಿಸಿದೆ. ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ 2002ರಲ್ಲಿ ಭಾರತದ ವಿರುದ್ಧ ತವರಿನ ಟೆಸ್ಟ್ ಪಂದ್ಯ ಗೆದ್ದಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ. ವೆಸ್ಟ್ ಇಂಡೀಸ್ ತಂಡ ಕಳೆದ 21 ವರ್ಷಗಳಿಂದ ಭಾರತ ತಂಡದ ವಿರುದ್ಧ ತವರು ನೆಲದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯದ ಗೆಲುವನ್ನು ದಾಖಲಿಸಿಲ್ಲ.
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಯದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್.