ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಅಂತ್ಯವಾಗಿದೆ. ಈ ಸರಣಿಯನ್ನು ಕಳೆದುಕೊಮಡ ಬಳಿಕ ವೆಸ್ಟ್ ಇಂಡೀಸ್ ತಂಡದ ನಾಯಕ ಕ್ರೇಗ್ ಬ್ರೇಥ್ವೇಟ್ ಕೆರಿಬಿಯನ್ ನಾಡಿನಲ್ಲಿರುವ ಕ್ರೀಡಾಂಗಣಗಳ ಪಿಚ್ನ ಗುಣಮಟ್ಟದ ಬಗ್ಗೆ ಮಾತನಾಡಿದ್ದಾರೆ. ಪಿಚ್ನ ಗುಣಮಟ್ಟ ಸುಧಾರಣಯಾಗಬೇಕು ಎಂದಿದ್ದಾರೆ ವಿಂಡೀಸ್ ತಂಡದ ನಾಯಕ.
ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆದ ಸರಣಿಯ ಎರಡನೇ ಪಂದ್ಯದ ಅಂತಿಮ ದಿನ ಮಳೆ ಸುರಿದ ಪರಿಣಾಮವಾಗಿ ಎರಡನೇ ಟೆಸ್ಟ್ ಡ್ರಾದಲ್ಲಿ ಅಂತ್ಯಕಂಡಿತು. ಅಂತಿಮ ದಿನದಾಟಕ್ಕೂ ಮುನ್ನ ಈ ಪಂದ್ಯದಲ್ಲಿಯೂ ಭಾರತ ಸಂಪೂರ್ಣ ಹಿಡಿತ ಸಾಧಿಸಿದ ಪರಿಣಾಮವಾಗಿ ಈ ಕೊನೆಯ ಪಂದ್ಯದಲ್ಲಿಯೂ ಗೆಲ್ಲುವ ವಿಶ್ವಾಸ ಮೂಡಿಸಿತ್ತು. ಆದರೆ ಭಾರತದ ಈ ಕನಸಿಗೆ ಮಳೆ ತಣ್ಣೀರೆರಚಿದೆ. ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 141 ರನ್ಗಳ ಅಂತರದ ಗೆಲುವು ಸಾಧಿಸಿತ್ತು.

ಇನ್ನು ಈ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಬ್ರಾಥ್ವೇಟ್ ಈ ಟೆಸ್ಟ್ ಸರಣಿಗೆ ನೀಡಿದ ಪಿಚ್ನ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಉತ್ತಮ ಗುಣಮಟ್ಟದ ಪಿಚ್ ಸಿದ್ಧವಾದರೆ ಮಾತ್ರವೇ ತಮ್ಮ ತಂಡದ ಬ್ಯಾಟರ್ಗಳ ಆತ್ಮವಿಶ್ವಾಸ ಹೆಚ್ಚಲು ಸಾಧ್ಯ ಎಂದಿದ್ದಾರೆ ವಿಂಡೀಸ್ ನಾಯಕ.
"ಒಂದು ಕಾಲದಲ್ಲಿ ನಾವು ಕೆರಿಬಿಯನ್ ನಾಡಿನಲ್ಲಿ ನಾವು ಅತ್ಯುತ್ತಮ ಗುಣಮಟ್ಟದ ಪಿಚ್ಗಳನ್ನು ಹೊಂದಿದ್ದೆವು. ಅದು ನಮ್ಮ ಬ್ಯಾಟರ್ಗಳಿಗೆ ಸಹಕಾರಿಯಾಗಿತ್ತು. ಎಲ್ಲರಿಗೂ ಸಾಕಷ್ಟು ತಾಳ್ಮೆ ಇರುವುದಿಲ್ಲ. ಪಿಚ್ಗಳ ಗುಣಮಟ್ಟವನ್ನು ಹೆಚ್ಚಿಸಿದರೆ ಬ್ಯಾಟರ್ ಹಾಗೂ ಬೌಲರ್ ಇಬ್ಬರಿಗೂ ಸಹಕಾರಿಯಾಗಲಿದೆ" ಎಂದಿದ್ದಾರೆ ಬ್ರಾಥ್ವೇಟ್.
ಇನ್ನು ಇದೇ ಸಂದರ್ಭದಲ್ಲಿ ವೆಸ್ಟ್ ಇಮಡೀಸ್ ತಂಡದ ನಾಯಕ ತಮ್ಮ ತಂಡದ ಬೌಲಿಂಗ್ ಸಾಮರ್ಥ್ಯದ ಬಗ್ಗೆಯೂ ವಿಮರ್ಶೆ ಮಾಡಿದ್ದಾರೆ. ತಂಡ ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ದಾಳಿ ನಡೆಸಲಿಲ್ಲ ಎಂದಿದ್ದಾರೆ. ತ್ರಿವಳಿ ವೇಗಿಗಳಾದ ಅಲ್ಜಾರಿ ಜೋಸೆಫ್, ಕೆಮರ್ ರೋಚ್ ಮತ್ತು ಶಾನನ್ ಗೇಬ್ರಿಯಲ್ ಒಟ್ಟಾಗಿ ಎದುರಾಳಿ ತಂಡವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ ಎಂದ ಅವರು ಜೊತೆಗೆ ಜೇಸನ್ ಹೋಲ್ಡರ್ ಕೂಡ ಹೆಚ್ಚು ಪ್ರಭಾವ ಬೀರಲಿಲ್ಲ ಎಂದಿದ್ದಾರೆ.