ಶನಿವಾರ, ಜುಲೈ 22ರಂದು ನಡೆದ ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡಿತು. ಈ ಮೂಲಕ ಸರಣಿಯು 1-1 ಅಂತರದಲ್ಲಿ ಸಮಬಲಗೊಂಡು ಪ್ರಶಸ್ತಿ ಹಂಚಿಕೊಂಡವು.
ಪಂದ್ಯದ ಅಂಪೈರ್ ವಿವಾದಾತ್ಮಕ ತೀರ್ಪುಗಳು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಗೆಲುವಿನ ಭಾರತದ ಅವಕಾಶಗಳನ್ನು ಕುಗ್ಗಿಸಿದವು. ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಅಂಪೈರ್ ವಿರುದ್ಧ ಆಕ್ರೋಶ ಹೊರಹಾಕಿದರು.

ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯವು ರೋಚಕವಾಗಿ ಅಂತ್ಯಗೊಂಡಿತು. ಉಭಯ ತಂಡಗಳ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಪ್ರಯತ್ನಿಸಿದರು. ಪಂದ್ಯವು ಅಂತಿಮವಾಗಿ ಟೈನಲ್ಲಿ ಕೊನೆಗೊಂಡಿತು. ತಲಾ ಒಂದೊಂದು ಗೆಲುವಿನೊಂದಿಗೆ ಸರಣಿ ಸಮಬಲಗೊಂಡಿತು.
ಮೂರನೇ ಪಂದ್ಯದಲ್ಲಿ ಗೆಲ್ಲಲು 226 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಮಹಿಳಾ ತಂಡವು ಆರಂಭದಲ್ಲೇ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ನಂತರ ಸ್ಮೃತಿ ಮಂಧಾನ ಮತ್ತು ಹರ್ಲೀನ್ ಡಿಯೋಲ್ 107 ರನ್ಗಳ ಜೊತೆಯಾಟ ನಿರ್ಮಿಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದಿದ್ದರು.
ಸ್ಮೃತಿ ಮಂಧಾನ ಅವರ ವಿಕೆಟ್ ಪತನದ ನಂತರ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ಗೆ ಬಂದಾಗ ಭಾರತಕ್ಕೆ ಇನ್ನೂ 87 ರನ್ಗಳ ಅವಶ್ಯಕತೆ ಇತ್ತು. ಭಾರತದ ನಾಯಕಿ ತಾಳ್ಮೆಯ ಆಟವಾಡುತ್ತಾ ತನ್ನ ತಂಡವನ್ನು ಗುರಿಯತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ, ಅಂಪೈರ್ನ ಅನುಮಾನಾಸ್ಪದ ಎಲ್ಬಿಡಬ್ಲ್ಯೂ ತೀರ್ಪಿಗೆ ಔಟಾಗಬೇಕಾಯಿತು.

34ನೇ ಓವರ್ನಲ್ಲಿ ಬಾಂಗ್ಲಾದ ನಹಿದಾ ಅಕ್ಟರ್ ಎಸೆತವನ್ನು ಸ್ವೀಪ್ ಮಾಡಲು ಹರ್ಮನ್ಪ್ರೀತ್ ಕೌರ್ ಪ್ರಯತ್ನಿಸಿದರು. ಆದರೆ, ಬಾಲ್ ಪ್ಯಾಡ್ಗೆ ಬಡಿದು ಮೊದಲ ಸ್ಲಿಪ್ನ ಕೈ ಸೇರಿತು. ಆಗ ಅಂಪೈರ್ ಎಲ್ಬಿಡಬ್ಲ್ಯೂ ಎಂದು ಔಟ್ ನೀಡಿದರು.
34 ವರ್ಷದ ಹರ್ಮನ್ಪ್ರೀತ್ ಕೌರ್ ಅವರು ಔಟ್ ತೀರ್ಪಿಗೆ ಕೋಪಗೊಂಡರು ಮತ್ತು ತಮ್ಮ ಬ್ಯಾಟ್ನಿಂದ ಸ್ಟಂಪ್ಗೆ ಹೊಡೆಯುವ ಮೂಲಕ ಮೈದಾನದಲ್ಲೇ ಆಕ್ರೋಶ ಹೊರಹಾಕಿದರು. ಪೆವಿಲಿಯನ್ಗೆ ಹಿಂದಿರುಗುವಾಗ ಚೆಂಡು ಮೊದಲು ತನ್ನ ಬ್ಯಾಟ್ಗೆ ಬಡಿದಿದೆ ಎಂದು ಹರ್ಮನ್ಪ್ರೀತ್ ಸನ್ನೆ ಮಾಡಿದಳು.
ಪಂದ್ಯದ ನಂತರ, ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಪಂದ್ಯದ ಸಮಯದಲ್ಲಿ ಕೆಲವು ವಿವಾದಾತ್ಮಕ ನಿರ್ಧಾರಗಳಿಗಾಗಿ ಅಂಪೈರ್ಗಳನ್ನು ತರಾಟೆಗೆ ತೆಗೆದುಕೊಂಡರು. ಭಾರತ ತಂಡ ಮುಂದಿನ ಬಾರಿ ಬಾಂಗ್ಲಾದೇಶ ಪ್ರವಾಸದಲ್ಲಿ ಅಂಪೈರಿಂಗ್ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತೇವೆ ಎಂದು ಹೇಳಿದರು.
"ನಾವು ಈ ಆಟದಿಂದ ಬಹಳಷ್ಟು ಕಲಿತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಕ್ರಿಕೆಟ್ನ ಹೊರತಾಗಿ, ಇಲ್ಲಿ ನಡೆದ ಅಂಪೈರಿಂಗ್ ರೀತಿ ಬಗ್ಗೆ ನಮಗೆ ತುಂಬಾ ಆಶ್ಚರ್ಯವಾಯಿತು. ಮುಂದಿನ ಬಾರಿ ನಾವು ಬಾಂಗ್ಲಾದೇಶಕ್ಕೆ ಬಂದಾಗ ನಾವು ಈ ರೀತಿಯ ಅಂಪೈರಿಂಗ್ನೊಂದಿಗೆ ವ್ಯವಹರಿಸಬೇಕು ಮತ್ತು ಅದಕ್ಕೆ ತಕ್ಕಂತೆ ನಮ್ಮನ್ನು ಸಿದ್ಧಪಡಿಸಬೇಕು ಎಂದು ಖಚಿತಪಡಿಸಿಕೊಳ್ಳುತ್ತೇವೆ," ಎಂದು ಹರ್ಮನ್ಪ್ರೀತ್ ಕೌರ್ ಅವರು ಪಂದ್ಯದ ನಂತರ ತಿಳಿಸಿದರು.
"ಬಾಂಗ್ಲಾದೇಶ ತಂಡ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಪರಿಸ್ಥಿತಿಗೆ ಅನುಗುಣವಾಗಿ ಆಟವಾಡಿದರು. ಅವರು ಬಹಳ ನಿರ್ಣಾಯಕವಾದ ಸಿಂಗಲ್ಸ್ ರನ್ ತೆಗೆದುಕೊಳ್ಳುತ್ತಿದ್ದರು. ನಡುವೆ ನಾವು ಕೆಲವು ರನ್ಗಳನ್ನು ಸೋರಿಕೆ ಮಾಡಿದ್ದೇವೆ. ಆದರೆ, ನಾವು ಬ್ಯಾಟಿಂಗ್ ಮಾಡುವಾಗ ನಾವು ಆಟವನ್ನು ಚೆನ್ನಾಗಿ ನಿಯಂತ್ರಿಸಿದ್ದೇವು".
"ನಾನು ಮೊದಲೇ ಹೇಳಿದಂತೆ ಕೆಲವು ಅನುಮಾನಾಸ್ಪದ ಅಂಪೈರಿಂಗ್ ಮಾಡಲಾಗಿದೆ, ಅಂಪೈರ್ಗಳು ನೀಡಿದ ಕೆಲವು ನಿರ್ಧಾರಗಳ ಬಗ್ಗೆ ನಾವು ನಿಜವಾಗಿಯೂ ನಿರಾಶೆಗೊಂಡಿದ್ದೇವೆ," ಎಂದು ಹರ್ಮನ್ಪ್ರೀತ್ ಕೌರ್ ಅಸಮಾಧಾನ ವ್ಯಕ್ತಪಡಿಸಿದರು.