
ಟಾಂಟಾನ್, ಜುಲೈ 13: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ವೆಸ್ಟ್ ಇಂಡೀಸ್ ಎ ತಂಡಗಳ ನಡುವಣ ಎರಡನೆಯ ಅನಧಿಕೃತ ಟೆಸ್ಟ್ ಕುತೂಹಲಕಾರಿ ಘಟ್ಟ ತಲುಪಿದೆ.
ನಾಲ್ಕನೆಯ ಹಾಗೂ ಕೊನೆಯ ದಿನವಾದ ಶುಕ್ರವಾರ ಭಾರತ ಎ ತಂಡಕ್ಕೆ ಗೆಲ್ಲಲು 107 ರನ್ಗಳ ಅವಶ್ಯಕತೆಯಿದ್ದು, ಏಳು ವಿಕೆಟ್ಹಗಳು ಕೈಯಲ್ಲಿವೆ.
ಮೂರನೇ ದಿನ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಭಾರತ ಎ ತಂಡ ಗೆಲ್ಲುವ ಆಸೆ ಚಿಗುರಿದೆ. ಆದರೆ ವೆಸ್ಟ್ ಇಂಡೀಸ್ ಎ ತಂಡದ ಬೌಲರ್ಗಳು ಮ್ಯಾಜಿಕ್ ಮಾಡಿದರೆ ಭಾರತಕ್ಕೆ ನಿರಾಸೆ ಖಚಿತ.
ಚೆನ್ನಾಗಿ ಆಡುತ್ತಿದ್ದ ಎ ತಂಡದ ನಾಯಕ ಕರುಣ್ ನಾಯರ್ ದಿನದ ಕೊನೆಯಲ್ಲಿ ವಿಕೆಟ್ ಒಪ್ಪಿಸಿರುವುದು ಭಾರತಕ್ಕೆ ಆಘಾತ ನೀಡಿದೆ.
ಇನ್ನೊಂದೆಡೆ ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದಿರುವ ಹನುಮ ವಿಹಾರಿ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಅಂಕಿತ್ ಭಾವ್ನೆ, ರಿಷಬ್ ಪಂತ್, ವಿಜಯ್ ಶಂಕರ್ ಅವರಂತಹ ಉತ್ತಮ ಬ್ಯಾಟ್ಸ್ಮನ್ಗಳ ದಂಡು ಇರುವುದರಿಂದ ಭಾರತ ಹೆಚ್ಚು ಆತ್ಮವಿಶ್ವಾಸದಲ್ಲಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ನಿಂದ ಭಾರಿ ಹಿನ್ನಡೆ ಅನುಭವಿಸಿದ ಭಾರತ ಎ ತಂಡ ಎರಡನೆಯ ಇನ್ನಿಂಗ್ಸ್ನಲ್ಲಿ ತಿರುಗೇಟು ನೀಡಿತು.
ವೆಸ್ಟ್ ಇಂಡೀಸ್ನ ಮೊದಲ ಇನ್ನಿಂಗ್ಸ್ನ 302 ರನ್ಗಳಿಗೆ ಉತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 192 ರನ್ಗೆ ಸರ್ವಪತನ ಕಂಡು 110 ರನ್ಗಳ ಮುನ್ನಡೆ ಬಿಟ್ಟುಕೊಟ್ಟಿತ್ತು.
ಎರಡನೆಯ ಇನ್ನಿಂಗ್ಸ್ನಲ್ಲಿಯೂ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ, ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡು 210 ರನ್ಗೆ ಆಲೌಟ್ ಆಯಿತು.
ಒಟ್ಟು 321 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ರವಿಕುಮಾರ್ ಸಮರ್ಥ್ ಮತ್ತು ಅಭಿಮನ್ಯು ಈಶ್ವರನ್ ಮೊದಲ ವಿಕೆಟ್ಗೆ ಅರ್ಧಶತಕಲದ ಪಾಲುದಾರಿಕೆ ನೀಡಿದರು.
ಸ್ವಲ್ಪ ಸಮಯದ ಬಳಿಕ ಅಭಿಮನ್ಯು ಈಶ್ವರನ್ ಕೂಡ ವಿಕೆಟ್ ಒಪ್ಪಿಸಿದ್ದರಿಂದ ಆತಂಕಕ್ಕೆ ಸಿಲುಕಿತು. ಈ ವೇಳೆ ಜತೆಗೂಡಿದ ಹನುಮ ವಿಹಾರಿ ಹಾಗೂ ಕರುಣ್ ನಾಯರ್ ಮೂರನೇ ವಿಕೆಟ್ಗೆ 136 ರನ್ಗಳ ಜತೆಯಾಟ ನೀಡಿದರು.
ದಿನದ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಕರುಣ್ ನಾಯರ್ ಔಟಾದರು.
ಮೊದಲ ಅನಧಿಕೃತ ಟೆಸ್ಟ್ನಲ್ಲಿ ಕೂಡ ಮೊದಲ ಇನ್ನಿಂಗ್ಸ್ನಲ್ಲಿ ಮೇಲುಗೈ ಸಾಧಿಸಿದ್ದ ವೆಸ್ಟ್ ಇಂಡೀಸ್ಗೆ ಎರಡನೆಯ ಇನ್ನಿಂಗ್ಸ್ನಲ್ಲಿ ಹಿನ್ನಡೆಯುಂಟಾಗಿತ್ತು.
ಕೊನೆಯ ಹಂತದಲ್ಲಿ ಹೋರಾಟ ನಡೆಸಿದ್ದ ವಿಂಡೀಸ್ ಯುವಪಡೆ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 302/10 & 210/10 (57.3) ಜಾನ್ ಕ್ಯಾಂಪ್ಬೆಲ್ 61, ಡೆವೊನ್ ಥಾಮಸ್ 25, ಜರ್ಮೈನ್ ಬ್ಲಾಕ್ವುಡ್ 67, ಮೊಹಮ್ಮದ್ ಸಿರಾಜ್ 64/4, ರಜನೀಶ್ ಗುರ್ಬಾನಿ 64/3, ಜಯಂತ್ ಯಾದವ್ 23/2
ಭಾರತ: 192/10 & 214/3 (46) ಅಭಿಮನ್ಯು ಈಶ್ವರನ್ 31, ಹನುಮ ವಿಹಾರಿ 65*, ಕರುಣ್ ನಾಯರ್ 55, ರೇಮನ್ ರೀಫರ್ 29/1, ರೊಮಾರಿಯೊ ಶೆಫರ್ಡ್ 25/1