ಹೋಬಾರ್ಟ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟಿ20 ಪಂದ್ಯ ಭಾನುವಾರ ನಡೆಯಲಿದೆ. ಈಗಾಗಲೇ ಎರಡನೇ ಟಿ20 ಪಂದ್ಯದಲ್ಲಿ ಸೋಲು ಕಂಡಿರುವ ಭಾರತ, ಗೆಲುವಿನ ಕನಸು ಕಾಣುತ್ತಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ರದ್ದಗಿದ್ದರಿಂದ, ಮೂರನೇ ಪಂದ್ಯ ಕುತೂಹಲ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಸರಣಿ ಜೀವಂತವಾಗಿಟ್ಟುಕೊಳ್ಳುವ ಇರಾದೆ ಭಾರತ ತಂಡದ್ದಾಗಿದೆ. ಇನ್ನು ಆಸೀಸ್ ಈ ಪಂದ್ಯದಲ್ಲಿ ಜಯ ಸಾಧಿಸಿ, ಸರಣಿ ಗೆಲುವಿಗೆ ಇನ್ನೊಂದು ಹೆಜ್ಜೆ ಹತ್ತಿರ ನಿಲ್ಲುವ ಪ್ಲ್ಯಾನ್ ಮಾಡಿಕೊಂಡಿದೆ.
ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟರ್ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಹೊರತು ಪಡಿಸಿ ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಮೂರನೇ ಪಂದ್ಯದಲ್ಲಿ ಭರವಸೆಯ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟಿಂಗ್ ನಡೆಸಬೇಕಿದೆ.

ಸರಣಿಯ ನಿರ್ಣಾಯಕ ಪಂದ್ಯಗಳಲ್ಲಿ ಒಂದಾಗಿರುವ ಮೂರನೇ ಟಿ20 ಪಂದ್ಯದಲ್ಲಿ ಶುಭಮನ್ ಗಿಲ್ ಆರಂಭಿಕರಾಗಿ ಬಿಗ್ ಇನಿಂಗ್ಸ್ ಕಟ್ಟಬೇಕಿದೆ. ಇನ್ನು ಮಧ್ಯ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಆರಂಭದಲ್ಲಿ ಕೊಂಚ ತಾಳ್ಮೆಯಿಂದ ಬ್ಯಾಟ್ ಮಾಡಿ, ನಂತರ ಗೇರ್ ಶಿಫ್ಟ್ ಮಾಡಿದರೆ ಒಳ್ಳೆಯದು. ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಎರಡನೇ ಟಿ20 ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಇವರು ಈ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಬೇಕಿದೆ.
ಟೀಮ್ ಇಂಡಿಯಾದ ಭರವಸೆಯ ಬೌಲರ್ ಅರ್ಷದೀಪ್ ಸಿಂಗ್ಗೆ ಮೂರನೇ ಟಿ20 ಪಂದ್ಯದಲ್ಲಿ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ವೇಳೆ ಟೀಮ್ ಇಂಡಿಯಾ ಎಚ್ಚರಿಕೆ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಇನ್ನು ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಬಿಟ್ಟು ಮೈದಾನಕ್ಕೆ ಇಳಿಯುವ ಬಗ್ಗೆ ಅಭಿಮಾನಿಗಳು ಸಹ ಕಿಡಿ ಕಾರಿದ್ದಾರೆ. ಜಸ್ಪ್ರೀತ್ ಬುಮ್ರಾ ಮೊನಚಾದ ದಾಳಿ ಸಂಘಟಿಸಬೇಕಿದೆ. ಸ್ಪಿನ್ ದ್ವಯರಾಗದ ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಪಿರ್ಕಿ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ. ಅಂದಾಗ ಮಾತ್ರ ಜಯ ಸಾಧಿಸಲು ಸಾಧ್ಯ.
ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಶ್ ಹ್ಯಾಜಲ್ವುಡ್ ಮೂರನೇ ಟಿ20 ಪಂದ್ಯವನ್ನು ಆಡುತ್ತಿಲ್ಲ. ಇವರ ಅನುಪಸ್ಥಿತಿಯ ಲಾಭವನ್ನು ಟೀಮ್ ಇಂಡಿಯಾ ಪಡೆಯಬೇಕಿದೆ. ಇವರು ಎರಡನೇ ಟಿ20 ಪಂದ್ಯದಲ್ಲಿ ಅಮೋಘ ದಾಳಿ ಸಂಘಟಿಸಿ ಅಬ್ಬರಿಸಿದ್ದರು. ಮೂರನೇ ಟಿ20 ಪಂದ್ಯದಲ್ಲಿ ಇವರು ಅಂಗಳಕ್ಕೆ ಇಳಿಯುತ್ತಿಲ್ಲ. ಇವರ ಅನುಪಸ್ಥಿತಿಯನ್ನು ಯಾವ ಆಟಗಾರ ಬಳಸಿಕೊಳ್ಳಲಿದ್ದಾನೆ ಎಂಬುದನ್ನು ಕಾದುನೋಡಬೇಕಿದೆ. ಆಸೀಸ್ ತಂಡದ ಆಡಂ ಜಂಪಾ ಅವರ ಮೈದಾನಕ್ಕೆ ಮರಳುವ ನಿರೀಕ್ಷೆ ಇದೆ. ಬ್ಯಾಟರ್ಗಳು ಭಾರತೀಯ ಬೌಲರ್ಗಳ ರಣ ತಂತ್ರವನ್ನು ಮೆಟ್ಟಿನಿಂತು ಬಿಗ್ ಇನಿಂಗ್ಸ್ ಕಟ್ಟಲು ಪ್ಲ್ಯಾನ್ ಮಾಡಿಕೊಂಡಿದೆ.