
ಹೊಸದಿಲ್ಲಿ, ಜೂನ್ 12: ಇಡೀ ಕ್ರಿಕೆಟ್ ಜಗತ್ತೇ ಕಾದು ಕುಳಿತಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲಲಿದೆ ಎಂದು 1983ರಲ್ಲಿ ಭಾರತಕ್ಕೆ ಚೊಚ್ಚಲ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಭವಿಷ್ಯ ನುಡಿದಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
"ನಮ್ಮ ತಂಡ ಮೊದಲ ಎರಡು ಪಂದ್ಯಗಳನ್ನು ಗೆದ್ದು ವಿಶ್ವಕಪ್ನಲ್ಲಿ ಉತ್ತಮ ಆರಂಭ ಪಡೆದಿದೆ. ಹವಾಮಾನ ಯಾವುದೇ ತೊಂದರೆ ಕೊಡೆದೆ, ಭಾರತ ತಂಡ ಇಂಥದ್ದೇ ಪ್ರದರ್ಶನ ಮುಂದುವರಿಸಲಿ ಎಂದು ಆಶಿಸುತ್ತೇನೆ,'' ಎಂದು ಕಪಿಲ್ ದೇವ್ ಹೇಳಿದ್ದಾರೆ.
ಭಾರತ ತಂಡ ಜೂನ್ 16ರಂದು ಪಾಕಿಸ್ತಾನ ವಿರುದ್ಧ ತನ್ನ ನಾಲ್ಕನೇ ಲೀಗ್ ಪಂದ್ಯವನ್ನಾಡಲಿದ್ದು, ಇದಕ್ಕೂ ಮುನ್ನ ಗುರುವಾರ ನ್ಯೂಜಿಲೆಂಡ್ ಎದುರು ಮೂರನೇ ಲೀಗ್ ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಮಣಿಸಿರುವ ವಿರಾಟ್ ಕೊಹ್ಲಿ ಬಳಗ ಮುಂದಿನ ಎರಡು ಪಂದ್ಯಗಳಲ್ಲೂ ಗೆಲ್ಲುವ ಫೇವರಿಟ್ ಎನಿಸಿದೆ.
"ನನ್ನ ಕಾಲದಲ್ಲಿ ಇಂಡೊ-ಪಾಕ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನೇ ಗೆಲ್ಲುವ ಫೇವರಿಟ್ ಎಂದು ಕರೆಯಲಾಗುತ್ತಿತ್ತು. ಆದರೀಗ ಭಾರತ ತಂಡ ಅತ್ಯುತ್ತಮವಾಗಿದೆ. ಶ್ರೇಯಾಂಕದಲ್ಲೂ ನಮ್ಮ ತಂಡ ಉನ್ನತ ಸ್ಥಾನದಲ್ಲಿದ್ದು, ಅತ್ಯುತ್ತಮ ಕ್ರಿಕೆಟ್ ಆಡುತ್ತಿದೆ,'' ಎಂದು ಹರಿಯಾಣ ಹರಿಕೇನ್ ಖ್ಯಾತಿಯ ಮಾಜಿ ಆಲ್ರೌಂಡರ್ 60 ವರ್ಷದ ಕಪಿಲ್ ಟೀಮ್ ಇಂಡಿಯಾ ಗೆಲ್ಲುವ ಫೇವರಿಟ್ ಎಂದು ಸೂಚಿಸಿದ್ದಾರೆ.
ಇದೇ ವೇಳೆ ಸೋಮವಾರವಷ್ಟೇ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರನ್ನು ಮತ್ತೊಮ್ಮೆ ಟೀಮ್ ಇಂಡಿದ ಜರ್ಸಿಯಲ್ಲಿ ನೋಡಬೇಕು ಎಂಬ ಬಯಕೆಯನ್ನೂ ಕಪಿಲ್ ವ್ಯಕ್ತ ಪಡಿಸಿದ್ದಾರೆ.
"ಯುವರಾಜ್ ಸಿಂಗ್ ಅವರಂತಹ ಆಟಗಾರನಿಗೆ ಕ್ರಿಕೆಟ್ ಅಂಗಣದಲ್ಲೇ ವಿದಾಯ ನೀಡಬೇಕು. ತಮ್ಮ ವೃತ್ತಿ ಬದುಕಿನಲ್ಲಿ ಅವರು ಅದ್ಭುತ ಕ್ರಿಕೆಟ್ ಆಡಿದ್ದಾರೆ. ಹೀಗಾಗಿ ಕೊನೆಯ ಬಾರಿ ಒಂದು ಪಂದ್ಯದಲ್ಲಿ ಅವರು ಆಡುವುದನ್ನು ನಾನು ನೋಡಬೇಕು. ಆದರೂ ಅವರ ಅದ್ಭುತ ವೃತ್ತಿ ಬದುಕಿಗೆ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ,'' ಎಂದಿದ್ದಾರೆ.
{headtohead_cricket_3_5}