
ಬೆಂಗಳೂರು, ಮಾರ್ಚ್ 08: ಪ್ರೊ. ಡಿ.ಬಿ ದೇವಧರ್ ಟ್ರೋಫಿಯ ಅಂತಿಮ ಹಣಾಹಣಿಯಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿದ ಭಾರತ 'ಬಿ' ತಂಡವು 2017-18ನೇ ಸಾಲಿನ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು 6ವಿಕೆಟ್ ಗಳಿಂದ ಸುಲಭವಾಗಿ ಮಣಿಸಿತು.
280ರನ್ ಗಳ ಗುರಿ ಬೆನ್ನು ಹತ್ತಿದ ಭಾರತ 'ಬಿ' ತಂಡಕ್ಕೆ ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್ ಹಾಗೂ ಎ.ಆರ್ ಈಶ್ವರನ್ ಅವರು ಉತ್ತಮ ಆರಂಭ ಒದಗಿಸಿದರು.
ಆದರೆ, ತಂಡದ ಸ್ಕೋರ್ 84ರನ್ ಆಗಿದ್ದಾಗ 58ರನ್ ಗಳಿಸಿದ್ದ ಗಾಯಕ್ವಾಡ್ ಅವರು ವಿಕೆಟ್ ಒಪ್ಪಿಸಿದರು. ನಂತರ ಬಂದ ಹನುಮ ವಿಹಾರಿ 21ರನ್ ಗಳಿಸಿ ಔಟಾದರು.
ಈಶ್ವರನ್ 69ರನ್ ಗಳಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 61ರನ್, ಮನೋಜ್ ತಿವಾರಿ ಅಜೆಯ 59ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕರ್ನಾಟಕದ ಪರ ಶ್ರೇಯಸ್ ಗೋಪಾಲ್ 2, ರೋನಿತ್ ಮೊರೆ, ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಗಳಿಸಿದರು.
ಸಮರ್ಥ್ ಶತಕ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕರ್ನಾಟಕಕ್ಕೆ ಮತ್ತೊಮ್ಮೆ ಆರ್ ಸಮರ್ಥ್ ಆಸರೆಯಾದರು. 120 ಎಸೆತಗಳಲ್ಲಿ 107ರನ್ (8 ಬೌಂಡರಿ, 1ಸಿಕ್ಸರ್) ಗಳಿಸಿದರೆ, ವಿಕೆಟ್ ಕೀಪರ್ ಸಿ.ಎಂ ಗೌತಮ್ 76ರನ್ ಹಾಗೂ ಶ್ರೇಯಸ್ ಗೋಪಾಲ್ 22 ಎಸೆತಗಳಲ್ಲಿ 38ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು. 50 ಓವರ್ ಗಳಲ್ಲಿ ಕರ್ನಾಟಕ 279/8 ಸ್ಕೋರ್ ಮಾಡಿತು. ಭಾರತ 'ಬಿ' ಪರ ಎಸ್. ಕೆ ಅಹ್ಮದ್ 49ರನ್ನಿತ್ತು 3 ಹಾಗೂ ಉಮೇಶ್ ಯಾದವ್ 48ರನ್ನಿತ್ತು 2 ವಿಕೆಟ್ ಗಳಿಸಿದರು.