ಶಾರ್ಜಾ, ಜನವರಿ 20: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎರಡು ವಿಕೆಟ್ ಗಳಿಂದ ಸೋಲಿಸಿ ಭಾರತ ಅಂಧರ ವಿಶ್ವಕಪ್ ಎತ್ತಿ ಹಿಡಿದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನ ಶಾರ್ಜಾದಲ್ಲಿ ನಡೆದ ಇಂದಿನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿತು. 40 ಓವರ್ ಗಳಲ್ಲಿ 308 ರನ್ ಕಲೆಹಾಕಿದ ಪಾಕಿಸ್ತಾನ ಭಾರತಕ್ಕೆ 309 ರನ್ ಗಳ ಕಠಿಣ ಗುರಿ ನೀಡಿತು.
ಪಾಕಿಸ್ತಾನ ನೀಡಿದ ಬೃಹತ್ ಮೊತ್ತದ ಗುರಿಯನ್ನು ಸಮರ್ಥವಾಗಿ ಬೆನ್ನಟ್ಟಿದ ಭಾರತ ತಂಡ 38.5 ಓವರ್ ಗಳಲ್ಲಿ 309 ರನ್ ಗಳಿಸಿ ಜಯಭೇರಿ ಬಾರಿಸಿತು.
ಭಾರತದ ಪರವಾಗಿ ಸುನಿಲ್ ರಮೇಶ್ ಮತ್ತು 62 ರನ್ ಗಳಿಸಿದ ತಂಡದ ನಾಯಕ ಅಜಯ್ ತಿವಾರಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ತಿವಾರಿ ವಿಕೆಟ್ ಒಪ್ಪಿಸಿದ್ದರಿಂದ ಭಾರತ 25 ಓವರ್ ಗಳಲ್ಲಿ 190 ರನ್ನಿಗೆ 3 ವಿಕೆಟ್ ಗಳನ್ನು ಕಳೆದುಕೊಂಡು ಸ್ವಲ್ಪ ಸಂಕಷ್ಟಕ್ಕೆ ಸಿಲುಕಿತು.
ಆಗ ಕ್ರೀಸಿಗಿಳಿದ ಸುನಿಲ್ ರಮೇಶ್ 93 ರನ್ನುಗಳನ್ನು ಸೇರಿಸಿ ಭಾರತ ತಂಡವನ್ನು ಜಯದತ್ತ ಕೊಂಡೊಯ್ದರು, ಸುನಿಲ್ ಔಟಾಗುವ ವೇಳೆ ಭಾರತ 35 ಓವರುಗಳಲ್ಲಿ 271 ರನ್ನುಗಳನ್ನು ಗಳಸಿ ಸುಸ್ಥಿತಿಯಲ್ಲಿತ್ತು.
ನಂತರ ಬಂದ ಬೌಲರ್ ಗಳು ಮತ್ತು ಕೆಳ ಕ್ರಮಾಂಕದ ಆಟಗಾರರು ತಮ್ಮ ಜವಾಬ್ದಾರಿ ನಿರ್ವಹಿಸಿದ್ದರಿಂದ ಭಾರತ ಅಗತ್ಯ ಗೆಲುವು ಸಾಧಿಸಿ ವಿಶ್ವಕಪ್ ಎತ್ತಿ ಹಿಡಿಯಿತು.
ಹಾಲಿ ಚಾಂಪಿಯನ್ ಭಾರತ ಈ ಬಾರಿಯ ಟೂರ್ನಿಯಲ್ಲಿ ವಿಶ್ವಕಪ್ ಎತ್ತಿ ಹಿಡಿಯುವ ನೆಚ್ಚಿನ ತಂಡವಾಗಿತ್ತು. ಅದಕ್ಕೆ ತಕ್ಕಂತೆ ಅದ್ಭುತ ಆಟವಾಡಿದ ಭಾರತ ಟೂರ್ನಿಯಲ್ಲಿ ಒಂದೂ ಸೋಲು ಕಾಣದೆ ವಿಶ್ವಕಪ್ ಎತ್ತಿ ಹಿಡಿದಿದೆ.