ಭಾರತ ಮತ್ತು ಪಾಕಿಸ್ತಾನ ತಂಡಗಳು ಫೆಬ್ರವರಿ 23 ರಂದು ದುಬೈನಲ್ಲಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗಲಿವೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕೂಡ ಉಭಯ ತಂಡಗಳ ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಾಕಿಸ್ತಾನ ತಂಡವು ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತರೆ, ಬಾಂಗ್ಲಾದೇಶ ವಿರುದ್ಧದ ಗೆಲುವಿನ ನಂತರ ಟೀಮ್ ಇಂಡಿಯಾದ ಮನೋಸ್ಥೈರ್ಯ ಹೆಚ್ಚಾಗಿದೆ. ಪಾಕಿಸ್ತಾನ ಸೋಲಿನೊಂದಿಗೆ ಆರಂಭಿಸಿದ್ದರೂ, ಆತಿಥೇಯ ತಂಡದ ವಿರುದ್ಧ ಬಾಂಗ್ಲಾದೇಶ ಪಂದ್ಯದಲ್ಲಿ ಮಾಡಿದ ಮೂರು ತಪ್ಪುಗಳನ್ನು ಟೀಮ್ ಇಂಡಿಯಾ ಪುನರಾವರ್ತಿಸಿದರೆ, ಸೋಲು ಎದುರಿಸಬೇಕಾಗಬಹುದು.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಡುತ್ತಿರುವ ಭಾರತ ತಂಡವು ಬಾಂಗ್ಲಾದೇಶವನ್ನು 6 ವಿಕೆಟ್ಗಳಿಂದ ಸೋಲಿಸಿ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಶುಭಮನ್ ಗಿಲ್ (ಅಜೇಯ 101) ಮತ್ತು ಮೊಹಮ್ಮದ್ ಶಮಿ (5 ವಿಕೆಟ್) ಟೀಮ್ ಇಂಡಿಯಾದ ಗೆಲುವಿನ ಹೀರೋಗಳಾದರು.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಟೀಮ್ ಇಂಡಿಯಾ ಆಟಗಾರರು ನಿರಾಶೆಗೊಂಡಿದ್ದರು. ವಿಶೇಷವಾಗಿ ನಾಯಕ ರೋಹಿತ್ ಶರ್ಮಾ ಸುಲಭ ಕ್ಯಾಚ್ ಕೈಬಿಟ್ಟರು, ಇದರಿಂದಾಗಿ ಅಕ್ಸರ್ ಪಟೇಲ್ ತಮ್ಮ ಹ್ಯಾಟ್ರಿಕ್ ವಿಕೆಟ್ ದಾಖಲೆ ತಪ್ಪಿಸಿಕೊಂಡರು. ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್, ಜಾಕರ್ ಅಲಿ ಕ್ಯಾಚ್ ಅನ್ನು ಕೈಬಿಟ್ಟರು. ಇದರ ಲಾಭ ಪಡೆದ ಅಲಿ 68 ರನ್ ಗಳಿಸಿದರು. ಮತ್ತೊಂದೆಡೆ ತೌಹೀದ್ ಹೃದಯಾ ಅವರ ಕ್ಯಾಚ್ ಅನ್ನು ಹಾರ್ದಿಕ್ ಪಾಂಡ್ಯ ಬಿಟ್ಟರು. ಅವರು ಕೂಡ ಸಂಪೂರ್ಣ ಲಾಭವನ್ನು ಪಡೆದು ಶತಕ ಗಳಿಸಿದರು. ಈಗ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಂತಹ ಫೀಲ್ಡಿಂಗ್ ಟೀಮ್ ಇಂಡಿಯಾಕ್ಕೆ ದುಬಾರಿಯಾಗಿ ಪರಿಣಮಿಸಬಹುದು.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಸ್ಪಿನ್ ಬೌಲರ್ಗಳ ವಿರುದ್ಧ ಹೆಣಗಾಡುವುದು ಕಂಡುಬಂದಿತು. ಬಾಂಗ್ಲಾದೇಶದ ಮೆಹದಿ ಹಸನ್ ಮಿರಾಜ್ ಮತ್ತು ರಿಷದ್ ಹೊಸೇನ್ ಒಟ್ಟು 20 ಓವರ್ಗಳ ಸ್ಪಿನ್ ಬೌಲಿಂಗ್ ಮಾಡಿದರು. ಈ ವೇಳೆ ಟೀಮ್ ಇಂಡಿಯಾ ಬ್ಯಾಟರ್ಗಳು 75 ರನ್ಗಳನ್ನು ಸೇರಿಸಿದರು. ರನ್ ರೇಟ್ 4 ಕ್ಕಿಂತ ಕಡಿಮೆಯಿತ್ತು. ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಸ್ಪಿನ್ನರ್ಗಳನ್ನು ಎದುರಿಸಬೇಕಾಗುತ್ತದೆ. ಪಾಕಿಸ್ತಾನವು ಅಬ್ರಾರ್ ಅಹ್ಮದ್ ಸೇರಿದಂತೆ ಹಲವು ಸ್ಪಿನ್ ಬೌಲಿಂಗ್ ಆಯ್ಕೆಗಳನ್ನು ಹೊಂದಿದೆ. ಹೀಗಾಗಿ ಪಾಕಿಸ್ತಾನ ಸ್ಪಿನ್ನರ್ಗಳ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್ಗಳು ಅಬ್ಬರಿಸಬೇಕಾಗಿದೆ.

ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್ಗಳು ಸರಿಯಾದ ಶಾಟ್ ಆಯ್ಕೆಯನ್ನು ಮಾಡಬೇಕಾಗುತ್ತದೆ. ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹೆಚ್ಚಿನ ಬ್ಯಾಟರ್ಗಳಿಂದ ಇದು ಕಂಡುಬಂದಿಲ್ಲ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ಆದಾಗ್ಯೂ, ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಿರುವಾಗ, ಅವರು 41 ರನ್ ಗಳಿಸಿ ಔಟಾದರು. ಅವರಲ್ಲದೆ, ಶ್ರೇಯಸ್ ಅಯ್ಯರ್ ಕೂಡ ದೊಡ್ಡ ಹೊಡೆತದಿಂದಾಗಿ ಔಟಾದರು. ಅಕ್ಸರ್ ಪಟೇಲ್ ವಿಷಯದಲ್ಲೂ ಇದೇ ರೀತಿ ಕಂಡ ಬಂತು. ಕೆಎಲ್ ರಾಹುಲ್ ಅವರಿಗೆ ಜೀವದಾನದ ಅವಕಾಶ ಸಿಗದಿದ್ದರೆ, ಭಾರತ ತಂಡಕ್ಕೆ ಸಮಸ್ಯೆಗಳು ಹೆಚ್ಚಾಗುತ್ತಿದ್ದವು. ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್ಗಳ ಈ ತಪ್ಪುಗಳು ತಂಡಕ್ಕೆ ದುಬಾರಿಯಾಗಿ ಪರಿಣಮಿಸಬಹುದು.