ಟೀಮ್ ಇಂಡಿಯಾ ಸದ್ಯ ಏಷ್ಯಾ ಕಪ್ ಟಿ20 ಟೂರ್ನಿಗೆ ಸಿದ್ಧತೆ ನಡೆಸುತ್ತಿದೆ. ಕಳೆದ ಮಂಗಳವಾರ ಬಿಸಿಸಿಐ ಆಯ್ಕೆ ಸಮಿತಿ ಈ ಬಿಗ್ ಟೂರ್ನಿಗೆ ತಂಡವನ್ನು ಪ್ರಕಟಿಸಿತು. ಈ ವೇಳೆ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್, ನಾಯಕ ಸೂರ್ಯಕುಮಾರ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಸೂರ್ಯಕುಮಾರ್ ಯಾದವ್ ಕೈಗೆ ಕಟ್ಟಿಕೊಂಡಿದ್ದ ವಾಚ್ ಮೇಲೆ ಎಲ್ಲರ ಕಣ್ಣುಗಳು ಬಿದ್ದವು. ಸೂರ್ಯ ಕಟ್ಟಿಕೊಂಡಿರುವ ವಾಚ್ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾದ ಆಟಗಾರರ ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲೂ ಅಭಿಮಾನಿಗಳ ಬಳಗ ಇದೆ. ಈ ಆಟಗಾರರು ಏನೇ ಮಾಡಿದರೂ ಅದರ ಮೇಲೆ ಅಭಿಮಾನಿಗಳು ಕಣ್ಣು ನೆಟ್ಟಿರುತ್ತಾರೆ. ಇದೇ ವರ್ಷದ ಆರಂಭದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಸಹ ಕಟ್ಟಿಕೊಂಡಿದ್ದು ವಾಚ್ ಎಲ್ಲರ ಗಮನ ಸೆಳೆದಿತ್ತು. ಆ ವಾಚ್ ಬೆಲೆ ಏನು ಎಂಬ ಬಗ್ಗೆ ಮಾಹಿತಿಯನ್ನು ಪತ್ತೆ ಹಚ್ಚಲು ಅಭಿಮಾನಿಗಳು ಮುಂದಾದರು. ಈಗ ಸೂರ್ಯ ಅವರು ಕಟ್ಟಿಕೊಂಡಿದ್ದ ವಾಚ್ ಅಭಿಮಾನಿಗಳ ಮನ ಕದ್ದಿದೆ.

ಸೂರ್ಯಕುಮಾರ್ ಯಾದವ್ ಪತ್ರಿಕಾಗೋಷ್ಠಿಯ ವೇಳೆ ಕಟ್ಟಿಕೊಂಡಿದ್ದ ವಾಚ್ ಕಿತ್ತಳೆ ಬಣ್ಣದಿಂದ ಕೂಡಿತ್ತು. ಇದರ ಪಟ್ಟಿ ಕೇಸರಿ ಬಣ್ಣದ್ದಾಗಿದೆ. ಈ ಕೈ ಗಡಿಯಾರದಲ್ಲಿ ರಾಮ ಮಂದಿರ, ಶ್ರೀರಾಮ, ಹನುಮನ ಚಿತ್ರಗಳು ಇವೆ. ಅಷ್ಟೇ ಅಲ್ಲದೆ ಇದರ ಡಯಲ್ ಮೇಲೆ ಜೈ ಶ್ರೀರಾಮ ಎಂದು ಬರೆಯಲಾಗಿದೆ. ಇದು ಲಿಮಿಟೇಡ್ ಎಡಿಷನ್ ವಾಚ್ ಆಗಿದೆ.
ಈ ಗಡಿಯಾರವನ್ನು ಸ್ವಿಟ್ಜರ್ಲೆಂಡ್ನ ಜಾಕೋಬ್ & ಕಂಪನಿ ತಯಾರಿಸಿದೆ. ಈ ಗಡಿಯಾರವನ್ನು ಎಪಿಕ್ ಎಕ್ಸ್ ಸ್ಕೆಲಿಟನ್ ರಾಮ ಜನ್ಮಭೂಮಿ ಟೈಟಾನಿಯಂ ಆವೃತ್ತಿಯ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿ ಕೇಲವ 49 ವಾಚ್ಗಳನ್ನು ಸಿದ್ಧಪಡಿಸಿದೆ. ಇದರಲ್ಲಿ ಒಂದು ಸೂರ್ಯ ಅವರ ಬಳಿ ಇದೆ. ಈ ಸೀಮಿತ ಆವೃತ್ತಿಯ ಗಡಿಯಾರದ ಬೆಲೆ 34 ರಿಂದ 65 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸೆಪ್ಟಂಬರ್ 10 ರಂದು ಟೀಮ್ ಇಂಡಿಯಾ ಏಷ್ಯಾ ಕಪ್ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಏಷ್ಯಾ ಕಪ್ ಸೆ.9ರಿಂದ ಆರಂಭವಾಗಲಿದೆ. ಸೆಪ್ಟಂಬರ್ 14 ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಯುಎಇನಲ್ಲಿ ಕಾದಾಟ ನಡೆಸಲಿದೆ. ಲೀಗ್ ಹಂತದಲ್ಲಿ ಭಾರತ ತನ್ನ ಕೊನೆಯ ಪಂದ್ಯವನ್ನು ಸೆ.19 ರಂದು ಆಡಲಿದೆ. ಬಳಿಕ ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಲಿವೆ. ಈ ಹಂತದಲ್ಲಿ ಅಗ್ರ 2 ತಂಡಗಳು ಸೆ.29 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿವೆ. ಈ ಬಿಗ್ ಟೂರ್ನಿಗೆ ಟೀಮ್ ಇಂಡಿಯಾದ ಉಪನಾಯಕತ್ವದ ಜವಾಬ್ದಾರಿಯನ್ನು ಶುಭಮನ್ ಗಿಲ್ ಅವರಿಗೆ ನೀಡಲಾಗಿದೆ. ಗಿಲ್ ಒಂದು ವರ್ಷದ ಬಳಿಕ ಚುಟುಕು ಫಾರ್ಮೆಟ್ಗೆ ಎಂಟ್ರಿ ನೀಡಿದ್ದಾರೆ.