ಕೇಪ್ ಟೌನ್, ಡಿಸೆಂಬರ್ 28: ಜನವರಿ 5ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಆಘಾತವಾಗಿದೆ. ಉತ್ತಮ ಲಯದಲ್ಲಿರುವ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಗಾಯಾಳುವಾಗಿದ್ದು, ಮೊದಲ ಪಂದ್ಯ ಆಡುವುದು ಅನುಮಾನ ಎನಿಸಿದೆ.
ಶಿಖರ್ ಧವನ್ ಆಡದಿದ್ದರೆ ಅವರ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸುವ ಎಲ್ಲಾ ಸಾಧ್ಯತೆಗಳಿವೆ.

ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿರುವ ಶಿಖರ್ ಅವರಿಗೆ ಸದ್ಯ ಫಿಸಿಯೋ ಪ್ಯಾಟ್ರಿಕ್ ಫರ್ಹಾಟ್ ಅವರು ಚಿಕಿತ್ಸೆ ನೀಡುತ್ತಿದ್ದು, ಎಂಆರ್ಐ ಸ್ಕ್ಯಾನ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಸೂಚಿಸಿದ್ದಾರೆ.
'ಶಿಖರ್ ಬಗ್ಗೆ ಫಿಸಿಯೋ ಇನ್ನೂ ತಮ್ಮ ವರದಿಯನ್ನು ನೀಡಿಲ್ಲ. ತಂಡದ ಜತೆ ಶಿಖರ್ ಅವರು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರ ಗಾಯದ ತೀವ್ರತೆ ಬಗ್ಗೆ ವರದಿ ಬಂದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಅಧಿಕಾರಿಗಳು ಪಿಟಿಐಗೆ ತಿಳಿಸಿದರು.
ಜನವರಿ 5ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಮೂರು ಟೆಸ್ಟ್ ಪಂದ್ಯಗಳ ಸರಣಿ ನಂತರ 6 ಏಕದಿನ ಹಾಗೂ 3 ಟಿ20ಐ ಸರಣಿ ನಡೆಯಲಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 8ಇನ್ನಿಂಗ್ಸ್ ಗಳಿಂದ 2 ಶತಕ ಸೇರಿದಂತೆ 550ರನ್ ಗಳಿಸಿದ್ದ ಶಿಖರ್ ಅವರು ಮುರಳಿ ವಿಜಯ್ ಜತೆಗೂಡಿ ಇನ್ನಿಂಗ್ಸ್ ಆರಂಭಿಸಲು ಆಯ್ಕೆಯಾಗಿದ್ದಾರೆ.