ವಿಶ್ವ ಕ್ರಿಕೆಟ್ನಲ್ಲಿ ಭಾರತವನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗೂ ಇಲ್ಲ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ವಿಶ್ವ ಕ್ರಿಕೆಟ್ ಪ್ರೇಮಿಗಳ ಚಿತ್ತ ಈಗ ಐಪಿಎಲ್ ಮೇಲಿದೆ. ಅದಾದ ನಂತರ ಟಿ20 ವಿಶ್ವಕಪ್ ಕೂಡ ಆರಂಭವಾಗಲಿದ್ದು ಈ ಮಹತ್ವದ ಟೂರ್ನಿಯ ಆರಂಭಕ್ಕೆ ಈಗ ದಿನಗಣನೆ ಆರಂಭವಾಗಿದೆ.ಭಾರತದಲ್ಲಿ ನಡೆಯಬೇಕಿದ್ದು ಈ ಎರಡು ಟೂರ್ನಿಗಳು ಕೂಡ ಕೊರೊನಾವೈರಸ್ನ ಆತಂಕದ ಕಾರಣದಿಂದಾಗಿ ಯುಎಇನಲ್ಲಿ ನಡೆಯುತ್ತಿದೆ. ಇಂಥಾ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ವಿಶ್ವ ಕ್ರಿಕೆಟ್ಅನ್ನು ಭಾರತ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ.
ವಿಶ್ವ ಕ್ರಿಕೆಟ್ನ ಮೇಲೆ ಭಾರತ ಅತಿಯಾಗಿ ನಿಯಂತ್ರಣ ಸಾಧಿಸುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ "ಕ್ರಿಕೆಟ್ ಆಟದಲ್ಲಿ ಈಗ ಹಣ ಪ್ರಧಾನ ಪಾತ್ರವಹಿಸುತ್ತಿದೆ. ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ನಂತಾ ದೇಶಗಳು ಭಾರತದ ಪ್ರವಾಸವನ್ನು ರದ್ದುಪಡಿಸುವ ಧೈರ್ಯವನ್ನು ಮಾಡಲಾರದು. ಯಾಕೆಂದರೆ ಭಾರತ ಕ್ರಿಕೆಟ್ಅನ್ನು ನಿಯಂತ್ರಣ ಮಾಡುತ್ತಿದೆ" ಎಂದು ಇಮ್ರಾನ್ ಖಾನ್ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧ ಪಾಕಿಸ್ತಾನದ ನೆಲದಲ್ಲೇ ಸರಣಿಯನ್ನಾಡಲು ನಿರ್ಧರಿಸಿ ಪ್ರವಾಸ ಕೈಗೊಂಡ ಬಳಿಕ ಸರಣಿ ಆರಂಭದ ಕೊನೆಯ ಕ್ಷಣದಲ್ಲಿ ಹಿಂದಕ್ಕೆ ಸರಿದಿತ್ತು. ಸುರಕ್ಷತೆಯ ಕಾರಣವನ್ನು ನೀಡಿ ಸರಣಿಯಿಂದ ಹಿಂದಕ್ಕೆ ಸರಿದಿತ್ತು ನ್ಯೂಜಿಲೆಂಡ್. ಕಿವೀಸ್ ಮಂಡಳಿಯ ಈ ನಿರ್ಧಾರ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರೀ ಮುಜುಗರ, ಆಘಾತ ಹಾಗೂ ಆರ್ಥಿಕವಾಗಿಯೂ ಸಂಕಷ್ಟವನ್ನುಂಟು ಮಾಡಿತ್ತು. ಆದಾದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಕೂಡ ಪಾಕಿಸ್ತಾನ ವಿರುದ್ಧದ ಚುಟುಕು ಸರಣಿಯನ್ನು ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿತ್ತು. ಈ ಬೆಳವಣಿಗೆಯನ್ನು ಉದ್ದೇಶಿಸಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ.
ಇಮ್ರಾನ್ ಖಾನ್ ಮುಂದುವರಿದು ಮಾತನಾಡುತ್ತಾ, ಈ ಬೆಳವಣಿಗೆಯಲ್ಲಿ ಇಂಗ್ಲೆಂಡ್ ತಂಡವು ಕೂಡ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸುವ ಮೂಲಕ ತನ್ನನ್ನು ನಿರಾಸೆಗೊಳಿಸಿತು ಎಂದಿದ್ದಾರೆ ಇಮ್ರಾನ್ ಖಾನ್. ನ್ಯೂಜಿಲೆಂಡ್ ತಂಡ ಸರಣಿಯಿಂದ ಹಿಂದಕ್ಕೆ ಸರಿದ ಕೆಲವೇ ದಿನಗಳ ಅಂತರದಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಕೂಡ ತನ್ನ ನಿರ್ಧಾರ ಪ್ರಕಟಿಸಿತ್ತು. ಆದರೆ ಇಂಗ್ಲೆಂಡ್ ಭದ್ರತೆಯ ಕಾರಣದ ಬದಲಾಗಿ ಆಟಗಾರರ ಯೋಗಕ್ಷೇಮವನ್ನು ಮುಂದಿಟ್ಟು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿತ್ತು.
'ಮಿಡಲ್ ಈಸ್ಟ್ ಐ" ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಈ ಮಾತುಗಳನ್ನು ಹೇಳಿದ್ದಾರೆ. "ಹಣ ಈಗ ಕ್ರಿಕೆಟ್ನಲ್ಲಿ ದೊಡ್ಡ ಆಟಗಾರನ ಪಾತ್ರವಹಿಸಿದೆ. ಅದು ಆಟಗಾರರಿಗೆ ಅಥವಾ ಕ್ರಿಕೆಟ್ ಮಂಡಳಿಗಳಿಗೆ ಎರಡಕ್ಕೂ ಇದು ಅನ್ವಯಿಸುತ್ತದೆ. ಈಗ ಹಣ ಭಾರತದಲ್ಲಿದೆ. ಹಾಗಾಗಿ ವಿಶ್ವ ಕ್ರಿಕೆಟ್ಅನ್ನು ಭಾರತ ಈಗ ನಿಯಂತ್ರಣ ಮಾಡುತ್ತಿದೆ. ಅಂದರೆ ಅವರು ಏನು ಹೇಳಿದರೂ ಏನು ಮಾಡಿದರೂ ನಡೆಯುತ್ತದೆ. ಹಾಗಾಗಿ ಭಾರತದ ವಿರುದ್ಧ ನಿಲ್ಲಲು ಬೇರೆ ಮಂಡಳಿಗಳಿಗೆ ಧೈರ್ಯವಿಲ್ಲ" ಎಂದು ಇಮ್ರಾನ್ ಖಾನ್ ಹೇಳಿಕೆಯನ್ನು ನೀಡಿದ್ದಾರೆ.
ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಪಾಕಿಸ್ತಾನ ಪ್ರವಾಸದಿಂದ ಹಿಂದಕ್ಕೆ ಸರಿದ ಬಳಿಕ ಪಾಕಿಸ್ತಾನದ ಕೆಲ ಸಚಿವರು ಹಾಗೂ ಮಾಜಿ ಕ್ರಿಕೆಟಿಗರು ಈ ವಿಚಾರವಾಗಿ ಭಾರತವನ್ನು ಎಳೆದುತರುವ ಪ್ರಯತ್ನ ಮಾಡಿದ್ದರು. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಕ್ ಪ್ರವಾಸವನ್ನು ರದ್ದು ಪಡಿಸುವ ನಿರ್ಧಾರದ ಪ್ರಕಟಿಸಿದ ಬಳಿಕ ಈ ವಿಚಾರವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮೇಲೆ ಆರೋಪವನ್ನು ಕೂಡ ಮಾಡಿದ್ದರು.
ಇನ್ನು ಪಾಕಿಸ್ತಾನದ ಈ ಆರೋಪಕ್ಕೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸುತ್ತಾ ಪಾಕಿಸ್ತಾನಕ್ಕೆ ತನ್ನಲ್ಲಾಗುವ ಎಲ್ಲಾ ಸಣ್ಣ ಹಾಗೂ ದೊಡ್ಡ ವಿಚಾರಗಳಲ್ಲಿ ಯಾವುದೇ ಸಾಕ್ಷ್ಯಗಳು ಇಲ್ಲದೆ ಭಾರತವನ್ನು ಎಳೆದು ತರುವ ಚಟವಿದೆ ಎಂದಿದ್ದರು. "ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಮುಖ್ಯಸ್ಥ ರಮೀಜ್ ರಾಜಾಗೆ ಒಳ್ಳೆಯದಾಗಲಿ ಎಂದು ನಾವು ಆಶಿಸುತ್ತೇವೆ. ಅವರ ನೇತೃತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ಉನ್ನತ ಸ್ಥಾನಕ್ಕೇರಯವಂತಾಗಲಿ. ಆದರೆ ಈ ಸಂದರ್ಭದಲ್ಲಿ ಒಮದು ಸಂಗತಿಯನ್ನು ನಾವು ಸ್ಪಷ್ಟಪಡಿಸುತ್ತೇವೆ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪಾಕಿಸ್ತಾನ ಪ್ರವಾಸವನ್ನು ರದ್ದು ಪಡಿಸಿರುವ ಹಿಂದೆ ನಮ್ಮ ಯಾವುದೇ ಪಾತ್ರ ಇಲ್ಲ" ಎಂದು ಐಎಎನ್ಎಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದರು.
ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಮುಖ್ಯಸ್ಥ ರಮೀಜ್ ರಾಜಾ ಕೂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯೆಯ ಅರ್ಥದಲ್ಲಿಯೇ ಹೇಳಿಕೆಯನ್ನು ನೀಡಿದ್ದರು. "ಐಸಿಸಿ ಈಗ ಏಷ್ಯಾ ಹಾಗೂ ಪಾಶ್ಚಿಮಾತ್ಯ ಎಂದು ಎರಡು ವಿಭಾಗಗಳಾಗಿದೆ. ಇದರ 90ರಷ್ಟು ಆದಾಯ ಭಾರತದಿಂದಲೇ ಬರುತ್ತದೆ. ಹೀಗಾಗಿ ಪಾಕಿಸ್ತಾನದ ಕ್ರಿಕೆಟ್ ಚಟುವಟಿಕೆಗಳು ಭಾರತದ ಹಣದಿಂದಲೇ ನಡೆಯುತ್ತಿದೆ. ನಾಳೆ ಭಾರತದ ಪ್ರದಾನಿ ಪಾಕಿಸ್ತಾನಕ್ಕೆ ಯಾವುದೇ ರೀತಿಯಲ್ಲಿಯೂ ಹಣಕಾಸಿನ ಸಹಾಯ ದೊರೆಯಬಾರದು ಎಂದು ನಿರ್ಧರಿಸಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕುಸಿದು ಹೋಗಲಿದೆ" ಎಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications